Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಲ್ಲು ತರೋರು, ಗುಡಿ ಕಟ್ಟುವವರಿಗೇನೆ ದೇವಸ್ಥಾನದ ಒಳಗೆ ಅವಕಾಶವಿಲ್ಲ : ಸಿಎಂ ಸಿದ್ದರಾಮಯ್ಯ ಬೇಸರ

09:43 PM Jan 15, 2024 IST | suddionenews
Advertisement

ಬೆಂಗಳೂರು ಜ 15: ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು, ವಿಗ್ರಹ ತರೋರು ನೀವು. ಆದರೆ, ದೇವಸ್ಥಾನ ಪ್ರವೇಶಕ್ಕೆ ಮಾತ್ರ ಭೋವಿಗಳಿಗೆ ಅವಕಾಶ ಇಲ್ಲ ಎಂದರೆ ಅದನ್ನು ಒಪ್ಪಿಕೊಳ್ಳಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

"ಸಬ್ ಕಾ ಸಾಥ್-ಸಬ್ ಕಾ ವಿಕಾಸ್" ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ಇವತ್ತು ನಡೆಯುತ್ತಿದೆ. ಆದರೆ ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಮನುಷ್ಯರನ್ನು ಜಾತಿ-ಧರ್ಮದ ಆಧಾರದಲ್ಲಿ ದ್ವೇಷಿಸುವುದು ಅಮಾನವೀಯವಾದದ್ದು ಎಂದು ವಿವರಿಸಿದರು.

Advertisement

ವೈಚಾರಿಕ-ವೈಜ್ಞಾನಿಕ ಸಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಹೋರಾಡಿದ್ದರು. ಶರಣರು ನುಡಿದಂತೆ ನಡೆದರು. ಹೇಳಿದಂತೆಯೇ ತಮ್ಮ ಬದುಕನ್ನು ಆಚರಿಸಿದರು ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.

ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಒಪ್ಪಬಾರದು. ಅವಕಾಶ ಸಿಕ್ಕವರು ಮುಂದೆ ಬಂದರು, ಅವಕಾಶ ಇಲ್ಲದವರು ಹಿಂದುಳಿದರು. ಹಣೆಬರಹ ಎನ್ನುವುದೆಲ್ಲಾ ಬೋಗಸ್. ನಮ್ಮ ಊರಿನ ಶಾನುಬೋಗರು ನಮ್ಮ ಜಾತಿಯವರು ಕಾನೂನು ಓದಬಾರದು ಎಂದು ನನ್ನ ಅಪ್ಪನಿಗೆ ಒಪ್ಪಿಸಿಬಿಟ್ಟಿದ್ದರು. ಆದರೆ ನಾನು ಹಠ ತೊಟ್ಟು ಕಾನೂನು ಪದವಿ ಪಡೆದೆ. ಈಗ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು. ಅವರು ಸರಿಯಾಗಿ ದಾರಿ ತಪ್ಪಿಸಿತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಕರೆ ನೀಡಿದರು.

ಕಲ್ಲು ಹೊಡೆಯೋರು ನೀವು, ಗುಡಿ ಕಟ್ಟೋರು ನೀವು, ವಿಗ್ರಹ ಹೊರುವವರು ನೀವು. ಆದರೆ, ದೇವಸ್ಥಾನ ಪ್ರವೇಶಕ್ಕೆ ಮಾತ್ರ ಭೋವಿಗಳಿಗೆ ಅವಕಾಶ ಇಲ್ಲ ಎಂದರೆ ಅದನ್ನು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇದಕ್ಕೆ ನಾರಾಯಣಗುರುಗಳು ಹೇಳಿದ ಮಾರ್ಗ ಅನುಸರಿಸಬೇಕು. ನಿಮ್ಮನ್ನು ಒಳಗೆ ಸೇರಿಸದ ದೇವಸ್ಥಾನಗಳನ್ನು ನೀವೇ ತಿರಸ್ಕರಿಸಿ ನಿಮ್ಮದೇ ದೇವಸ್ಥಾನ ನಿರ್ಮಿಸಿಕೊಳ್ಳಿ ಎಂದು ಅವರು ಕರೆ ನೀಡಿದ್ದನ್ನು ವಿವರಿಸಿದರು.

ಯಾವ ಕೆಲಸವೂ ಮೇಲು ಅಲ್ಲ, ಕೀಳೂ ಅಲ್ಲ. ಈ ಕಾರಣಕ್ಕೇ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಎಲ್ಲರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು, ಅದನ್ನು ಎಲ್ಲರಿಗೂ ವಿತರಿಸಬೇಕು ಎನ್ನುವುದು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರಕಾರದ ಕಾರ್ಯಕ್ರಮಗಳೂ ಈ ಆಶಯಕ್ಕೆ ಪೂರಕವಾಗಿವೆ ಎಂದರು.

ಸಾಮಾಜಿಕ, ಆರ್ಥಿಕ ಚಟುವಟಿಕೆಗಳು ಎಲ್ಲಾ ಸಮುದಾಯಕ್ಕೆ ಸಿಕ್ಕರೆ ಮಾತ್ರ ಜಾತಿಗ್ರಸ್ಥ ಸಮಾಜ ಚಲನಶೀಲವಾಗುತ್ತದೆ. ಇಲ್ಲವಾದರೆ ಸ್ಥಗಿತಗೊಂಡ ಸಮಾಜ ಆಗುತ್ತದೆ ಎಂದು ಎಚ್ಚರಿಸಿದರು.

ಭೋವಿ ಸಮುದಾಯದ ಬೇಡಿಕೆಯಂತೆ ಅಧ್ಯಯನ ಪೀಠ ಸ್ಥಾಪನೆ ಸೇರಿ ನನ್ನ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶಾಸಕರಾದ ಎಂ.ಚಂದ್ರಪ್ಪ, ರಾಘವೇಂದ್ರ ಹಿಟ್ನಾಳ್ ಸೇರಿ ಹಲವು ಗಣ್ಯರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Advertisement
Tags :
bangaloreCM SiddaramaiahCM Siddaramaiahainside the templenot allowedStone pelterstemple buildersದೇವಸ್ಥಾನದ ಒಳಗೆ ಅವಕಾಶವಿಲ್ಲಬೆಂಗಳೂರುಬೇಸರಸಿ ಎಂ ಸಿದ್ದರಾಮಯ್ಯಸಿಎಂ ಸಿದ್ದರಾಮಯ್ಯ
Advertisement
Next Article