Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ :ಮುಖ್ಯಮಂತ್ರಿ ಸಿದ್ದರಾಮಯ್ಯ

02:47 PM Aug 30, 2024 IST | suddionenews
Advertisement

 

Advertisement

ಹುಬ್ಬಳ್ಳಿ , ಆಗಸ್ಟ್ 30 : ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ನ ಶಾಸಕರು ದುಡ್ಡಿನ ಆಸೆಗೆ ಎಂದೂ ಬಲಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Advertisement

ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭವಲ್ಲ : ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ಗೆ ಬಿಜೆಪಿಯವರು ಕೈಹಾಕಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ನಿಜ ಎಂದು ಗಣಿಗ ಶಾಸಕರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಎಂದಿಗೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಾರದೇ, ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ 2008, 2018 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರು ,ಇಂತಹ ಪ್ರಯತ್ನಕ್ಕೆ ಈಗಲೂ ಕೈಹಾಕಿದ್ದು, 136 ಶಾಸಕರ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭದ ಮಾತಲ್ಲ ಎಂದರು.

ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ :

ಸಿದ್ದರಾಮಯ್ಯನವರ ಮೇಲೆ ಮಾತ್ರ ಇಂತಹ ಪಿತೂರಿ ನಡೆಯುತ್ತಿರುವ ಕಾರಣವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೆರಡೂ ಸೇರಿ , ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಬಾಕಿ ಪ್ರಕರಣಗಳಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಲು ರಾಜ್ಯಪಾಲರಿಗೆ ಒತ್ತಾಯ :

ಮುಡಾ ಪ್ರಕರಣದಲ್ಲಿ ಸಿಎಂ ಅವರು ರಾಜಿನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ತಿಳಿಸಿದರು ಎಂದು ರಾಜಿನಾಮೆ ನೀಡಲು ಸಾಧ್ಯವೇ ? ನಾಳೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಆದೇಶವನ್ನು ನಿರೀಕ್ಷಿಸಲಾಗಿದೆ. ನಾಳೆ ಸರ್ಕಾರದ ಎಲ್ಲ ಸಚಿವರು, ಎಂ ಎಲ್ ಎಗಳು, ಎಂಎಲ್ ಸಿ ಗಳು ರಾಜ್ಯಪಾಲರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ,ಜನಾರ್ಧನ ರೆಡ್ಡಿ ನಿರಾಣಿ ಮೇಲಿನ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಾಜ್ಯಪಾಲರನ್ನು ಒತ್ತಾಯಿಸಲಿದ್ದಾರೆ. ಇವರೆಲ್ಲರ ಪ್ರಕರಣಗಳಲ್ಲಿ ವಿಚಾರಣೆಯಾಗಿ ಚಾರ್ಜುಶೀಟ್ ಹಾಕುವ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಅನುಮತಿ ಬಾಕಿ ಇದೆ ಎಂದು ತಿಳಿಸಿದರು.

ಪರಿಸರ ತೀರುವಳಿ ಬಂದ ತಕ್ಷಣ ಮಹಾದಾಯಿಗೆ ಚಾಲನೆ :

ಮಹಾದಾಯಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದವಿದೆ.ಆದರೆ ಕೇಂದ್ರದಿಂದ ಪರಿಸರ ತೀರುವಳಿ ನೀಡುವುದು ಬಾಕಿ ಇದ್ದು, ತೀರುವಳಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

16 ನೇ ಹಣಕಾಸು ಆಯೋಗ ರಾಜ್ಯದ ಅನುದಾನ ಕೊರತೆ ನೀಗಿಸುವ ವಿಶ್ವಾಸ :

ನಿನ್ನೆ 16 ನೇ ಹಣಕಾಸು ಆಯೋಗದವರೊಂದಿಗೆ ಸಭೆ ನಡೆದಿದ್ದು, ತೆರಿಗೆ ಹಂಚಿಕೆ ಹಾಗೂ ವಿಶೇಷ ಅನುದಾನಗಳ ಬಗ್ಗೆ ರಾಜ್ಯದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. 15 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದರ ಬಗ್ಗೆ ನವದೆಹಲಿಯಲ್ಲಿ ಸರಕಾರ ಪ್ರತಿಭಟನೆ ನಡೆಸಿತ್ತು. ಆಯೋಗ ಶಿಫಾರಸ್ಸು ಮಾಡಿದ್ದ 11495 ಕೋಟಿ ರೂ.ಗಳು ರಾಜ್ಯಕ್ಕೆ ಬಿಡುಗಡೆ ಆಗಿರಲಿಲ್ಲ. ರಾಜ್ಯಕ್ಕೆ ತೆರಿಗೆ ಹಂಚಿಕೆಯಾಗುತ್ತಿದ್ದ ತೆರಿಗೆ ಪ್ರಮಾಣ 4.713 ರಿಂದ 3.647 ಗೆ ಇಳಿದಿದ್ದು , 1.66 ರಷ್ಟು ಪ್ರಮಾಣ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಸುಮಾರ್ಉ 80,000 ಕೋಟಿ ರೂ. ನಷ್ಟವಾಗಿದೆ. ಈ ಕೊರತೆಯನ್ನು ಸರಿದೂಗಿಸಲು ನಿನ್ನೆ ನಡೆದ ಸಭೆಯಲ್ಲಿ ಆಯೋಗದವರಿಗೆ ವಿವರಿಸಲಾಗಿದೆ. 16 ನೇ ಹಣಕಾಸಿನ ಆಯೋಗದವರು ಹಿಂದಿನ ಹಣಕಾಸಿನ ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅನುದಾನದ ಕೊರತೆಯನ್ನು ಸರಿದೂಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ನಟ ದರ್ಶನ್ ಪ್ರಕರಣ: ತಪ್ಪೆಸೆಗಿರುವ ಅಧಿಕಾರಿಗಳ ಅಮಾನತು :

ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ನಿಟ್ಟಿನಲ್ಲಿ ಕರ್ತವ್ಯ ಲೋಪ ಎಸಗಿದ್ದ 9 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಜೊತೆಗೆ ಉಳಿದ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಕಳಿಸಲಾಗಿದ್ದು, ಇಂತಹ ತಪ್ಪು ನಡೆದ ಜೈಲಿನ ಡಿಜಿಪಿಗೆ ನೋಟೀಸನ್ನೂ ನೀಡಲಾಗಿದೆ ಎಂದರು.

ಮುಡಾದ ಮಾಜಿ ಆಯುಕ್ತರ ಮೇಲೆ ಆರೋಪವಿದ್ದು, ಅವರನ್ನು ಹಾವೇರಿ ವಿವಿಗೆ ಕುಲಸಚಿವರಾಗಿ ನೇಮಕ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಚಾರದ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

Advertisement
Tags :
bengaluruBjpChief Minister SiddaramaiahchitradurgaGovernmenthubballihublisuddionesuddione newsಆಪರೇಷನ್ ಕಮಲಚಿತ್ರದುರ್ಗಪ್ರಯತ್ನಬಿಜೆಪಿಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್ಹುಬ್ಬಳ್ಳಿ
Advertisement
Next Article