For the best experience, open
https://m.suddione.com
on your mobile browser.
Advertisement

Bharat Ratna: ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಗೆ ಭಾರತ ರತ್ನ  : ಜನ ನಾಯಕನಿಗೆ ಒಲಿದ ಮರಣೋತ್ತರ ಪ್ರಶಸ್ತಿ...!

07:45 AM Jan 24, 2024 IST | suddionenews
bharat ratna  ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಗೆ ಭಾರತ ರತ್ನ    ಜನ ನಾಯಕನಿಗೆ ಒಲಿದ ಮರಣೋತ್ತರ ಪ್ರಶಸ್ತಿ
Advertisement

Advertisement
Advertisement

Advertisement

ಸುದ್ದಿಒನ್ : ಭಾರತದ ಸ್ವಾತಂತ್ರ್ಯ ಹೋರಾಟಗಾರ, ಜನನಾಯಕ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಗಿದೆ. ಜನ ನಾಯಕ್ ಎಂದೇ ಜನಪ್ರಿಯರಾಗಿದ್ದ ಅವರು ಎರಡು ಬಾರಿ ಬಿಹಾರ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಕರ್ಪೂರಿ ಠಾಕೂರ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಕೇಂದ್ರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿದೆ. ಈ ಕುರಿತು ರಾಷ್ಟ್ರಪತಿ ಕಚೇರಿ ಪ್ರಕಟಣೆ ಹೊರಡಿಸಿದೆ.

Advertisement
Advertisement

24 ಜನವರಿ 1924 ರಂದು ಬಿಹಾರದ ಸಮಸ್ತಿಪುರದಲ್ಲಿ  ಜನಿಸಿದ ಕರ್ಪೂರಿ ಠಾಕೂರ್ ಅವರು ಶಿಕ್ಷಕರಾಗಿ ತಮ್ಮ ಜೀವನ ಪಯಣವನ್ನು ಪ್ರಾರಂಭಿಸಿದರು.

1952ರಲ್ಲಿ ತಾಜಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಪರವಾಗಿ ವಿಧಾನಸಭೆಗೆ ಆಯ್ಕೆಯಾದರು. ಅವರು ನೌಕರರು ಮತ್ತು ಕಾರ್ಮಿಕರ ಪರವಾಗಿ ಅನೇಕ ಚಳುವಳಿಗಳಲ್ಲಿ ಭಾಗವಹಿಸಿದರು. ಕರ್ಪೂರಿ ಠಾಕೂರ್ ಬಿಹಾರದಲ್ಲಿ ಮೊದಲ ಕಾಂಗ್ರೆಸ್ಸೇತರ ಸಿಎಂ ಆಗಿದ್ದರು. ಸಮಾಜವಾದಿ ಪಕ್ಷದ ಮೊದಲ ಮುಖ್ಯಮಂತ್ರಿಯೂ ಹೌದು. ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಅವರು ಸಮಾಜವಾದಿ ಪಕ್ಷ/ಭಾರತೀಯ ಕ್ರಾಂತಿ ದಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮತ್ತೆ ಅವರು ಜನತಾ ಪಕ್ಷದ ಪರವಾಗಿ ಡಿಸೆಂಬರ್ 1977 ರಿಂದ ಏಪ್ರಿಲ್ 1979 ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಕರ್ಪೂರಿ ಠಾಕೂರ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಹೇರಲಾಗಿತ್ತು. ಅವರ ಆಳ್ವಿಕೆಯಲ್ಲಿ ಬಿಹಾರದಲ್ಲಿ ಅನೇಕ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲಾಯಿತು. ಸರ್ಕಾರಿ ನೌಕರಿಗಳಲ್ಲಿ ಬಿ.ಸಿ.ಗಳಿಗೆ ಮೀಸಲಾತಿ ಕಲ್ಪಿಸಿದ ಬಡವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಕರ್ಪೂರಿ ಠಾಕೂರ್ ಅವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ, ಮೆಟ್ರಿಕ್ಯುಲೇಷನ್ ಹಂತದಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವನ್ನಾಗಿ ಮಾಡಬೇಕೆಂಬ ನಿಯಮವನ್ನು ತೆಗೆದುಹಾಕಲಾಯಿತು.

ಕರ್ಪೂರಿ ಠಾಕೂರ್ ಅವರು ಬಿಹಾರದ ಪ್ರಮುಖ ನಾಯಕರಾದ ಲಾಲು ಪ್ರಸಾದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್, ನಿತೀಶ್ ಕುಮಾರ್, ದೇವೇಂದ್ರ ಪ್ರಸಾದ್ ಯಾದವ್ ಮತ್ತು ಇತರರಿಗೆ ಮಾರ್ಗದರ್ಶಕರಾಗಿದ್ದರು.  ಕರ್ಪೂರಿ ಠಾಕೂರ್ ಅವರು ಫೆಬ್ರವರಿ 17, 1988 ರಂದು ತಮ್ಮ 64 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಹೆಸರಿನಲ್ಲಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವುದಲ್ಲದೆ, ಅವರು ಜನ್ ನಾಯಕ್ ಹೆಸರಿನಲ್ಲಿ ದರ್ಭಾಂಗಾ ಮತ್ತು ಅಮೃತ್ ಸರ್ ನಡುವೆ ರೈಲು ಸೇವೆ ಆರಂಭಿಸಲಾಯಿತು.

ಕರ್ಪೂರಿ ಠಾಕೂರ್ (ಮರಣೋತ್ತರ) ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಅವರ ಪ್ರಯತ್ನಗಳನ್ನು ಮೋದಿ ಶ್ಲಾಘಿಸಿದರು. ಸಮಾನತೆ ಮತ್ತು ಸಬಲೀಕರಣಕ್ಕಾಗಿ ಅವರ ಅತ್ಯುತ್ತಮ ಕೆಲಸಕ್ಕಾಗಿ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದು ಅವರ ಸೇವೆಗಳಿಗೆ ಸೂಕ್ತವಾದ ಮಾನ್ಯತೆಯಾಗಿದೆ ಎಂದು ಮೋದಿ ಹೇಳಿದರು.

ಬಿಹಾರಿಗಳಾದ ಡಾ.ಬಾಬು ರಾಜೇಂದ್ರ ಪ್ರಸಾದ್, ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಈ ಹಿಂದೆ ಆಯ್ಕೆ ಮಾಡಲಾಗಿತ್ತು. 1992ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಮೌಲಾನಾ ಅಬುಲ್ ಕಲಾಂ ಆಜಾದ್ ಕೂಡ ಬಿಹಾರ ಮೂಲದ ನಾಯಕ.

Advertisement
Tags :
Advertisement