Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕಿದೆ : ಯೋಗೀಶ್ ಸಹ್ಯಾದ್ರಿ

05:40 PM Sep 14, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 14 : ಮಕ್ಕಳ ಸಾಹಿತ್ಯಕ್ಕೆ ಪ್ರಾಚೀನ ಪರಂಪರೆಯಿದೆ. ಸಾಹಿತ್ಯ ರಚನೆ ಪ್ರಾರಂಭವಾದಂದಿನಿಂದಲೂ ಮಕ್ಕಳ ಸಾಹಿತ್ಯ ತನ್ನದೇ ಆದ ಆಕರ್ಷಣೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಮಕ್ಕಳ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರನ್ನು ಸಂಘ ಸಂಸ್ಥೆಗಳು ಗೌರವಿಸಬೇಕಿದೆ ಎಂದು ಲೇಖಕ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ನಗರದ ಕೆ.ಕೆ ನ್ಯಾಷನಲ್ ಶಾಲೆ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ "ಸಂಸ್ಕೃತಿ ನೆಲೆಗಟ್ಟಿನಲ್ಲಿ ಮಕ್ಕಳ ಸಾಹಿತ್ಯ" (ಮಕ್ಕಳ ಸ್ವರಚಿತ ಕವನ ವಾಚನ ಕಾರ್ಯಕ್ರಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಹೊರ ತೆಗೆಯುವ ಕಾರ್ಯ ಶಿಕ್ಷಕರು ಮತ್ತು ಪೋಷಕರದ್ದಾಗಿದೆ. ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಎಂದರು.

Advertisement

ಮಕ್ಕಳು ಕಥೆ-ಕವನಗಳನ್ನು ಕೇಳುವುದು, ಬರೆಯುವ ಅಭ್ಯಾಸದಿಂದ ತಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗು ಇದರೊಂದಿಗೆ ವಿನೂತನ ಚಿಂತನೆ, ಪ್ರಯೋಗಗಳಿಗೆ ಒರೆ ಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಚಿತ್ರದುರ್ಗ ಡಾನ್ ಬೋಸ್ಕೋ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಎನ್. ಧನಕೋಟಿ ಅವರು, ಸಂಸ್ಕೃತಿ ಮತ್ತು ಸಾಹಿತ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಸಂಸ್ಕೃತಿಯು ವಿಶಾಲತೆಯಿಂದ ಕೂಡಿದ್ದು, ಮಕ್ಕಳ ಸಾಹಿತ್ಯ ಸಹ ಇದರಿಂದ ಹೊರತಾಗಿಲ್ಲ ಎಂದರು. ಸಂಸ್ಕೃತಿ ಹಾಗು ನಾಗರೀಕತೆ ಎರಡೂ ಬೇರೆ ಬೇರೆ ಆದರೂ ಮಕ್ಕಳ ಸಾಹಿತ್ಯದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ ಎಂದು ಹೇಳುತ್ತಾ ಕವಿತೆ-ಕಥೆಗಳ ಮೂಲಕ ಸಾಹಿತ್ಯದ ರುಚಿ ಬಡಿಸಿದರು.

ಕೆ. ಕೆ. ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಕಾರ್ತಿಕ್ ಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಹಲವಾರು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕಂಪನ್ನು ಹರಡುತ್ತಿದೆ ಎಂದರು. ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮತ್ತು ತಂಡಕ್ಕೆ ಅವರ ಕಾರ್ಯದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ. ನಮ್ಮ ಸಂಸ್ಥೆಯಲ್ಲಿಯೂ ಮಸಾಪ ಶಾಲಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಮ.ಸಾ.ಪ ಉಪಾಧ್ಯಕ್ಷ ಬಿ ವಿಜಯಕುಮಾರ್, ಸದಸ್ಯರಾದ ಮಾರುತಿ ನಾಯ್ಕ್, ಸುಜ್ಲಾನ್ ಗ್ಲೋಬಲ್ ಸರ್ವಿಸ್ ಉಪ ವ್ಯವಸ್ಥಾಪಕ ಹರೀಶ್ ಎಲ್ ಮಾತನಾಡಿದರು. ಶಿಕ್ಷಕಿ ರೂಪಿಣಿ ಕಾರ್ಯಕ್ರಮ ನಿರೂಪಿಸಿದರು, ಶಾಲೆಯ ಪ್ರಾಂಶುಪಾಲ ಮಹೇಶ್ವರಪ್ಪ ಸ್ವಾಗತಿಸಿದರು. ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿ ಪ್ರತಿನಿಧಿಗಳಾದ ಕು| ಪ್ರೀತಮ್, ಕು| ಪವಿತ್ರ, ಮಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Tags :
bengaluruchitradurgaself-confidencestudentssuddionesuddione newsYogeesh Sahyadriಆತ್ಮಸ್ಥೈರ್ಯಚಿತ್ರದುರ್ಗಬೆಂಗಳೂರುಯೋಗೀಶ್ ಸಹ್ಯಾದ್ರಿವಿದ್ಯಾರ್ಥಿಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article