Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವತನಕ ವಿರಮಿಸುವುದಿಲ್ಲ : ಬಿ.ವೈ.ವಿಜಯೇಂದ್ರ

07:55 PM Sep 23, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 : ರಾಜ್ಯದಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವತನಕ ಮನೆಯಲ್ಲಿ ಕೂರುವುದಿಲ್ಲವೆಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಕಲ್ಪ ತೊಟ್ಟರು.

ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಜಿಲ್ಲೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರಧಾನಿ ನರೇಂದ್ರಮೋದಿ ಕಳೆದ 2 ರಂದು ಸದಸ್ಯತ್ವಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪ್ರತಿ ಬೂತ್‍ನಲ್ಲಿ ಐದಾರು ಜನರ ತಂಡ ಮಾಡಿಕೊಂಡು ಮನೆ ಮನೆಗೆ ಹೋಗಿ ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಎಲ್ಲಾ ಜಾತಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯತ್ವಾ ಅಭಿಯಾನ ಯಶಸ್ವಿಗೊಳಿಸುವಂತೆ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ವಿನಂತಿಸಿದ ಬಿ.ವೈ.ವಿಜಯೇಂದ್ರ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರಕ್ಕೆ ಶಾಸಕರು, ಮಾಜಿ ಶಾಸಕರುಗಳು, ಮುಖಂಡರುಗಳು ಪ್ರವೇಶಿಸಬೇಕೆಂದು ಸೂಚಿಸಿದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ್‍ಬೊಮ್ಮಾಯಿ ಇವರುಗಳು ಮುಖ್ಯಮಂತ್ರಿಗಳಾಗಿದ್ದಾಗ ಕಾಂಗ್ರೆಸ್‍ನಿಂದ ಅನೇಕ ಆಪಾದನೆಗಳನ್ನು ಎದುರಿಸಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಈಗ ನಮ್ಮ ಪಕ್ಷ 66 ಸ್ಥಾನಗಳಲ್ಲಿ ಗೆದ್ದು ವಿಧಾನಸಭೆಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದೆ. ಚುನಾವಣೆ ಪೂರ್ವದಲ್ಲಿ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಗುಲ್ಬರ್ಗದಲ್ಲಿ ಕುಳಿತು ಕಲ್ಯಾಣ ಕರ್ನಾಟಕಕ್ಕೆ ಹನ್ನೊಂದುವರೆ ಸಾವಿರ ಕೋಟಿ ರೂ.ಗಳನ್ನು ಘೋಷಿಸಿ ರಾಜ್ಯದ ಜನರ ಕಿವಿಗೆ ಹೂವು ಮುಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು ಅನುಭವ ಮಂಟಪ ಅಭಿವೃದ್ದಿಗೆ ಆರು ಕೋಟಿ ರೂ.ಗಳನ್ನು ಘೋಷಿಸಿದ್ದರು. ನೀರಾವರಿಗೆ ಬಸವರಾಜ್ ಬೊಮ್ಮಾಯಿ ಹದಿನೆಂಟು ಸಾವಿರ ಕೋಟಿ ರೂ.ಗಳನ್ನು ಘೋಷಿಸಿದ್ದರು. ಎಲ್ಲದಕ್ಕೂ ಈಗಿನ ಮುಖ್ಯಮಂತ್ರಿ ಕಲ್ಲು ಹಾಕಿ ಬಿಜೆಪಿ. ಯೋಜನೆಗಳನ್ನೆಲ್ಲಾ ತಡೆದಿದ್ದಾರೆ. ರಾಜ್ಯದಲ್ಲಿ ನೆರೆ ವೀಕ್ಷಣೆಗೆ ಪ್ರವಾಸ ಮಾಡುತ್ತಿಲ್ಲ. ಮುಖ್ಯಮಂತ್ರಿ ಮೈಸೂರಿಗೆ, ಉಪ ಮುಖ್ಯಮಂತ್ರಿ ಬೆಂಗಳೂರಿಗಷ್ಟೆ ಮೀಸಲಾಗಿದ್ದಾರೆಂದು ಬಿ.ವೈ.ವಿಜಯೇಂದ್ರ ತರಾಟೆ ತೆಗೆದುಕೊಂಡರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಗೃಹಲಕ್ಷ್ಮಿ ಯೋಜನೆ ನಿಂತಿದೆ. ದರಿದ್ರ ಸರ್ಕಾರ ರಾಜ್ಯದಲ್ಲಿರುವುದರಿಂದ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ರೂ.ಗಳನ್ನು ತೆಲಂಗಾಣದ ಬೇರೆ ಬೇರೆ ಹತ್ತು ಖಾತೆಗಳಿಗೆ ವರ್ಗಾಯಿಸಲಾಗಿದೆ. ಮುಡಾ ಹಗರಣ, ಎಸ್ಸಿ.ಪಿ. ಟಿ.ಎಸ್ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಅಭಿವೃದ್ದಿಗಾಗಿ ಬಳಸಬೇಕಾಗಿರುವ 24 ಸಾವಿರ ಕೋಟಿ ರೂ.ಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. 87 ಕೋಟಿ ರೂ.ಗಳನ್ನು ನುಂಗಿರುವುದಾಗಿ ಸ್ವತಃ ಮುಖ್ಯಮಂತ್ರಿಯೆ ಸದನದಲ್ಲಿ ಒಪ್ಪಿಕೊಂಡಿದ್ದಾರೆ.

ಒಂಟಿ ಕಾಲಲ್ಲಿ ನಿಂತಿರುವ ಕಾಂಗ್ರೆಸ್ ಸರ್ಕಾರ ಯಾವಾಗ ಬಿದ್ದು ಹೋಗುತ್ತದೋ ಗೊತ್ತಿಲ್ಲ. ಕುರ್ಚಿಗಾಗಿ ಕಾದಾಟ ಶುರುವಾಗಿದೆ. ರಾಹುಲ್‍ಗಾಂಧಿ ವಿದೇಶದಲ್ಲಿ ಕುಳಿತು ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತೇವೆಂದು ಹೇಳುತ್ತಿದ್ದಾರೆ. ಮುಂದೆ ಎದುರಾಗುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ. ಸ್ಪಷ್ಟಬಹುಮತಗಳೊಂದಿಗೆ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ಈಗಿನಿಂದಲೆ ಸಿದ್ದರಾಗಿ ಎಂದು ಬಿ.ವೈ.ವಿಜಯೇಂದ್ರ ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ತುಷ್ಟೀಕರಣಗೊಳಿಸುತ್ತಿರುವುದರಿಂದ ನಾಗಮಂಗದಲ್ಲಿ ಗಣೇಶ ಮೆರವಣಿಗೆಯಲ್ಲಿ ಅನ್ಯ ಕೋವಿನವರು ಕಲ್ಲು, ಪೆಟ್ರೋಲ್ ಬಾಂಬ್ ತೂರಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಪಾಂಡವಪುರದಲ್ಲಿ ಪಕ್ಷದ ಕಾರ್ಯಾಲಯದೊಳಗೆ ಪೊಲೀಸರು ಬೂಟುಗಾಲಿನಲ್ಲಿ ಪ್ರವೇಶಿಸಿದ್ದಾರೆ. ಚಿತ್ರದುರ್ಗ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲೂ ಕಿಡಿಗೇಡಿಗಳು ಗಲಾಟೆ ಮಾಡಬಹುದು. ಇನ್ನಾದರೂ ಕಾರ್ಯಕರ್ತರು ಎಚ್ಚೆತ್ತುಕೊಳ್ಳಿ. ದೇಶದ್ರೋಹಿಗಳಿಗೆ ಕಾಂಗ್ರೆಸ್ ರತ್ನಗಂಬಳಿ ಹಾಸುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾಂಗ್ರೆಸ್‍ನ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವವನಲ್ಲ ಎಂದು ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ ದೇಶದಲ್ಲಿ ಬಿಜೆಪಿ.ಸದಸ್ಯತ್ವಾ ಅಭಿಯಾನ ಶುರುವಾಗಿದೆ. ಚಿತ್ರದುರ್ಗದಲ್ಲಿ ಎಂ.ಪಿ.ಸ್ಥಾನ ಗೆದ್ದ ಮೇಲೆ ಕಾರ್ಯಕರ್ತರಿಗೆ ಆನೆ ಬಲ ಬಂದಂತಾಗಿದೆ. ಆದರೆ ಸದಸ್ಯತ್ವಾ ಅಭಿಯಾನದಲ್ಲಿ ಜಿಲ್ಲೆ ಹಿಂದುಳಿದಿದೆ. ಮೂರುವರೆ ಲಕ್ಷ ಸದಸ್ಯತ್ವಾ ಗುರಿ ನೀಡಿದೆ. ಕಾರ್ಯಕರ್ತರು ಮನಸ್ಸು ಮಾಡಿದರೆ ಸದಸ್ಯತ್ವಾ ಅಭಿಯಾನ ದೊಡ್ಡದೇನಲ್ಲ. ಇನ್ನು ನಾಲ್ಕೈದು ದಿನಗಳಲ್ಲಿ ನಿಮಗೆ ಕೊಟ್ಟಿರುವ ಗುರಿ ತಲುಪಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಿಮ್ಮದು. ಬಿ.ವೈ.ವಿಜಯೇಂದ್ರರವರ ಕೈಬಲಪಡಿಸುವಲ್ಲಿ ಪಣ ತೊಡಿ ಎಂದು ವಿನಂತಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಗಟ್ಟಿ ಸಂಘಟನೆ, ಕಾರ್ಯಕರ್ತರಿದ್ದಾರೆ. ಸದಸ್ಯತ್ವಾ ಅಭಿಯಾನದಲ್ಲಿ ಜಿಲ್ಲೆ ಹಿಂದಿದೆ. ರಾಷ್ಟ್ರ, ರಾಜ್ಯ ನಾಯಕರ ಕನಸು ಈಡೇರಿಸಬೇಕಿದೆ. ಸದಸ್ಯತ್ವಾ ಅಭಿಯಾನ ಅರ್ಜಿಯಲ್ಲಿ ತಾಂತ್ರಿಕತೆಯಿರುವುದರಿಂದ ದೆಹಲಿಯಲ್ಲಿಯೇ ಕುಳಿತು ನಾಯಕರು ಜಿಲ್ಲೆಯಲ್ಲಿ ಆಗಿರುವ ಸದಸ್ಯತ್ವಾ ಅಭಿಯಾನದ ಕುರಿತು ಮಾಹಿತಿ ಪಡೆದುಕೊಳ್ಳಬಹುದಾಗಿರುವುದರಿಂದ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ, ಒಂಬತ್ತು ಮಂಡಲಗಳಲ್ಲಿ ಸದಸ್ಯತ್ವಾ ಅಭಿಯಾನದ ಗುರಿಯನ್ನು ತಲುಪುವ ಸಂಕಲ್ಪ ಮಾಡುವಂತೆ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳಲ್ಲಿ ಕೋರಿದರು.

ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್, ರಾಜ್ಯ ಕಾರ್ಯದರ್ಶಿಗಳಾದ ತಮ್ಮೇಗೌಡ, ಶರಣ ತಳ್ಳಿಕೆರಿ, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್‍ಸಿದ್ದಾಪುರ, ಸಂಪತ್‍ಕುಮಾರ್, ಮಧುಗಿರಿ ಜಿಲ್ಲಾ ಬಿಜೆಪಿ. ಅಧ್ಯಕ್ಷ ಹನುಮಂತೆಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಎಸ್.ಲಿಂಗಮೂರ್ತಿ, ಬಿಜೆಪಿ. ಮಾಜಿ ಅಧ್ಯಕ್ಷ ಜಿ.ಎನ್.ಸುರೇಶ್, ಕುಮಾರಸ್ವಾಮಿ, ಮಲ್ಲಿಕಾರ್ಜುನ ವೇದಿಕೆಯಲ್ಲಿದ್ದರು.

Advertisement
Tags :
bengaluruBjpchitradurgapower in the state: B.Y.Vijayendra ಸುದ್ದಿಒನ್suddionesuddione newsಅಧಿಕಾರಚಿತ್ರದುರ್ಗಬಿ ವೈ ವಿಜಯೇಂದ್ರಬಿಜೆಪಿಬೆಂಗಳೂರುಸುದ್ದಿಒನ್ ನ್ಯೂಸ್
Advertisement
Next Article