For the best experience, open
https://m.suddione.com
on your mobile browser.
Advertisement

ತರಾಸು ಒಡನಾಡಿ ಪ್ರೊ. ಶ್ರೀಶೈಲ ಆರಾಧ್ಯ ಇನ್ನಿಲ್ಲ

10:55 AM Jan 04, 2024 IST | suddionenews
ತರಾಸು ಒಡನಾಡಿ ಪ್ರೊ  ಶ್ರೀಶೈಲ ಆರಾಧ್ಯ ಇನ್ನಿಲ್ಲ
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.04 : ಇತಿಹಾಸ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಶೈಲ ಆರಾಧ್ಯ (77 ವರ್ಷ) ಇಂದು (ಗುರುವಾರ) ಮುಂಜಾನೆ 5:30 ರ ಸುಮಾರಿಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement
Advertisement

ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ನಾಳೆ ಬೆಳಿಗ್ಗೆ ದಾವಣಗೆರೆಯಿಂದ ಅವರ ಮೃತ ದೇಹವನ್ನು ಚಿತ್ರದುರ್ಗದ ಅವರ ನಿವಾಸಕ್ಕೆ ತರಲಾಗುವುದು. ನಂತರ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾನ್ಹದ ವೇಳೆಗೆ ಜೋಗಿಮಟ್ಟಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಶ್ರೀ ಶೈಲ ಆರಾಧ್ಯರ ನಿಧನಕ್ಕೆ ಜಿಲ್ಲೆಯ ಮಠಾಧೀಶರು, ಸಾಹಿತಿಗಳು, ಚಿಂತಕರು, ರಾಜಕೀಯ ಮುಖಂಡರು, ಹಲವಾರು ಸಂಘಸಂಸ್ಥೆಗಳ ಮುಖಂಡರುಗಳು ಸಂತಾಪ ಸೂಚಿಸಿದ್ದಾರೆ.

Advertisement
Advertisement

ಜೆ.ಹಾಲಾರಾಧ್ಯ ಮತ್ತು ಶ್ರೀಮತಿ ಮರುಳಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ 1946 ರಲ್ಲಿ  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸೋಮೇನಹಳ್ಳಿಯಲ್ಲಿ ಜನಿಸಿದರು.
ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ, ಬೂದಿಹಾಳು ಶ್ರೀರಾಂಪುರದಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಾಲೆ ಶಿಕ್ಷಣ.
ತುಮಕೂರು, ಧಾರವಾಡಗಳಲ್ಲಿ ಉನ್ನತ ಶಿಕ್ಷಣ. ಶಿವಮೊಗ್ಗ ಚಿಕ್ಕಮಗಳೂರುಗಳ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ. ಮಂಡ್ಯ, ಚಳ್ಳಕೆರೆ ಮತ್ತು ಚಿತ್ರದುರ್ಗದ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಒಟ್ಟು ಮೂವತ್ತು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಪ್ರಾಧ್ಯಾಪಕರಾಗಿದ್ದುಕೊಂಡು ಸಂಸ್ಕೃತಿ, ಸಾಹಿತ್ಯ ಮತ್ತು  ಪ್ರಾಚೀನ ಬದುಕನ್ನು ಬಿಚ್ಚಿಡುವ ಇತಿಹಾಸ, ಕೋಟೆ ಕೊತ್ತಲ, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ ಆಚರಣೆಗಳು ಇಂಥ ವಿಭಿನ್ನ ವಿಷಯಗಳ ಬಗ್ಗೆ ಸುಮಾರು ಮೂವತ್ತು ಲೇಖನಗಳ ಮಂಡನೆ ಮತ್ತು ಪ್ರಕಟಣೆ ಮಾಡಿದ್ದಾರೆ.

ಅದರಲ್ಲೂ ವಿಶೇಷವಾಗಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಗಳಲ್ಲಿ ಶಿಲಾಯುಗದ ಮಾನವರಚಿತ ರೇಖಾಚಿತ್ರಗಳು, ನೆರಳು ಚಿತ್ರಗಳಿರುವ ಬಗ್ಗೆ, ಹುಟ್ಟು ಬಂಡೆಗಳ ಮೇಲೆ ಪ್ರಾಣಿ ಮನುಷ್ಯಾಕೃತಿಗಳನ್ನು ಮೂಡಿಸಿರುವ ಬಗ್ಗೆ 1983ರಲ್ಲಿ ಮೊತ್ತ ಮೊದಲಿಗೆ, ಹೊರಜಗತ್ತಿಗೆ 'ಸಂಶೋಧನೆಯ ಹಾದಿಯಲ್ಲಿ' ಎಂಬ ಕೃತಿ ರಚಿಸಿದ್ದಾರೆ.

ಜ್ಯೋತಿಷ, ರತ್ನಶಾಸ್ತ್ರ, ಭಾರತೀಯ ಪ್ರಾಚೀನ ಆಚರಣೆಗಳು, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಅಧ್ಯಯನ, ಮರ-ಗಿಡ, ಅಂಚೆಯ ಸ್ಟಾಂಪು ಸಂಗ್ರಹಣೆ ಅವರ ಅಭಿರುಚಿಯಾಗಿತ್ತು.

ಅವರು ಸಂಪಾದಿಸಿದ ಕೃತಿಗಳು ಮತ್ತು ಇತಿಹಾಸ, ಸಾಮಾಜಿಕ ಕಾರ್ಯಗಳು

1. ಕಾಶಿ ಸಾಹಿತ್ಯ ಸಮೀಕ್ಷೆ (ಸಂಭಾವನ ಕೃತಿ- ಸಂಪಾದನೆ)

2. ಸಂಶೋಧನೆಯ ಹಾದಿಯಲ್ಲಿ (ಪ್ರಾಚೀನ ಗುಹಾಚಿತ್ರಗಳ ಬಗೆಗೆ)

3. ಸೀಮೇಗಿಲ್ಲದೋರ ಸೂರಿನ ಕೆಳಗೆ (ನಗೆ ಲೇಖನಗಳು)

4. ಚಿತ್ರದುರ್ಗ - (ವಯಸ್ಕರ ಶಿಕ್ಷಣ ಸಮಿತಿಗೆ)

5. ಚಿತ್ರದುರ್ಗ – (ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಗೆ)

6. ಸೋಮನ ಕರಿಯಪ್ಪ (ಜಾನಪದ ಅಕಾದೆಮಿಗೆ)

7. ಗಿರಿಮಲ್ಲಿಗೆ (ತರಾಸು ಸ್ಮರಣ ಸಂಪುಟದ ಸಂಪಾದನೆ)

8. ರಾಷ್ಟ್ರ ನಾಯಕ (ಎಸ್ಸೆನ್ ಸಂಪುಟದ ಸಂಪಾದನೆ- ವಿದ್ವಾಂಸ ಮಿತ್ರರೊಡನೆ)

9. ಪನ್ನೀರು ಗಿಂಡಿ ( ಚಿತ್ರಣ )

10. ಚಿತ್ರದುರ್ಗ ಜಿಲ್ಲೆಯ ಮೂವರು ಅವಧೂತರು

ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ, ಸ್ಥಳೀಯ ನಾಗರೀಕ ಹಿತರಕ್ಷಣಾ ವೇದಿಕೆ ಇವುಗಳ ಅಧ್ಯಕ್ಷ, ಗೌರಾವಧ್ಯಕ್ಷತೆಯ ನಿರ್ವಹಣೆ.

ಅವರ ಸೇವೆಗೆ ಒಲಿದ ಗೌರವ ಸನ್ಮಾನಗಳು

1) 09-09-2000 ರಂದು ಚಿತ್ರದುರ್ಗದ ಜ್ಞಾನಭಾರತಿ ಟ್ರಸ್ಟ್‌ನಿಂದ ಗೌರವ

2) 10-4-2006ರಂದು ಚಿತ್ರದುರ್ಗ ಜಿಲ್ಲಾ ಉತ್ಸವ 2006- ಸರ್ಕಾರ

3) 01-11-2006ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವ, ಜಿಲ್ಲಾಡಳಿತ, ಚಿತ್ರದುರ್ಗ

4) 12-12-2007ರಂದು 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ

5) 03-11-2010ರಂದು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

6) 27-12-2011 ಕಾಂಗ್ರೆಸ್ ಸಂಸ್ಥಾಪನಾ 127ನೇ ವರ್ಷಾಚರಣೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಚಿತ್ರದುರ್ಗ

7) 2015 ರಲ್ಲಿ ಚಿತ್ರದುರ್ಗದ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ 'ಮುರುಘಾಶ್ರೀ' ಪ್ರಶಸ್ತಿ.

ತರಾಸು ಅವರ ಒಡನಾಡಿಯಾಗಿದ್ದ ಶ್ರೀಶೈಲ ಆರಾಧ್ಯರು ದುರ್ಗಾಸ್ತಮಾನ ಸೇರಿದಂತೆ ತರಾಸು ರಚಿಸಿದ ಕೆಲವು ಐತಿಹಾಸಿಕ ಕಾದಂಬರಿಗಳಿಗೆ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

Advertisement
Tags :
Advertisement