For the best experience, open
https://m.suddione.com
on your mobile browser.
Advertisement

ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ : ಡಿ.ದೊಡ್ಡಮಲ್ಲಯ್ಯ

03:59 PM Apr 20, 2024 IST | suddionenews
ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ   ಡಿ ದೊಡ್ಡಮಲ್ಲಯ್ಯ
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20  : ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಹಸಿ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿರುವ ಬಿಜೆಪಿ. ಪಕ್ಷವನ್ನು ಈ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್‍ಗೆ ಬೆಂಬಲಿಸುವುದಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ದೊಡ್ಡಮಲ್ಲಯ್ಯ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ಅತ್ಯಂತ ಪುರಾತನ ಪ್ರಜಾಪ್ರಭುತ್ವ ದೇಶ. ಇದಕ್ಕೆ ಭದ್ರ ಬುನಾದಿ ಹಾಕಿದ್ದು, ಕಾಂಗ್ರೆಸ್. ಧರ್ಮ ಸಹಿಷ್ಣುತೆ, ಜಾತ್ಯಾತೀತತೆ ಈ ನೆಲದ ಗುಣ. ಕಾಂಗ್ರೆಸ್ ಸರ್ಕಾರ ಆರಂಭದಿಂದಲೂ ಕಾಡುಗೊಲ್ಲರನ್ನು ಬೆಂಬಲಿಸುತ್ತ ಬರುತ್ತಿರುವುದರಿಂದ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಓಟು ನೀಡುವುದಾಗಿ ಹೇಳಿದರು.

Advertisement
Advertisement

ಸಿದ್ದರಾಮಯ್ಯನವರು 2013 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕಾಡುಗೊಲ್ಲರನ್ನು ಗುರುತಿಸಿ ಅಧಿಕಾರ ನೀಡಿದರು. ಎ.ವಿ.ಉಮಾಪತಿ ಶಾಸಕರಾದರು. ಜಯಮ್ಮ ಬಾಲರಾಜ್‍ರವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. 2009 ರಲ್ಲಿ ಟಿ.ಬಿ.ಜಯಚಂದ್ರರವರು ಕಾಡುಗೊಲ್ಲರನ್ನು ಎಸ್ಟಿ.ಗೆ ಸೇರಿಸುವ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿದರು.

ಆಗ ಕುಲಶಾಸ್ತ್ರ ಅಧ್ಯಯನ ನಡೆಸಲು ಅನ್ನಪೂರ್ಣಮ್ಮನವರನ್ನು ನೇಮಕ ಮಾಡಲಾಗಿತ್ತು. ಅವರಿಂದ ವರದಿ ಬಂದ ಮೇಲೆ 2013 ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎನ್ನುವುದನ್ನು ಡಾ.ದೊಡ್ಡಮಲ್ಲಯ್ಯ ಸ್ಮರಿಸಿದರು.

ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಕಿರಣ್‍ಯಾದವ್ ಮಾತನಾಡಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಮೂರುವರೆ ಲಕ್ಷದಿಂದ ನಾಲ್ಕು ಲಕ್ಷದಷ್ಟು ಕಾಡುಗೊಲ್ಲರಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗುವುದು. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಸುಳ್ಳು ಭರವಸೆಗಳನ್ನು ಕೊಡುತ್ತಿರುವ ಬಿಜೆಪಿ.ಯವರು ಚುನಾವಣೆಯಲ್ಲಿ ಮತ ಕೇಳಲು ಬಂದರೆ ಹಟ್ಟಿಗಳಲ್ಲಿ ಬಿಟ್ಟುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವರಾಗಿದ್ದ ನಾರಾಯಣಸ್ವಾಮಿರವರು ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಕಾಡುಗೊಲ್ಲರ ಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಬಿಜೆಪಿ. ಮೊದಲಿನಿಂದಲೂ ನಯವಾಗಿ ವಂಚಿಸಿಕೊಂಡು ಬರುತ್ತಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ಹೇಳಿದರು.

ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಬಿ.ಡಿ.ಬಸವರಾಜ್, ಕೂನಿಕೆರೆ ರಾಮಣ್ಣ, ಸಿ.ಬಿ.ಪಾಪಣ್ಣ, ಜಿ.ವಿ.ಲಕ್ಷ್ಮಿದೇವಿ, ಸಂಪತ್‍ಕುಮಾರ್, ರಂಗಯ್ಯ, ಚಿತ್ತಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Tags :
Advertisement