For the best experience, open
https://m.suddione.com
on your mobile browser.
Advertisement

ಸಂಯಮ ಹಾಗೂ ಅರಿವು ಬೆಳಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರಿ : ಎಡಿಸಿ ಬಿ.ಟಿ.ಕುಮಾರಸ್ವಾಮಿ

05:13 PM Aug 01, 2024 IST | suddionenews
ಸಂಯಮ ಹಾಗೂ ಅರಿವು ಬೆಳಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರಿ   ಎಡಿಸಿ ಬಿ ಟಿ ಕುಮಾರಸ್ವಾಮಿ
Advertisement

Advertisement
Advertisement

ಚಿತ್ರದುರ್ಗ. ಆಗಸ್ಟ್.01: ಹಿಂದಿನ ದಿನಮಾನಗಳಲ್ಲಿ ದುಶ್ಚಟ ಎಂದರೆ ಕುಡಿತ, ಬೀಡಿ, ಸಿಗರೇಟ್, ಗುಟುಕಾ ಸೇವನೆಗೆ ಸೀಮಿತವಾಗಿತ್ತು. ಪ್ರಸ್ತುತ ದುಶ್ಚಟಗಳ ವ್ಯಾಪ್ತಿ ಎಲ್ಲಿ ಮೀರಿ ಹೋಗುತ್ತಿದೆ. ವಯಸ್ಸಿನ ಭೇದ ಭಾವಗಳಿಲ್ಲದೆ ಪ್ರತಿಯೊಬ್ಬರು ಸಂಯಮ ಹಾಗೂ ಅರಿವು ಬೆಳಸಿಕೊಳ್ಳುವ ಮೂಲಕ ದುಷ್ಚಟಗಳಿಂದ ದೂರವಿರುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಶಿಕ್ಷಣ ಇಲಾಖೆ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

Advertisement

ಯುವಜನತೆ ಮಾದಕ ವ್ಯಸನಗಳ ಕಡೆ ಆಕರ್ಷಣೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ವ್ಯಸನಗಳು ಮನುಷ್ಯನ ಜೀವನ ಹಾಳು ಮಾಡುವುದರ ಜೊತೆಗೆ, ಕುಟುಂಬ ಹಾಗೂ ಸಮಾಜದ ವ್ಯವಸ್ಥೆಯನ್ನು ಸಹ ಹಾಳುಗೆಡವುತ್ತವೆ. ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ಮಹಾಂತ ಜೋಳಿಗೆ ಎಂಬ ಕಲ್ಪನೆ ರೂಪಿಸಿ, ದೇಶ ವಿದೇಶಗಳಲ್ಲಿ ಸಂಚರಿಸಿ, ಜನರ ದುಶ್ಚಟಗಳನ್ನು ತಮ್ಮ ಜೋಳಿಗೆ ತುಂಬಿಸಿಕೊಂಡು ವ್ಯಸನಮುಕ್ತರನ್ನಾಗಿಸಿ ಜನರ ಜೀವನ ಹಸನು ಮಾಡಿದರು. ಪ್ರತಿ ಮಕ್ಕಳಿಗೂ ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿ ಹಿರಿಯರನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಹಿರಿಯರಲ್ಲಿ ದುಶ್ಚಟಗಳಿದ್ದರೆ, ಮಕ್ಕಳು ದುಪಟ್ಟು ದುಶ್ಚಟ ಮಾಡುತ್ತಾರೆ. ಶಾಲೆಯಲ್ಲಿ ಪಾಠ ಹೇಳುವ ಗುರುಗಳೇ ದುಶ್ಚಟಗಳ ದಾಸರಾದರೆ, ಮಕ್ಕಳಿಗೆ ದುಶ್ಚಟಗಳಿಂದ ದೂರ ಇರಿ ಎಂದು ಹೇಳುವ ನೈತಿಕತೆ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಮನಪರಿವರ್ತನೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಕೆಲ ಕೂಲಿ ಕಾರ್ಮಿಕರು ಕುಡಿತ, ಬೀಡಿ, ಗುಟುಕಾಗಳ ದಾಸರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇದರಿಂದ ಅವರ ಆರೋಗ್ಯ ಹಾಳಾಗುವುದರ ಜೊತೆಗೆ ದೇಹದಲ್ಲಿ ಕೆಲಸ ಮಾಡುವ ಚೈತನ್ಯ ಹಾಗೂ ಶಕ್ತಿ ಸಹ ಕಡಿಮೆಯಾಗುತ್ತಿದೆ. ನಗರ ಪ್ರದೇಶದಲ್ಲಿನ ಕಾಲೇಜುಗಳಲ್ಲಿ ಓದುತ್ತಿರುವ ಯುವಜನತೆ ಡ್ರಗ್ಸ್ಗಳ ಸೇವನೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಈ ಚಟಗಳಿಗೆ ಒಮ್ಮೆ ಅಂಟಿಕೊಂಡರೆ ಇವುಗಳಿಂದ ಹೊರ ಬರುವುದು ಕಷ್ಟದ ಕೆಲಸ. ಇನ್ನು ಧೂಮಪಾನ ಮಾಡುವವರ ಸುತ್ತಮುತ್ತ ಇರುವವರು ಸಹ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರಬಂದು ಮನೆ ಹಾಗೂ ದೇಶವನ್ನು ವ್ಯಸನ ಮುಕ್ತವಾಗಿಸಲು ಪ್ರತಿಯೊಬ್ಬರು ಪಣತೊಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.

ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 01 ದಿನವನ್ನು ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನವನ್ನಾಗಿ ಘೋಷಿಸಿದೆ. ಡಾ. ಮಹಾಂತ ಶಿವಯೋಗಿ ಸ್ವಾಮಿಗಳ ಪ್ರೇರಣೆಯಿಂದ ರಾಜ್ಯದ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸುಧೀರ್ಘ 42 ವರ್ಷಗಳ ಕಾಲ ನಾಡಿನಾದ್ಯಂತ ಸಂಚರಿಸಿ ಮಹಾಂತ ಜೋಳಿಗೆ ಹಿಡಿದು ಜನರಿಂದ ದುಶ್ಚಟಗಳ ಭಿಕ್ಷೆ ಪಡೆದು ಸ್ವಾಮೀಜಿಗಳು ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದರು.

ಅಬಕಾರಿ ನಿರೀಕ್ಷಕಿ ವನಿತಾ ಮಾತನಾಡಿ, ಯುವ ಜನತೆ ವ್ಯಸನಗಳಿಂದ ದೂರವಾಗಿ, ಕುಟುಂಬ ಹಾಗೂ ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು. ಮಾದಕ ವ್ಯಸನಗಳಾದ ಗಾಂಜಾ, ಹೆರಾಯಿನ್‌ಗಳಿಂದ ದೂರ ಇರಬೇಕು. ಇಂತಹ ಮಾದಕ ವಸ್ತುಗಳ ಮಾರಾಟದ ಬಗ್ಗೆ ತಿಳಿದು ಬಂದರೆ, ತಕ್ಷಣವೇ ಅಬಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಅಬಕಾರಿ ಇಲಾಖೆ ಮುಖ್ಯ ಪೇದೆ ರಮೇಶ್ ನಾಯ್ಕ್ ಮಾತನಾಡಿ, ಧೂಮಪಾನ ಮಾಡುವವರಿಗಿಂತ ಅವರ ಪಕ್ಕದಲ್ಲಿದ್ದು, ಅದರ ಪರಿಣಾಮಕ್ಕೆ ತುತ್ತಾಗುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ. ಧೂಮಪಾನ ನೇರವಾಗಿ ಕ್ಯಾನ್ಸರ್ ಗೆ ಕಾರಣವಾಗಿದೆ. ವಿಶ್ವದಲ್ಲಿ 120 ಕೋಟಿಗೂ ಅಧಿಕ ಜನ ಧೂಮಪಾನದಿಂದ ಭಾದಿತರಾಗಿದ್ದಾರೆ. ಶ್ವಾಸಕೋಶ, ಗಂಟಲು ಕ್ಯಾನ್ಸರ್ ಸೇರಿದಂತೆ, ಧೂಮಪಾನ ಮಾಡುವ ಗರ್ಭಿಣಿಯರಲ್ಲಿ ಹುಟ್ಟುವ ಮಗು ಸಹ ದುಷ್ಪರಿಣಾಮಕ್ಕೆ ತುತ್ತಾಗುತ್ತವೆ. ಹೀಗಾಗಿ ಪ್ರತಿಯೊಬ್ಬರು ಧೂಮಪಾನದಿಂದ ದೂರ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಡಾ.ಮಹಾಂತ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಿದರು. ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಾರ್ತಾ, ಅಬಕಾರಿ, ಶಿಕ್ಷಣ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಜಾಗೃತಿ ಜಾಥಾ : ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಜಾಗೃತಿ ಜಾಥಕ್ಕೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಹಾಗೂ ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ವ್ಯಸನ ಮುಕ್ತ ಸಮಾಜ ನಿಮಾರ್ಣದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಘೋಷಣೆ ಕೂಗುವುದರ ಜೊತೆಗೆ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಜಾಗೃತಿ ಜಾಥ ನಡೆಸಿದರು. ಒನಕೆ ಓಬವ್ವ ವೃತ್ತದಿಂದ ಆರಂಭವಾದ ಜಾಥಾ, ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ವಾಸವಿ ವೃತ್ತ ಮೂಲಕ ಪುನಃ ಒನಕೆ ಓಬವ್ವ ವೃತ್ತ ತಲುಪುವ ಮೂಲಕ ಸಂಪನ್ನಗೊಂಡಿತು.

ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಪಿಆರ್‌ಇಡಿ ಇಲಾಖೆ ಎಇಇ ಹನುಮಂತಪ್ಪ, ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಸೇರಿದಂತೆ ಇತರೆ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Tags :
Advertisement