Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶ್ರೀಕೃಷ್ಣ ಜಯಂತಿ | ಪ್ರಪಂಚದ ಎಲ್ಲ ತತ್ವಗಳು ಶ್ರೀಕೃಷ್ಣನ ಭಗವದ್ಗೀತೆಯಲ್ಲಿವೆ : ಪ್ರೊ.ಜಿ.ಪರಮೇಶ್ವರಪ್ಪ

06:33 PM Aug 26, 2024 IST | suddionenews
Advertisement

ಚಿತ್ರದುರ್ಗ. ಆ.26: ವ್ಯಾಸ ಭಾರತದಲ್ಲಿ ಭೀಷ್ಮನು ಸರ್ವ ಶಾಸ್ತ್ರಮಹೀ ಹೀ ಗೀತಾ ಎಂದು ಹೇಳಿದ್ದಾರೆ. ಅಂದರೆ ಪ್ರಪಂಚದ ಎಲ್ಲ ತತ್ವಗಳು ಶ್ರೀಕೃಷ್ಣನ ಭಗವದ್ಗೀತೆಯಲ್ಲಿವೆ ಎಂದು ಹೇಳಿರುವ ಭೀಷ್ಮನ ಮಾತು ಬಹಳ ಪ್ರಸಿದ್ಧವಾದುದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಪರಮೇಶ್ವರಪ್ಪ ಹೇಳಿದರು.

Advertisement

ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಕೃಷ್ಣ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಕೃಷ್ಣನ ಭಗವದ್ಗೀತೆ ಬದಲಾವಣೆ, ರೂಪಾಂತರ ಪಡೆಯದೇ ಯಥಾವತ್ತಾಗಿ ಉಳಿದಿದ್ದು, ಭಗವದ್ಗೀತೆ ಬಹಳ ಶ್ರೇಷ್ಠವಾಗಿ ಜಗತ್ತಿನಲ್ಲಿ ರಾರಾಜಿಸುತ್ತಿದೆ ಎಂದು ಹೇಳಿದರು.
ಕೃಷ್ಣ ಜನ್ಮಾಷ್ಟಮಿ ನೆನೆಸಿಕೊಂಡರೆ ಬಹುಶಃ ಪ್ರತಿಯೊಬ್ಬರಿಗೂ ಆನಂದ ಉಂಟು ಮಾಡುವ ಸಂದರ್ಭವಾಗಿದೆ. ಶ್ರೀ ಕೃಷ್ಣ ಚರಿತ್ರೆ ಬಾಲ್ಯ, ಯೌವ್ವನ ಹಾಗೂ ಸನ್ಯಾಸತ್ವ ಸೇರಿದಂತೆ ಒಟ್ಟು ಮೂರು ಹಂತದಲ್ಲಿ ಬರುತ್ತದೆ. ಋಷಿ ಮುನಿಗಳ ಪ್ರಕಾರ ಒಬ್ಬ ಮನುಷ್ಯ ಮಹಾತ್ಮನಾಗಬೇಕಾದರೆ, ದೇವಾತ್ಮನಾಗಬೇಕಾದರೆ ಆರು ಗುಣಗಳಿರಬೇಕು. ಶ್ರೀಮಂತಿಕೆ, ಅಧಿಕಾರ, ಕೀರ್ತಿವಂತ, ಸೌಂದರ್ಯ, ದಾನಿ ಹಾಗೂ ತ್ಯಾಗಿಯಾಗಿರಬೇಕು. ಈ ಎಲ್ಲ ಗುಣಗಳು ಶ್ರೀಕೃಷ್ಣನಿಗೆ ಇದ್ದವು. ಹಾಗಾಗಿ ಕೃಷ್ಣನು ದೇವ ಪುರುಷ, ದೇವಾತ್ಮನಾದ ಎಂದು ಹೇಳಿದರು.

Advertisement

ಮೊಟ್ಟ ಮೊದಲಿಗೆ ಶ್ರೀಕೃಷ್ಣನ ಕಥೆಯನ್ನು ಹೇಳಿದವರು ಕನ್ನಡದ ಕವಿ ಪಂಪ. ತನ್ನ ಕಾವ್ಯದಲ್ಲಿ ಶ್ರೀಕೃಷ್ಣನ ಪಾತ್ರವನ್ನು ರಾಜಕೀಯ ಮುತ್ಸದ್ದಿಯಾಗಿ ಚಿತ್ರಣ ಮಾಡಿದ್ದಾನೆ. ಕುಮಾರವ್ಯಾಸ ಕವಿಯು ಕೃಷ್ಣನನ್ನು ಭಕ್ತನನ್ನಾಗಿ ಬಿಂಬಿಸಿರುವುದನ್ನು ಕಾಣಬಹುದಾಗಿದೆ. ಪಂಪ ಕವಿ ಅರ್ಜುನನ್ನು ಕಥಾ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡರೆ, ಕುಮಾರವ್ಯಾಸ, ಕೃಷ್ಣನನ್ನು ತನ್ನ ಕಾವ್ಯದ ಕಥಾ ನಾಯಕನನ್ನಾಗಿ ಮಾಡಿಕೊಂಡಿದ್ದಾನೆ ಎಂದು ಹೇಳಿದರು.

ಮಹನೀಯರ ಆದರ್ಶಗಳನ್ನು ಜನರಿಗೆ ಮುಟ್ಟಿಸುವ ಸದುದ್ದೇಶದಿಂದ ಸರ್ಕಾರ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಮಹನೀಯರ ತತ್ವಾದರ್ಶಗಳ ಪಾಲನೆ ಮೂಲಕ ಸಮಾಜದ ಮಲಿನತೆಯನ್ನು ಸರಿ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಚಿತ್ರದುರ್ಗದ ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಮಾತನಾಡಿ, ಸಮಾಜ, ದೇಶ ಹಾಗೂ ವಿಶ್ವಕ್ಕೆ ದಾರಿತೋರಿಸುವ ನಿಟ್ಟಿನಲ್ಲಿ ಶ್ರೀಕೃಷ್ಣ ಕೊಡುಗೆ ಅಪಾರ.  ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಧರ್ಮ ಸ್ಥಾಪನೆಗಾಗಿ ಜನಿಸಿದ ಶ್ರೀಕೃಷ್ಣನ ಭಗವದ್ಗೀತೆ ಪ್ರತಿಯೊಬ್ಬರೂ ಓದಬೇಕು ಹಾಗೂ ಕೃಷ್ಣನ ಗೀತೋಪದೇಶಗಳನ್ನು ನಾವೆಲ್ಲರೂ ಪಾಲಿಸುತ್ತಾ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸೋಣ ಎಂದು ಹೇಳಿದರು.

ಚಿತ್ರದುರ್ಗದ ಅಖಿಲ ಭಾರತ ಯಾದವ ಗುರುಪೀಠದ ಕೃಷ್ಣ ಯಾದವನಂದ ಸ್ವಾಮೀಜಿ ಅವರು ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಕೃಷ್ಣ ಸರ್ಕಲ್‍ನಲ್ಲಿ ಶ್ರೀಕೃಷ್ಣರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಸಂಘದ ಕಾರ್ಯದರ್ಶಿ ಬಿ.ಆನಂದ, ಯಾದವ ಸಮಾಜದ ಮುಖಂಡರಾದ ಕದಿರಣ್ಣ, ಜಾಲಿಕಟ್ಟೆ ಜಗಣ್ಣ, ಗರಡಿ ತಿಮ್ಮಣ್ಣ, ಕೃಷ್ಣಪ್ಪ  ಸೇರಿದಂತೆ ಮತ್ತಿತರರು ಇದ್ದರು. ಚಿತ್ರದುರ್ಗ ತಾಲ್ಲೂಕು ಆಯಿತೋಳು ಮಾರುತೇಶ್ ಮತ್ತು ತಂಡದವರಿಂದ ಗೀತ ಗಾಯನ ನಡೆಸಿಕೊಟ್ಟರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

Advertisement
Tags :
All principles of the worldLord Krishna's Bhagavad GitaProf. G. ParameshwarappaSri Krishna Jayantiತತ್ವಪ್ರೊ.ಜಿ.ಪರಮೇಶ್ವರಪ್ಪಶ್ರೀಕೃಷ್ಣ ಜಯಂತಿಶ್ರೀಕೃಷ್ಣನ ಭಗವದ್ಗೀತೆ
Advertisement
Next Article