For the best experience, open
https://m.suddione.com
on your mobile browser.
Advertisement

ಜನಸ್ನೇಹಿ ಆಡಳಿತಕ್ಕೆ ಆರು ತಿಂಗಳು : ಜನರಿಗೆ ಸರಳ, ಸುಲಭ ಮತ್ತು ತ್ವರಿತ ಆಡಳಿತ : ಜಿಲ್ಲಾಧಿಕಾರಿ ದಿವ್ಯಪ್ರಭು

06:58 PM Nov 28, 2023 IST | suddionenews
ಜನಸ್ನೇಹಿ ಆಡಳಿತಕ್ಕೆ ಆರು ತಿಂಗಳು   ಜನರಿಗೆ ಸರಳ  ಸುಲಭ ಮತ್ತು ತ್ವರಿತ ಆಡಳಿತ   ಜಿಲ್ಲಾಧಿಕಾರಿ ದಿವ್ಯಪ್ರಭು
Advertisement

Advertisement
Advertisement

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

Advertisement

ಸುದ್ದಿಒನ್, ಚಿತ್ರದುರ್ಗ,ನವೆಂಬರ್.28 : ರಾಜ್ಯದಲ್ಲಿ ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿವೆ.  ಜನರ ದೈನಂದಿನ ಬದುಕಿನ ಜೊತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಬೆಸೆದುಕೊಂಡು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಕಂದಾಯ ಇಲಾಖೆಯು ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ವಿವಿಧ ಯೋಜನೆಗಳನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 06 ತಿಂಗಳ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಮಾಡಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

Advertisement
Advertisement

ಪ್ರಸಕ್ತ ಸರ್ಕಾರಕ್ಕೆ ಆರು ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಡಿ ಈ ಅವಧಿಯಲ್ಲಿ ಆಗಿರುವ ಸಾಧನೆ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ನೀಡಿರುವ ಅವರು, ಸಾರ್ವಜನಿಕರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಂದಾಯ ಇಲಾಖೆಯು ಜನಸಾಮಾನ್ಯರ ಜೀವನಕ್ಕಾಗಿ, ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಸರ್ಕಾರದ ಹಲವು ಸೌಲಭ್ಯಗಳು, ಯೋಜನೆಗಳು ಅಲ್ಲದೆ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ.

ಹೀಗಾಗಿ ಕಂದಾಯ ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದಾಗಿ ಕಚೇರಿ ಕೆಲಸ ಕಾರ್ಯಗಳ ಪ್ರಕ್ರಿಯೆಗಳನ್ನು ಸರ್ಕಾರ ಸರಳ, ಪಾರದರ್ಶಕ ಹಾಗೂ ಡಿಜಟಲೀಕರಣಗೊಳಿಸಿದೆ.  ಕಳೆದ ಆರು ತಿಂಗಳಿನ ಅವಧಿಯಲ್ಲಿ ಇಲಾಖೆಯ ಕೆಲಸದ ಕಾರ್ಯವೈಖರಿಯನ್ನು ಸಾಕಷ್ಟು ಸರಳೀಕರಣಗೊಳಿಸಲಾಗಿದೆ. ಜನರ ನೂರಾರು ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲಾಗಿದೆ, ಬಗೆಹರಿಸಲಾಗಿದೆ.  ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.

ಇತ್ತೀಚೆಗಷ್ಟೇ ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು, ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ್ದು, ಇನ್ನಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.

ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಿ ಕಚೇರಿಗಳಿಗೆ, ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ, ಸರ್ಕಾರವೇ ಜನರ ಬಳಿಗೆ ತೆರಳಿ, ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಸದುದ್ದೇಶದಿಂದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು, ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಹಾಗೂ ಪ್ರತಿ ಹದಿನೈದು ದಿನಗಳಿಗೊಮ್ಮೆ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಜನರ ಕುಂದುಕೊರತೆ ಅರ್ಜಿಗಳನ್ನು ಪಡೆದು, ತ್ವರಿತವಾಗಿ ಸ್ಪಂದಿಸುವಂತೆ  “ಜನತಾದರ್ಶನ” ಎನ್ನುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದ್ದಾರೆ.

ಅದರಂತೆ ಈಗಾಗಲೆ ಜಿಲ್ಲೆಯಲ್ಲಿ ಹಿರಿಯೂರು ಮತ್ತು ಧರ್ಮಪುರದಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಹಾಗೂ ಚಿತ್ರದುರ್ಗ, ಹೊಸದುರ್ಗ ಮತ್ತು ಅತ್ತಿಮಗ್ಗೆ ಯಲ್ಲಿ ತಾಲ್ಲೂಕು ಮಟ್ಟದ  ಜನತಾದರ್ಶನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.

ಜನತಾದರ್ಶನದಲ್ಲಿ ಒಟ್ಟು 1129 ಅರ್ಜಿಗಳು ಸಲ್ಲಿಕೆಯಾಗಿದ್ದು, ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುತ್ತಿದೆ.  ಇವೆಲ್ಲ ಅರ್ಜಿಗಳನ್ನು ಐಪಿಜಿಆರ್‍ಎಸ್ ತಂತ್ರಾಂಶದಲ್ಲಿ ನಮೂದಿಸಿ, ಗಣಕೀಕೃತಗೊಳಿಸಲಾಗಿದೆ.

ಅಟಲ್ ಜನಸ್ನೇಹಿ ಕೇಂದ್ರದಲ್ಲಿ 3.68 ಲಕ್ಷ ಅರ್ಜಿಗಳಿಗೆ ಸೇವೆ : ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿನ 42 ಸಾರ್ವಜನಿಕ ಸೇವೆಗಳ ಪೈಕಿ 22 ಸೇವೆಗಳನ್ನು ಎನ್‍ಕೆ-4 ರಿಂದ ಎನ್‍ಕೆ-5 ವರ್ಷನ್‍ಗೆ ವಿಲೀನಗೊಳಿಸಲಾಗಿದೆ. ಸಾರ್ವಜನಿಕರು ವಿವಿಧ ಸೇವೆ ಬಯಸಿ  ಆನ್‍ಲೈನ್ ಮೂಲಕ ಸಲ್ಲಿಸುವ ಅರ್ಜಿಗಳ ಪ್ರತಿಯೊಂದು ಸ್ಥಿತಿಗತಿಗಳ ಬಗ್ಗೆ ಅರ್ಜಿದಾರರ ಮೊಬೈಲ್‍ಗಳಿಗೆ ಸಂದೇಶ ರವಾನೆಯಾಗುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಕಳೆದ 6 ತಿಂಗಳಿಂದ ಜಿಲ್ಲೆಯ ಎಲ್ಲಾ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಒಟ್ಟಾರೆಯಾಗಿ 4,41,496 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 3,68,094 ಅರ್ಜಿಗಳಿಗೆ  ವಿವಿಧ ಸೇವೆ ಒದಗಿಸಲಾಗಿದೆ. 51,876 ಅರ್ಜಿಗಳು ನಾನಾ ಕಾರಣಗಳಿಗಾಗಿ ತಿರಸ್ಕøತಗೊಂಡಿದ್ದು, ಒಟ್ಟಾರೆಯಾಗಿ 4,19,970 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.  ಜಿಲ್ಲೆಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಶೇ.95.12 ರಷ್ಟು ಉತ್ತಮ ಪ್ರಗತಿ ಸಾಧಿಸಲಾಗಿದೆ.

ಮ್ಯುಟೇಷನ್ ವಿಲೇವಾರಿ ಶೇ.96.51 ಪ್ರಗತಿ:
ಭೂಮಿ ತಂತ್ರಾಂಶದ ಮೂಲಕ ಜಮೀನುಗಳ ಮ್ಯುಟೇಷನ್ ವಹಿವಾಟು ವಿಲೇವಾರಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ಕಾಲಮಿತಿಯೊಳಗೆ ವಹಿವಾಟು ವಿಲೇವಾರಿ ಮಾಡುವಂತೆ ಸರ್ಕಾರದಿಂದ ಸ್ಪಷ್ಪ ನಿರ್ದೇಶನವಿದೆ. ಕಳೆದ 6 ತಿಂಗಳ ಅವಧಿಯಲ್ಲಿ ವಿವಾದರಹಿತ ಮ್ಯುಟೇಷನ್‍ಗಳು, ಋಣಭಾರಗಳು, ವಿವಾದಿತ ಮ್ಯುಟೇಷನ್‍ಗಳ ವಿಲೇವಾರಿಯಲ್ಲಿ ಒಟ್ಟಾರೆಯಾಗಿ 44,710 ಪ್ರಕರಣಗಳಲ್ಲಿ 43,151 ವಿಲೇವಾರಿ  ಮಾಡಲಾಗಿದ್ದು, ಶೇ.96.51 ರಷ್ಟು ಪ್ರಗತಿ ಸಾಧಿಸಲಾಗಿದೆ.

458 ಪೈಕಿ ಪಹಣಿ ಪ್ರಕರಣ ವಿಲೇವಾರಿ: ಭೂಮಿ ತಂತ್ರಾಂಶದಡಿಯಲ್ಲಿ ಪೈಕಿ ಪಹಣಿಗಳ ಒಟ್ಟುಗೂಡಿಸುವಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪೈಕಿ ಪಹಣಿಗಳನ್ನು ಒಟ್ಟುಗೂಡಿಸಲು ಜಿಲ್ಲೆಯಲ್ಲಿ ಒಟ್ಟಾರೆ 516 ಪ್ರಕರಣಗಳು ಬಾಕಿ ಇರುತ್ತದೆ.  ಕಳೆದ 6 ತಿಂಗಳಲ್ಲಿ ಬಾಕಿ ಇರುವ 516 ಪ್ರಕರಣಗಳ ಪೈಕಿ 458 ಪ್ರಕರಣಗಳ ಪೈಕಿ ಪಹಣಿಗಳನ್ನು ಒಟ್ಟುಗೂಡಿಸಲಾಗಿದ್ದು, ಶೇ.88.75 ರಷ್ಟು ಪ್ರಗತಿ ಸಾಧಿಸಲಾಗಿದೆ.

ಆಡಳಿತದಲ್ಲಿ ಪಾರದರ್ಶಕತೆಗೆ ಇ-ಆಫೀಸ್ ಅನುಷ್ಠಾನ : ಕಂದಾಯ ಇಲಾಖೆಯ ದೈನಂದಿನ ಕಡತಗಳ ಚಲನವಲನಗಳಲ್ಲಿ ಪಾರದರ್ಶಕೆಯನ್ನು ತರಲು ಇ-ಆಫೀಸ್ ಅನುಷ್ಠಾನವನ್ನು ಕಡ್ಡಾಯಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಈಗಾಗಲೇ ಇ-ಆಫೀಸ್ ಅನುಷ್ಠಾನಗೊಂಡು ಕಾರ್ಯರೂಪದಲ್ಲಿ ಜಾರಿಯಾಗಿರುತ್ತದೆ.  ಇ-ಆಫೀಸ್ ವ್ಯವಸ್ಥೆಯಿಂದ ಕಡತ ವಿಲೇವಾರಿಯಲ್ಲಿ ವೇಗ, ಪಾರದರ್ಶಕತೆ ಬರಲಿದ್ದು, ಪ್ರತಿ ಕಡತವೂ ಸುರಕ್ಷಿತವಾಗಿರಲಿದೆ.  ಜಿಲ್ಲೆಯಲ್ಲಿ ಇ-ಆಫೀಸ್‍ನಡಿ ಒಟ್ಟು 26,661 ಸ್ವೀಕೃತಿಗಳು ಸೃಜನೆಯಾಗಿದ್ದು, 33,881 ಕಡತಗಳು ಚಲನೆಗೊಂಡಿವೆ.

ಸರ್ಕಾರಿ ಜಮೀನುಗಳ ಪ್ಲಾಗಿಂಗ್ ಕಾರ್ಯ:
ಸರ್ಕಾರದ ಆಸ್ತಿ, ಭೂಮಿ ಸುರಕ್ಷಿತವಾಗಿಸುವುದು ಹಾಗೂ ಒತ್ತುವರಿಯಾಗುವುದನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಇರುವಂತಹ ಎಲ್ಲಾ ವಿಧದ ಸರ್ಕಾರಿ ಜಮೀನುಗಳು, ಮಂಜೂರಾತಿ ಜಮೀನುಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂಡೀಕರಿಸುವಂತಹ ಪ್ಲಾಗಿಂಗ್ ಕಾರ್ಯವನ್ನು ಸರ್ಕಾರ ಜಾರಿಗೊಳಿಸಿದೆ.  ಜಿಲ್ಲೆಯಲ್ಲಿನ 23,300 ವಿವಿಧ ಸರ್ಕಾರಿ ಜಮೀನುಗಳು ಹಾಗೂ 20,319 ಮಂಜೂರಾತಿ ಜಮೀನುಗಳನ್ನು ತಂತ್ರಾಂಶದಲ್ಲಿ ಪ್ಲಾಗ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಕೊರತೆಯಿಂದಾಗಿ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದ್ದು,  ರೈತರಿಗೆ ಬರ ಪರಿಹಾರ ಮತ್ತು ಅಗತ್ಯ ಸೇವೆಗಳನ್ನು ನೀಡುವ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬರುವ ಭಾಗದಲ್ಲಿ ಅಗತ್ಯವಾಗಿ ಏನೆಲ್ಲಾ ಕ್ರಮಗಳನ್ನು ಜರುಗಿಸಬೇಕು ಎಂಬುದರ ಬಗ್ಗೆ ಕಾಲಕಾಲಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬರ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಕಾಲಕಾಲಕ್ಕೆ ಸಭೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗುತ್ತಿದೆ.

ಸಾರ್ವಜನಿಕರ ನ್ಯಾಯಯುತ ಮನವಿ, ಕೋರಿಕೆಗೆ ಸ್ಪಂದಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹ ಜನರಿಗೆ ಸರಳ, ಸುಲಭ ಮತ್ತು ತ್ವರಿತ ಆಡಳಿತ ನೀಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಜನರಿಗೆ ಸ್ಪಂದಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.

Advertisement
Tags :
Advertisement