For the best experience, open
https://m.suddione.com
on your mobile browser.
Advertisement

ಮೇ 10 ರಿಂದ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಹಂತದ ನೀರು ಬಿಡುಗಡೆ

05:20 PM May 08, 2024 IST | suddionenews
ಮೇ 10 ರಿಂದ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಹಂತದ ನೀರು ಬಿಡುಗಡೆ
Advertisement

Advertisement
Advertisement

ಚಿತ್ರದುರ್ಗ. ಮೇ.08: ಬರಗಾಲದ ಹಿನ್ನಲೆಯಲ್ಲಿ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ವಿವಿ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಇದೇ ಮೇ 10 ರಿಂದ 25 ದಿನಗಳ ಕಾಲ ವಾಣಿ ವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಯಿತು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ವಿ.ವಿ.ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

Advertisement

ವಾಣಿವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ 2023-24ನೇ ಸಾಲಿನಲ್ಲಿ ಅತೀ ಕಡಿಮೆ ಮಳೆಯಾಗಿರುವುದರಿಂದ, ರೈತರ ಜಮೀನುಗಳಿಗೆ ನೀರು ಹರಿಸುವುದು ಅವಶ್ಯವಿರುತ್ತದೆ. ಈ ಹಿನ್ನಲೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರು ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಬರಗಾಲ ಹಾಗೂ ಬೇಸಿಗೆಯ ಈ ಸಂದರ್ಭದಲ್ಲಿ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ರೈತರು ಮುತುವರ್ಜಿವಹಿಸಿ ನೀರು ಸದ್ಭಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡಬಾರದು. ಎಲ್ಲಿ ಅಗತ್ಯ ಹಾಗೂ ಅನಿವಾರ್ಯ ಇರುವ ಕಡೆ ಮಾತ್ರ ನೀರು ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೀಳು ಭೂಮಿಗೆ ಅನಾವಶ್ಯಕವಾಗಿ ನೀರು ಹರಿಸಬಾರದು. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡುವುದು ಕಂಡು ಬಂದರೆ ನೀರು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ ಅವರು, ಟ್ಯಾಂಕರ್ ಮೂಲಕ ವಾಣಿಜ್ಯ ಉದ್ದೇಶಕ್ಕಾಗಿ ನೀರು ಮಾರಾಟ ಮಾಡಬಾರದು. ಒಂದು ವೇಳೆ ವಾಣಿಜ್ಯ ಬಳಕೆಗಾಗಿ ನೀರು ಬಳಕೆ ಮಾಡುವುದು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನೀರು ಹರಿಸುವ ಮುನ್ನ ಅಚ್ಚುಕಟ್ಟು ಪ್ರದೇಶದಲ್ಲಿನ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹಾಗೂ ನೀರು ಹರಿಸಿದ ನಂತರದ ನೀರಿನ ಮಟ್ಟದ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ವಿವಿ ಸಾಗರ ನೀರಿನ ಪ್ರಮಾಣದ ವಿವರ: ವಿವಿ ಸಾಗರ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯವು 30.422 ಟಿಎಂಸಿಗಳಾಗಿದ್ದು, ಜಲಾಶಯದ ವ್ಯಾಪ್ತಿಯಲ್ಲಿ ಒಟ್ಟು 12135.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಇದರಲ್ಲಿ ಪ್ರಮುಖವಾಗಿ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ 5557.00 ಹೆಕ್ಟೇರ್ ಆಗಿರುತ್ತದೆ. ಉಳಿದಂತೆ 6578.00 ಹೆಕ್ಟೇರ್ ಖುಷ್ಕಿ ಜಮೀನು ಇರುತ್ತದೆ.

ಮೇ 08ರಂದು ವಿವಿ ಸಾಗರ ಜಲಾಶಯದಲ್ಲಿ 112 ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಈ ಮಟ್ಟಕ್ಕೆ ನೀರಿನ ಸಂಗ್ರಹಣೆಯು 16.96 ಟಿಎಂಸಿಗಳಾಗಿದ್ದು, ಇದರಲ್ಲಿ 1.87 ಟಿಎಂಸಿ ಬಳಕೆಗೆ ಬಾರದ ಪ್ರಮಾಣವಾಗಿರುತ್ತದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 15.09 ಟಿಎಂಸಿ ಇರುತ್ತದೆ. ಹಿರಿಯೂರು ಪಟ್ಟಣದ ಕುಡಿಯುವ ನೀರಿಗಾಗಿ, ಚಿತ್ರದುರ್ಗ ಪಟ್ಟಣದ ಕುಡಿಯುವ ನೀರಿಗಾಗಿ ಮತ್ತು ಚಳ್ಳಕೆರೆ ಪಟ್ಟಣ, ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳ ಕುಡಿಯುವ ನೀರಿಗಾಗಿ ಒಟ್ಟು 0.2115 ಟಿಎಂಸಿ ಅವಶ್ಯಕವಾಗಿರುತ್ತದೆ.

ಹಾಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಜಲಾಶಯದಿಂದ ಮಳೆಗಾಲದ ಬೆಳೆ ಹಾಗೂ ತೋಟಗಾರಿಕೆ ಹದ ನೀರನ್ನು 30 ದಿನ ಹರಿಸಿದರೆ ಸರಾಸರಿ ನೀರಿನ ಪ್ರಮಾಣ ಸುಮಾರು 1.40 ಟಿಎಂಸಿ ಬೇಕಾಗಲಿದೆ. ಆವಿಯಾಗುವ ನೀರಿನ ಪ್ರಮಾಣ ಸುಮಾರು 0.516 ಟಿಎಂಸಿ, ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ 2.127 ಟಿಎಂಸಿ, ಜಲಾಶಯದಲ್ಲಿ ಉಳಿಯಬಹುದಾದ ನೀರಿನ ಪ್ರಮಾಣ 14.83 ಟಿಎಂಸಿ (111.55 ಅಡಿಗಳು) ಇರಲಿದೆ. ಮೇಲ್ಮಟ್ಟದ ಕಾಲುವೆ ಅಚ್ಚುಕಟ್ಟು ಪ್ರದೇಶದ 03 ಗ್ರಾಮಗಳು, ಬಲನಾಲ ಅಚ್ಚುಕಟ್ಟು ಪ್ರದೇಶದ 21 ಗ್ರಾಮಗಳು ಹಾಗೂ ಎಡನಾಲ ಅಚ್ಚುಕಟ್ಟು ಪ್ರದೇಶದ 18 ಗ್ರಾಮಗಳು ಹಾಗೂ ನಾಲೆಗಳಲ್ಲಿ ನೀರನ್ನು ಬಿಟ್ಟಾಗ ಹಿರಿಯೂರು ತಾಲ್ಲೂಕಿನ 38 ಗ್ರಾಮಗಳ ಅಂತರ್ಜಲ ಅಭಿವೃದ್ಧಿಯಾಗಿ ಸಾರ್ವಜನಿಕರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನೂ ಸಹ ಸುಧಾರಿಸಬಹುದಾಗಿದೆ.

ಸಭೆಯಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ವಿವಿ ಸಾಗರ ಉಪವಿಭಾಗ ಹಿರಿಯೂರು ಕಾರ್ಯಪಾಲಕ ಇಂಜಿನಿಯರ್ ಬಾರಿಕರ್ ಚಂದ್ರಪ್ಪ, ಸಹಾಯ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಂ.ವಿ.ಮAಜುನಾಥ್, ಶಿರಸ್ತೆದಾರ ಸಣ್ಣಪ್ಪ, ವಿವಿ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಸುಂದರೇಶ್, ಅಸಿಲ್ ಆಲಿ, ಅನಿಲ್ ಕುಮಾರ್, ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.

Advertisement
Tags :
Advertisement