For the best experience, open
https://m.suddione.com
on your mobile browser.
Advertisement

ಸ್ಕೌಟ್ ಮತ್ತು ಗೈಡ್ಸ್ ಸಮಾಜದ ಕೈಗನ್ನಡಿ : ಪಿ.ಜಿ. ಆರ್. ಸಿಂಧ್ಯಾ

03:55 PM Mar 15, 2024 IST | suddionenews
ಸ್ಕೌಟ್ ಮತ್ತು ಗೈಡ್ಸ್ ಸಮಾಜದ ಕೈಗನ್ನಡಿ   ಪಿ ಜಿ  ಆರ್  ಸಿಂಧ್ಯಾ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.15 : ಸ್ಕೌಟ್ ಮತ್ತು ಗೈಡ್ಸ್ ನಿಂದ ಸಮಯಪ್ರಜ್ಞೆ, ಶಿಸ್ತು, ಸಮಾನತೆ, ಸರ್ವಧರ್ಮವನ್ನು ಗೌರವಿಸುವ ಗುಣ ಬೆಳೆಯುತ್ತದೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

Advertisement
Advertisement

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ದೊಡ್ಡ ಇತಿಹಾಸವಿದೆ. 1907 ರಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಆರಂಭವಾಯಿತು. ಕೊಂಜ್ಜಿಬಸಪ್ಪ, ಪಿ.ಶಿವಶಂಕರ್, ಶಂಕರ್‍ನಾರಾಯಣ್, ದೀನದಯಾಳ್‍ನಾಯ್ಡು ಸೇರಿದಂತೆ ಏಳು ಮುಖಂಡರುಗಳು ಮುಖ್ಯ ಆಯುಕ್ತರಾಗಿ ಸಂಸ್ಥೆಗೆ ದುಡಿದಿದ್ದಾರೆ. ಚಿತ್ರದುರ್ಗದವರೆ ಆದ ಎಸ್.ನಿಜಲಿಂಗಪ್ಪ, ಹೋ.ಚಿ.ಬೋರಯ್ಯ, ಇಮಾಂಸಾಬ್ ಇವರುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ನಮ್ಮ ರಾಜ್ಯದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಇನ್ನು ಬೆಳೆಯಬೇಕು. ಇದರಿಂದ ಮಕ್ಕಳಲ್ಲಿ ಶಿಸ್ತು ಕಲಿಸುತ್ತದೆ. ಭಾರತದ ಸೈನಿಕರಲ್ಲಿ ಶಿಸ್ತು ನೋಡಬಹುದು. ಸ್ಕೌಟ್ ಸಮಾಜದ ಕೈಗನ್ನಡಿಯಿದ್ದಂತೆ.

ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕಾದರೆ ಶಿಸ್ತು ಬಹಳ ಮುಖ್ಯ. ಸ್ಕೌಟ್ ಗೈಡ್ ಹೆಸರೆ ಸೇವೆ ಮತ್ತು ಶಿಸ್ತು. ಪ್ರತಿನಿತ್ಯ ಮಕ್ಕಳು, ವ್ಯಾಯಾಮ, ಪ್ರಾರ್ಥನೆ, ಪ್ರತಿಜ್ಞೆಯಾದರೂ ಮಾಡಿ. ಸರ್ವಧರ್ಮ ಪ್ರಾರ್ಥನೆಯಲ್ಲಿರುವ ಒಳ್ಳೆ ಗುಣಗಳನ್ನು ತೆಗೆದುಕೊಂಡು ಸತ್ಯವನ್ನು ಪರಿಪಾಲಿಸಬೇಕು. ಕೇವಲ ಭಾಷಣ, ಸರ್ಕಾರದ ಆದೇಶಗಳಿಂದ ಸಮಾಜ ಸುಧಾರಣೆಯಾಗುವುದಿಲ್ಲ. ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕಾಲೋನಿಗಳಲ್ಲಿ ಸ್ಕೌಟ್ ಅಂಡ್ ಗೈಡ್ಸ್ ತರಬೇತಿ ನೀಡಬೇಕು ಎಂದು ಶಿಕ್ಷಕರುಗಳಿಗೆ ಕರೆ ನೀಡಿದರು.

ಚಿತ್ರದುರ್ಗ ಬಡತನದ ಜಿಲ್ಲೆ ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳು ಶಿಕ್ಷಕರುಗಳಿರುತ್ತಾರೆ. ಹಾಗಂತ ಖಾಸಗಿ ಶಾಲೆಗಳಲ್ಲಿ ಇರುವುದಿಲ್ಲ ಎಂದರ್ಥವಲ್ಲ. ಸಮವಸ್ತ್ರ ತೊಟ್ಟುಕೊಳ್ಳುವುದು ಒಂದು ಅವಕಾಶ. ಇದರ ಬೆಲೆ ತಿಳಿದುಕೊಂಡು ಸಂಸ್ಥೆಗೆ ಸಮಯ ಕೊಡಿ. ಜೂನ್, ಜುಲೈ, ಆಗಸ್ಟ್‌ನಲ್ಲಿ ಹೊಸ ಮಕ್ಕಳನ್ನು ಸೇರಿಸಿಕೊಂಡು ಯೂನಿಟ್ ನಡೆಸಿ ತರಬೇತಿ ಕೊಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ. ಎಲ್ಲಾ ಸರ್ಕಾರಗಳು ಇಲ್ಲಿಯವರೆಗೂ ನಮಗೆ ಸಹಕಾರ ನೀಡುತ್ತ ಬರುತ್ತಿವೆ. ಮಕ್ಕಳಿಗೆ ಜೀವನದಲ್ಲಿ ಶಿಸ್ತು ಕಲಿಸಿದರೆ ಪಾಠ ಪ್ರವಚನಗಳಲ್ಲಿ ತನ್ನಷ್ಟೆ ತಾನೆ ಅಂಕಗಳನ್ನು ಗಳಿಸುತ್ತಾರೆ. ಸ್ಕೌಟ್ ಗೈಡ್‍ನಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬೇಡ. 2023-24 ನೇ ಸಾಲಿನಲ್ಲಿ ಒಂದು ಲಕ್ಷದ ಐವತ್ತು ಸಾವಿರ ಮಕ್ಕಳಿಗೆ ಬೇಸಿಗೆ ಶಿಬಿರ ಮಾಡಿದ್ದೇವೆ. ಈ ಸಾರಿ ಎರಡು ಲಕ್ಷ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುವ ಗುರಿಯಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಸರ್ಕಾರದ ಪ್ರೋತ್ಸಾಹ ಬೇಕು ಎಂದು ವಿನಂತಿಸಿದರು.

ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ 1963 ರಲ್ಲಿ ಚಿತ್ರದುರ್ಗದಲ್ಲಿ ಸಂಸ್ಥೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗೆ ಪ್ರಯೋಜನವಾಗಲಿ ಎನ್ನುವ ಕಾರಣಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೇರೆ ಎಲ್ಲಾ ಕಡೆ ಜಾಗ ಹುಡುಕಾಡಿದೆವು. ಸಿಗದ ಕಾರಣ ಹೃದಯ ಭಾಗದಲ್ಲಿರುವ ಇಲ್ಲಿ ಕಟ್ಟಡ ಕಟ್ಟಲು ಅನೇಕರು ಶ್ರಮಿಸಿದ್ದಾರೆ. ಸ್ಕೌಟ್ ಅಂಡ್ ಗೈಡ್ಸ್ ಬೆಳವಣಿಗೆಯಾಗಬೇಕೆನ್ನುವುದು ನಮ್ಮ ಉದ್ದೇಶ ಎಂದರು.

ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಿ.ಎಸ್.ಉಜ್ಜಿನಪ್ಪ ಮಾತನಾಡುತ್ತ ಆರೋಗ್ಯ ಎಲ್ಲರಿಗೂ ತುಂಬಾ ಮುಖ್ಯ. ಹಾಗಾಗಿ ಇಂತಹ ಸಂಸ್ಥೆಯಲ್ಲಿ ಸೇವೆ ಮಾಡುವ ಮೂಲಕ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬಹುದು. ನಿರ್ಭಯವಾಗಿರಬೇಕು. ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ವಿಚಾರ ಗೊತ್ತಾಗುತ್ತದೆ ಎಂದು ಹೇಳಿದರು.

ಗೈಡ್ಸ್ ಆಯುಕ್ತೆ ಸವಿತಾ ಶಿವಕುಮಾರ್ ಮಾತನಾಡಿ ಪೋಷಕರು, ಶಿಕ್ಷಕರು, ಗುರು-ಹಿರಿಯರು, ದೇಶಕ್ಕೆ ವಿದೇಯರಾಗಿ ನಡೆದುಕೊಳ್ಳುವ ಗುಣ ಸ್ಕೌಟ್ ಅಂಡ್ ಗೈಡ್ಸ್‍ನಿಂದ ಕಲಿಯಬಹುದು ಎಂದು ಸಂಸ್ಥೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

ಡಾನ್‍ಬೋಸ್ಕೋ ಶಿಕ್ಷಣ ಸಂಸ್ಥೆಯ ಸಜ್ಜಿ ಫಾದರ್ ಮಾತನಾಡುತ್ತ ಶಿಕ್ಷಣದ ಜೊತೆ ಮಕ್ಕಳ ಸರ್ವಾಂಗೀಣ ಬೆಳವಣಿಯಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಪಾತ್ರ ಮುಖ್ಯ. ಮುಂದಿನ ಜೀವನದ ಭವಿಷ್ಯಕ್ಕೆ ಸಂಸ್ಥೆಯಲ್ಲಿ ಕಲಿಯುವ ಪಾಠ ಅನುಕೂಲವಾಗುತ್ತದೆ. ಕೇವಲ ಖಾಸಗಿ ಶಾಲೆಗಳಿಗಷ್ಟೆ ಮೀಸಲಾಗಿರದೆ ಸರ್ಕಾರಿ ಶಾಲೆಗಳಿಗೆ ಮುಟ್ಟಬೇಕು. ಸಾರ್ವಜನಿಕರು ಸಂಸ್ಥೆಯೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು.

ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಪರಮೇಶ್, ನಾರಾಯಣಸ್ವಾಮಿ, ಶ್ರೀಮತಿ ಶೀಲ ಮಂಜುನಾಥ್, ಸ್ಕೌಟ್ ಆಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಡಾ.ರಹಮತ್‍ವುಲ್ಲಾ, ತರಬೇತುದಾರ ಚಂದ್ರಪ್ರಕಾಶ್ ವೇದಿಕೆಯಲ್ಲಿದ್ದರು.

ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್‍ಪ್ರಸಾದ್, ಹೊಳಲ್ಕೆರೆ ತಾಲ್ಲೂಕು ಕಾರ್ಯದರ್ಶಿ ಜಾದು ಮೋಹನ್‍ಕುಮಾರ್, ಸ್ಕೌಟ್ ಜಿಲ್ಲಾ ಸಹಾಯಕ ಆಯುಕ್ತ ವಿ.ಎಲ್.ಪ್ರಶಾಂತ್, ಖಜಾಂಚಿ ಎ.ಅನ್ವರ್‍ಭಾಷ, ಶಿಕ್ಷಕರುಗಳಾದ ಚಮನ್‍ಬೀ, ನೂರ್ ಫಾತಿಮ, ವಿಶ್ವನಾಥ್, ಕಮಲಮ್ಮ, ಲಕ್ಷ್ಮಿದೇವಿ, ಯಶೋದಮ್ಮ, ಸುನಂದಮ್ಮ, ಓಬಳೇಶ್, ರವಿ ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
Advertisement