Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರೈತರ ಖಾತೆಗೆ ಶೀಘ್ರ ಬರ ಪರಿಹಾರ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

06:04 PM Jan 06, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.06 : ಫ್ರೂಟ್ಸ್ ತಂತ್ರಾಂಶ ಆಧರಿಸಿ ನೇರವಾಗಿ ರೈತರ ಖಾತೆ ಬರ ಪರಿಹಾರದ ಧನ ವರ್ಗಾಯಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ ಜಾರಿಮಾಡಲಿದೆ. ಈಗಾಗಲೇ ತಾಲ್ಲೂಕಿನ 29 ಸಾವಿರ ರೈತರ ವಿವರಗಳನ್ನು ಪ್ರೂಟ್ಸ್ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ಶೀಘ್ರವಾಗಿ ಪರಿಹಾರ ಧನ ನೇರವಾಗಿ ರೈತರ ಖಾತೆ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು. 

Advertisement

ಚಳ್ಳಕೆರೆ ನಗರದ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜನರ ಮನೆ ಬಾಗಿಲಿಗೆ ತೆರಳಿ, ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶವನ್ನು ಜನತಾ ದರ್ಶನ ಕಾರ್ಯಕ್ರಮ ಹೊಂದಿದೆ. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಐ.ಪಿ.ಆರ್.ಜಿ.ಎಸ್  ಪೋರ್ಟಲ್ ಮೂಲಕ ಗಣಕೀಕೃತಗೊಳಿಸಲಾಗುವುದು. ಹೀಗೆ ಗಣೀಕೃತಗೊಂಡ ಅರ್ಜಿಗಳಿಗೆ ಜಿಲ್ಲಾ ಹಂತದಲ್ಲಿ ಪರಿಹಾರ ದೊರಕದಿದ್ದರೆ. ಸರ್ಕಾರದ ಉನ್ನತ ಅಧಿಕಾರಿಗಳು ಸಹ ಈ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲು ಐ.ಪಿ.ಆರ್.ಜಿ.ಎಸ್ ಪೋರ್ಟಲ್‍ನಲ್ಲಿ ಅವಕಾಶವಿದೆ. ಆಡಳಿತದಲ್ಲಿ ಪಾರರ್ಶಕತೆ ತರುವ ಸಲುವಾಗಿ ಸಕಾಲ ಹಾಗೂ ಇ-ಆಪೀಸ್‍ಗಳನ್ನು ಎಲ್ಲಾ ತಾಲ್ಲೂಕು ಕಚೇರಿ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೂ ಜರುಗಿದ 8 ಜನತಾ ದರ್ಶನದಲ್ಲಿ 2229 ಅರ್ಜಿಗಳು ಸ್ವೀಕರಿಸಲಾಗಿದೆ. ಇದರಲ್ಲಿ 1304 ಅರ್ಜಿಗಳನ್ನು ವಿಲೇವಾರಿ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. 925 ಅರ್ಜಿಗಳ ವಿಲೇವಾರಿಗೆ ಬಾಕಿಯಿದೆ. ಇದರಲ್ಲಿ 392 ಕಂದಾಯ ಹಾಗೂ 503 ಇತರೆ ಇಲಾಖೆ ಸಂಬಂಧಪಟ್ಟ ಅರ್ಜಿಗಳಿವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾಹಿತಿ ನೀಡಿದರು.

ಜನರ ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆಗಳು: ಜನತಾ ದರ್ಶನದ ಅಂಗವಾಗಿ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದ ಎದುರು ಹಾಕಲಾಗಿದ್ದ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳು ಜನರ ಗಮನ ಸೆಳೆದವು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಪೋಟೋ ಸ್ಟ್ಯಾಂಡ್ ಬಳಿ ಮಹಿಳೆಯರು  ಪೋಟೋ  ತೆಗೆದುಕೊಳ್ಳುವ ದೃಶ್ಯ ಕಂಡುಬಂದಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ರಘುಮೂರ್ತಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಗೃಹಲಕ್ಷ್ಮೀ  ಪೋಟೋ   ಸ್ಟ್ಯಾಂಡ್ ಬಳಿ  ಪೋಟೋ  ಪೋಸ್ ನೀಡಿ ಸಂಭ್ರಮಿಸಿದರು.

ರೈತರಿಗೆ ಅನುಕೂಲವಾಗುವಂತೆ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿಗೆ ಅಗತ್ಯವಾದ ಯಂತ್ರಗಳು, ಸಾವಯವ ಗೊಬ್ಬರಗಳ ಬಳಕೆ, ರೇಷ್ಮೆ ಕೃಷಿ ಸಾಗಾಣಿಕೆ ಮಳಿಗೆಗಳನ್ನು ತೆರೆಯಲಾಗಿತ್ತು.
ಚಳ್ಳಕೆರೆ ನಗರಸಭೆಯಿಂದ ಕಸ ವಿಂಗಡಣೆ ಹಾಗೂ ನೈರ್ಮಲ್ಯ ಹಾಗೂ ಪರಿಸರ ರಕ್ಷಣೆ ಕುರಿತಾದ ವಿಡಿಯೋ ತುಣುಕನ್ನು ಎಲ್.ಇ.ಡಿ ಪರದೆ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸ್ತ್ರೀ ಸ್ವ-ಸಹಾಯ ಸಂಘಗಳು ಮಹಿಳೆಯರು ತಯಾರಿಸಿದ ರೊಟ್ಟಿ, ಸಿಹಿ ತಿನಿಸು, ಉಪ್ಪಿನಕಾಯಿ ಸೇರಿದಂತೆ ಇತರೆ ಉತ್ಪನ್ನಗಳನ್ನು ಜನರು ಆಸಕ್ತಿಯಿಂದ ಖರೀದಿಸಿದರು. ನಂದಿನಿ ಸಹಿ ಉತ್ಪನ್ನಗಳು, ಜಲಜೀವನ್ ಮಿಷನ್, ಶಿಕ್ಷಣ ಇಲಾಖೆ ಆರೋಗ್ಯ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳು ಇದ್ದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂಧರ್ ಕುಮಾರ್ ಮೀನಾ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಡಿವೈಎಸ್‍ಪಿ ರಾಜಣ್ಣ, ತಹಶೀಲ್ದಾರ್ ರೆಹಾನ್ ಪಾಷಾ, ತಾಲ್ಲೂಕು ಪಂಚಾಯಿತಿ ಇಒ ಶಶಿಧರ್ ಸೇರಿದಂತೆ ಚಳ್ಳಕೆರೆ ನಗರಸಭೆ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

 

Advertisement
Tags :
chitradurgaDC Divya Prabhu G.R.JDistrict Collector Divya Prabhu G.R.J.drought reliefFarmersಚಿತ್ರದುರ್ಗಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆಬರ ಪರಿಹಾರರೈತರ ಖಾತೆ
Advertisement
Next Article