Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಕಲ್ಪಿಸಿ : ಪಿ.ಎಂ.ನರೇಂದ್ರ ಸ್ವಾಮಿ

07:32 PM Oct 19, 2024 IST | suddionenews
Advertisement

 

Advertisement

ಚಿತ್ರದುರ್ಗ. ಅ.19:  ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿದ್ದು, ತಳಸಮುದಾಯದ ಈ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಹಣ ವ್ಯಯಿಸಿ ಶಿಕ್ಷಣ ಪಡೆಯಲು ಕಷ್ಟಸಾಧ್ಯ. ಹಾಗಾಗಿ ಈ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯಿಂದ ಏರ್ಪಡಿಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಯೋಜನೆಗಳನ್ನು ಪರಿಶಿಷ್ಟ ಸಮುದಾಯಕ್ಕೆ ತಲುಪಿಸುವಲ್ಲಿ ಇರುವ ನ್ಯೂನತೆಗಳು, ಅಡ್ಡಿಗಳನ್ನು ನಿವಾರಿಸುವುದು, ಸಮರ್ಪಕ ಅನುಷ್ಠಾನ, ಹೊಸ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಪ.ಜಾತಿ ಮತ್ತು ಪ.ಪಂಗಡಗಳ ಕಲ್ಯಾಣ ಸಮಿತಿಯು ರಾಜ್ಯಾದ್ಯಂತ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸಮಿತಿಯು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದೆ.  ಅಸ್ಪøಷ್ಯತೆ ನಿವಾರಣೆ, ಆರ್ಥಿಕ ಸಮಾನತೆ, ಗುಣಮಟ್ಟದ ಶಿಕ್ಷಣ ಇವು ತಳಸಮುದಾಯವನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಪ್ರಮುಖ ಅಂಶಗಳಾಗಿದ್ದು, ತಾರತಮ್ಯದ ವ್ಯವಸ್ಥೆಯು ನಮ್ಮ ದೇಶದ ಭವಿಷ್ಯಕ್ಕೆ ಹಾಗೂ ಅಭಿವೃದ್ಧಿಗೆ ಮಾರಕವಾಗಬಾರದು ಎಂದರೆ, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯದಿದ್ದರೆ ತಳ ಸಮುದಾಯ ಉನ್ನತ ಶಿಕ್ಷಣದಿಂದ ವಂಚಿತವಾಗಲಿದೆ. ಈ ಜನಾಂಗದವರಿಗೆ ಮೂಲಭೂತ ಶಿಕ್ಷಣ ಕೊಡದಿದ್ದಲ್ಲಿ, ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯ ಉನ್ನತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಉನ್ನತ ಹುದ್ದೆಗಳನ್ನು ಪಡೆಯಲು ಕೂಡ ಕಷ್ಟಕರವಾಗಲಿದೆ.  ಬದಲಾದ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ತಳಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಂದು ತಾಕೀತು ಮಾಡಿದರು.

ಸಿಎಸ್‍ಆರ್ ನಿಧಿಯಡಿಯಲ್ಲಿ ನನ್ನ ಕ್ಷೇತ್ರದಲ್ಲಿ ಕ್ಲಸ್ಟರ್‍ಗೊಂದು ಮಲ್ಟಿ ಮೀಡಿಯಾ ಸೆಂಟರ್ ಸ್ಥಾಪನೆ ಮಾಡಿ, ಅಕ್ಕಪಕ್ಕದ ಶಾಲೆಗಳನ್ನು ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ ಅವರು, ಇಸ್ರೋ ಸಹಯೋಗದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ, ಇದರ ಸದುಪಯೋಗಪಡಿಸಿಕೊಂಡು, ಉತ್ತಮ ಶಿಕ್ಷಣ ನೀಡಿ, ಪ್ರತಿ ಶಾಲೆಗೂ ಟ್ಯಾಬ್ ಕೊಡಿಸಿ, ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಕಲ್ಪಿಸಿಕೊಡಿ ಎಂದು ಹೇಳಿದರು.

 

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳು ಶಾಲಾ ಹಾಗೂ ಪರೀಕ್ಷಾ ಶುಲ್ಕ ಪಾವತಿ ಮಾಡಿಲ್ಲ ಎಂದು ಪ್ರವೇಶ ನಿರಾಕರಿಸುವಂತಿಲ್ಲ.  ಪರಿಶಿಷ್ಟ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಪಾವತಿಸುತ್ತಿದೆ, ಇಂತಹ ಪ್ರಕರಣ ಕಂಡುಬಂದಲ್ಲಿ ತಕ್ಷಣ ಕ್ರಮಕೈಗೊಂಡು ದೂರು ದಾಖಲಿಸಬೇಕು ಎಂದು ಡಿಡಿಪಿಐ ಹಾಗೂ ಡಿಡಿಪಿಯು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಡಿಎಂಎಫ್ ಹಾಗೂ ಕೆಎಂಇಆರ್‍ಸಿ ನಿಧಿಯಡಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಎಂಇಆರ್‍ಸಿ ಅನುದಾನದಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಿದ್ದು,ಅನುಮೋದನೆ ಬಂದ ಬಳಿಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು.

 

ಜೆಜೆಎಂ ಕಾಮಗಾರಿ ತನಿಖಾ ವರದಿಗೆ ಸೂಚನೆ: 941 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಡಿ ಸಮರ್ಪಕ ಕಾಮಗಾರಿಗಳು ನಡೆದಿಲ್ಲ, ರಸ್ತೆಗಳನ್ನು ಅಗೆದು, ಹಾಗೆಯೇ ಬಿಟ್ಟಿದ್ದಾರೆ, ಗುತ್ತಿಗೆದಾರರು ಅಧಿಕಾರಿಗಳನ್ನು ಬೆದರಿಸಿ, ಬಿಲ್ ಮಾಡಿಸಿಕೊಂಡಿದ್ದಾರೆ, ಅಂತಹವರ ಮೇಲೆ ಎಫ್‍ಐಆರ್ ದಾಖಲಿಸುವಂತೆ ಕಳೆದ ಕೆಡಿಪಿ ಸಭೆಯಲ್ಲಿ ತಿಳಿಸಲಾಗಿತ್ತು, ಆದರೆ ಈವರೆಗೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹಾಗೂ ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಅವರು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷರು, ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೂ ನಳ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಕುಡಿಯುವ ನೀರು ಕಾಮಗಾರಿಯ ತನಿಖಾ ವರದಿಯೊಂದಿಗೆ ಅಸಮರ್ಪಕ ಅನುಷ್ಠಾನಕ್ಕೆ ಕಾರಣವಾಗಿರುವ ಸಂಬಂಧಪಟ್ಟವರ ಮಾಹಿತಿಯನ್ನು 20 ದಿನಗಳ ಒಳಗಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಸಮಿತಿಗೆ ನೀಡಬೇಕು ಎಂದು ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೆಜೆಎಂ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನವಸತಿಗಳಲ್ಲಿ ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಈ ಕುರಿತು ಸಂಬಂಧಪಟ್ಟ ಜನವಸತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನ ಆಗುತ್ತಿರುವ ಕುರಿತು ವೀಕ್ಷಣೆ ಮಾಡಲಾಗಿದೆಯೇ? ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಯಾವ ಯಾವ ಇಲಾಖೆಗಳಲ್ಲಿ, ಯಾವ ಅನುದಾನದಲ್ಲಿ, ಯೋಜನೆಗಳನ್ನು ನೀಡಲಾಗುತ್ತಿದೆ ಎಂಬ  ಕುರಿತು ಮೇಲ್ವಿಚಾರಣೆ, ಪರಿಶೀಲನೆ ನಡೆಸಲಾಗಿದೆಯೇ, ಇದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಪ್ರತಿ ತಾಲ್ಲೂಕುವಾರು ಎಸ್‍ಸಿ, ಎಸ್‍ಟಿ ಜನವಸತಿಗಳಲ್ಲಿ ಜೆಜೆಎಂನಡಿ ನಡೆದಿರುವ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಫೋಟೋ, ವಿಡಿಯೋ ಸಹಿತ ವರದಿಯನ್ನು ಸಮಿತಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

 

ಅಕ್ರಮ ಮದ್ಯ ಮಾರಾಟ ನಿಲ್ಲಿಸಿ:
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚು ನಡೆಯುತ್ತಿದೆ,  ಪರಿಶಿಷ್ಟ ಜನಾಂಗದವರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ.  ಯಾವುದೇ ಹಳ್ಳಿಗೆ ಹೋದರೂ, ಮಹಿಳೆಯರು ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ, ಈ ಬಗ್ಗೆ ಸೂಚನೆ ನೀಡಿದಾಗ್ಯೂ ಅಬಕಾರಿ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಶಾಸಕ ವೀರೇಂದ್ರ ಪಪ್ಪಿ ಅವರು ಹೇಳಿದರು.  ಇದಕ್ಕೆ ಸ್ಪಂದಿಸಿದ ನರೇಂದ್ರಸ್ವಾಮಿ ಅವರು, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಪೊಲೀಸ್, ಅಬಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕುವಾರು ಟಾಸ್ಕ್‍ಪೊರ್ಸ್ ರಚಿಸಿಕೊಂಡು ಹಂತ ಹಂತವಾಗಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮವಹಿಸಬೇಕು ಎಂದು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.

 

ಟೆಂಡರ್‍ಗಳಲ್ಲಿ ಶೇ.24.1 ರಷ್ಟು ಮೀಸಲಾತಿ ನೀಡಲು ಸೂಚನೆ: ರೂ.1 ಕೋಟಿವರೆಗಿನ ಸರ್ಕಾರಿ ಕಾಮಗಾರಿ ಟೆಂಡರ್‍ಗಳಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರಾಜ್ಯ ಸರ್ಕಾರ ಶೇ.24.1 ರಷ್ಟು ಮೀಸಲಾತಿ ನೀಡಿದೆ. ಆದರೆ ಅಧಿಕಾರಿಗಳು ಪ್ಯಾಕೇಜ್ ರೂಪದಲ್ಲಿ ಕಾಮಗಾರಿ ಮತ್ತು ಸೇವಾ ಟೆಂಡರ್ ಕರೆದು, ಎಸ್.ಸಿ. ಹಾಗೂ ಎಸ್.ಟಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ಟೆಂಡರ್‍ಗಳನ್ನು ಪರಿಶೀಲನೆ ನಡೆಸಿ, ನಿಯಮಬಾಹಿರವಾಗಿ ಟೆಂಡರ್ ಕರೆದಿದ್ದರೆ ಅವುಗಳನ್ನು ರದ್ದುಗೊಳಿಸಬೇಕು.  ನಿಯಮಾನುಸಾರ ಎಸ್.ಸಿ ಹಾಗೂ ಎಸ್.ಟಿ ಗುತ್ತಿಗೆದಾರರಿಗೆ ಟೆಂಡರ್‍ಗಳಲ್ಲಿ ಮೀಸಲು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸೂಚಿಸಿದರು.

 

ಮೀನುಗಾರಿಕೆ ಸಹಕಾರಿ ಸಂಘಗಳ ನಿರ್ಮಿಸಿ:
**********ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸದಸ್ಯರ ಮೀನುಗಾರಿಕೆ ಸಹಕಾರಿ ಸಂಘಗಳನ್ನು ನಿರ್ಮಿಸಬೇಕು. ಈ ಸಂಘಗಳ ಸದಸ್ಯರ ಜಾತಿ ಪ್ರಮಾಣ ಪತ್ರದ ಸಿಂಧುತ್ವವನ್ನು ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದುಕೊಳ್ಳಬೇಕು. ಜಿಲ್ಲೆಯ ಕೆರೆಗಳಲ್ಲಿ ಶೇ.24 ರಷ್ಟು ಕೆರೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲು ಇರಿಸಲು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸಭೆಯಲ್ಲಿ ಸೂಚಿಸಲಾಯಿತು.
ಮಾಜಿ ದೇವದಾಸಿಯರಿಗೆ ನಿವೇಶನ ಹಾಗೂ ಜಮೀನು ನೀಡಿ:
**********ಜಿಲ್ಲೆಯಲ್ಲಿ ದೇವದಾಸಿ ಪುನರ್ವಸತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇವರಿಗೆ ನಿವೇಶನ, ವಸತಿ ಹಾಗೂ ಜಮೀನು ನೀಡಲು 2009 ರಲ್ಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ, ಖಾಸಗಿ ಜಮೀನು ಖರೀದಿಸಿ ಜಮೀನು ಮಂಜೂರು ಮಾಡಬೇಕು ಎಂದು ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 223 ಮಾಜಿ ದೇವದಾಸಿಯರು ಇದ್ದು, ಮಹಿಳಾ ಅಭಿವೃದ್ಧಿ ನಿಗಮದಿಂದ 99 ಹಾಗೂ ವಿವಿಧ ಇಲಾಖೆಗಳ ಯೋಜನಗಳಡಿ 89 ದೇವದಾಸಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. 27 ದೇವದಾಸಿಯರಿಗೆ ನಿವೇಶನದ ಕೊರತೆ ಇದ್ದು, ಶೀಘ್ರವೇ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಮಿತಿ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, 3 ರಿಂದ 6  ವರ್ಷದ ಒಳಗಿನ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ಪೂರಕ ಪೌಷ್ಠಿಕ ಆಹಾರಗಳು ಕಳಪೆಯಾಗಿವೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿವೆ. ಪುಷ್ಠಿ ಎಂಬ ಪೌಷ್ಟಿಕ ಪೌಂಡರ್‍ಗಳನ್ನು ನೀರಿನಲ್ಲಿ ಕಲಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಮಕ್ಕಳು ಇವುಗಳನ್ನು ಸೇವನೆ ಮಾಡುತ್ತಿಲ್ಲ. ಇದರ ಬದಲಿಗೆ ಜನರು ಈ ಪುಷ್ಠಿ ಪೌಂಡರ್‍ಗಳನ್ನು ಜಾನುವಾರುಗಳಿಗೆ ನೀಡುತ್ತಿರುವ ಕುರಿತು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸರಬರಾಜಾದ ಬೆಲ್ಲವೂ ಕೂಡ ಕಳಪೆಯಾಗಿದ್ದು, ಕಪ್ಪು ಬಣ್ಣದಿಂದ ಕೂಡಿದೆ.  ಉಪನಿರ್ದೇಶಕರು ಸರಬರಾಜು ಆಗುವ ಪೌಷ್ಠಿಕ ಆಹಾರ ಗುಣಮಟ್ಟ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ವರದಿ ನೀಡುವಂತೆ ಅವರು ಹೇಳಿದರು.
ಪಿ.ಟಿ.ಸಿ.ಎಲ್ ಪ್ರಕರಣಗಳ ಇತ್ಯರ್ಥಕ್ಕೆ ಸೂಚನೆ :
*********** ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪಿ.ಟಿ.ಸಿ.ಎಲ್ ಪ್ರಕರಣಗಳ ಶೀಘ್ರವೇ ಇತ್ಯರ್ಥಗೊಳಿಸಬೇಕು. ನಮೂನೆ 50, 53 ಹಾಗೂ 57ರಡಿ ಭೂಮಿ ಮಂಜೂರಾತಿಗೆ ಸಲ್ಲಿಸಿರುವ ಅರ್ಜಿಗಳನ್ನು ಗೋಮಾಳ ಹಾಗೂ ಜಾನುವಾರು ಸಂಖ್ಯೆಗಳಿಗೆ ಹುಲ್ಲುಗಾವಲು ಮೀಸಲು ಇರಿಸುವ ದೃಷ್ಠಿಯಿಂದ ತಿರಸ್ಕರಿಸುವ ಮುನ್ನ ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿ ಮುಂದೆ ಮಂಡಿಸಬೇಕು. ಈಗಾಗಲೇ ತಿರಸ್ಕøತವಾದ ಅರ್ಜಿಗಳನ್ನು ಇದೇ ಅಕ್ಟೋಬರ್ 25 ರಿಂದ ಪ್ರಾರಂಭವಾಗಲಿರುವ ಜಾನುವಾರು ಗಣತಿ ಆಧರಿಸಿ, ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಹಾಗೂ ಹುಲ್ಲುಗಾವಲು ಪ್ರದೇಶಗಳನ್ನು ನಿರ್ಧರಿಸಬೇಕು. ಒಂದು ವೇಳೆ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ಹೆಚ್ಚುವರಿ ಭೂಮಿ ನಿಗದಿಯಾಗಿದ್ದರೆ, ಈ ಭೂಮಿಗಾಗಿ ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಪುನರ್ ಪರಿಗಣನೆಗೆ ತೆಗೆದುಕೊಂಡು, ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿಯಲ್ಲಿ ಮಂಡಿಸಬೇಕು.  ಪ.ಜಾತಿ ಮತ್ತು ಪ.ಪಂಗಡದವರಿಗೆ ಸ್ಮಶಾನ ಭೂಮಿಯ ಕೊರತೆ ಇದ್ದಲ್ಲಿ, ಸರ್ಕಾರದಿಂದಲೇ ಭೂಮಿ ಖರೀದಿಸಿ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

 

ಜಾತಿ ನಿಂದನೆ ಪ್ರಾಥಮಿಕ ತನಿಖೆ ಕಡ್ಡಾಯ: ಜಾತಿ ನಿಂದನೆ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ಮಾಡಿದ ಬಳಿಕವೇ ಪ್ರಕರಣದಲ್ಲಿ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಮೊದಲು ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಬಳಿಕವೇ ಸೂಕ್ತ ಕ್ರಮ ಕೈಗೊಳ್ಳುವುದು ಕಡ್ಡಾಯ ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ತಿಳಿಸಿದ ಅವರು, ಎಸ್‍ಎಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ ಹೆಚ್ಚಾಗುತ್ತಿದೆ, ಹಾಗೂ ಜಾತಿ ನಿಂದನೆ ಪ್ರಕರಣಗಳಲ್ಲಿ ಸಾಬೀತು ಪ್ರಮಾಣ ಕಡಿಮೆ ಇದ್ದು, ಹೀಗಾಗಿ ಕ್ರಮಕ್ಕೂ ಮುನ್ನ ಪ್ರಾಥಮಿಕ ತನಿಖೆ ಕೈಗೊಳ್ಳುವಂತೆ ನಿರ್ದೇಶನವಿದೆ ಎಂದರು.
ಸಭೆಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಶಾಸಕರುಗಳಾದ ಡಾ.ಎಂ.ಚಂದ್ರಪ್ಪ, ದುರ್ಯೋದನ ಎಂ.ಐಹೊಳೆ, ಕೆ.ಕೃಷ್ಣಾನಾಯ್ಕ್, ಕೆ.ಸಿ.ವೀರೇಂದ್ರ ಪಪ್ಪಿ, ಹೇಮಲತಾ ನಾಯಕ್, ರಾಜೇಂದ್ರ ರಾಜಣ್ಣ, ಬಿ.ದೇವೇಂದ್ರಪ್ಪ ಹಾಗೂ ಕರ್ನಾಟಕ ವಿಧಾನಸಭೆ ಸಚಿವಾಲಯ ಅಧೀನ ಕಾರ್ಯದರ್ಶಿ ಪಿ.ಸೀನ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement
Tags :
bengaluruchitradurgaeducationPM Narendra Swamyprivate schoolssuddionesuddione newsಉತ್ತಮ ಶಿಕ್ಷಣಖಾಸಗಿ ಶಾಲೆಚಿತ್ರದುರ್ಗಪಿ.ಎಂ.ನರೇಂದ್ರ ಸ್ವಾಮಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article