For the best experience, open
https://m.suddione.com
on your mobile browser.
Advertisement

ಪಿ.ಆರ್. ತಿಪ್ಪೇಸ್ವಾಮಿ ಸ್ಮಾರಕ ಹಾಗೂ ಪುತ್ಥಳಿ ಅನಾವರಣ | ಪಿ.ಆರ್.ಟಿ. ಪ್ರತಿಷ್ಠಾನಕ್ಕೆ ರೂ.10 ಲಕ್ಷ ಗೌರವ ಧನ :  ಸಚಿವ ಡಿ.ಸುಧಾಕರ್

05:44 PM Mar 10, 2024 IST | suddionenews
ಪಿ ಆರ್  ತಿಪ್ಪೇಸ್ವಾಮಿ ಸ್ಮಾರಕ ಹಾಗೂ ಪುತ್ಥಳಿ ಅನಾವರಣ   ಪಿ ಆರ್ ಟಿ  ಪ್ರತಿಷ್ಠಾನಕ್ಕೆ ರೂ 10 ಲಕ್ಷ ಗೌರವ ಧನ    ಸಚಿವ ಡಿ ಸುಧಾಕರ್
Advertisement

ಚಿತ್ರದುರ್ಗ.ಮಾರ್ಚ್.10: ‌ಪಿ.ಆರ್.ಟಿ ಎಂದೇ ಜನಮಾನಸದಲ್ಲಿ ಹೆಸರಾಗಿರುವ ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದ ಪಿ.ಆರ್.ತಿಪ್ಪೇಸ್ವಾಮಿ ನಿಸ್ವಾರ್ಥದಿಂದ ಸಮಾಜಮುಖಿ ಜೀವನ ನಡೆಸಿದವರು. ಅವರ ಕೊಡುಗೆಗಳನ್ನು ನೆನಪಿಸುವ ಕೆಲಸವನ್ನು ಪಿ.ಆರ್.ಟಿ ಪ್ರತಿಷ್ಠಾನ ಮಾಡಬೇಕು. ಈ ಕಾರ್ಯಕ್ಕೆ ಒಂದು ವಾರದಲ್ಲಿಯೇ ರೂ.10ಲಕ್ಷ ಗೌರವ ಧನ ನೀಡುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಭರವಸೆ ನೀಡಿದರು.

Advertisement
Advertisement

ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ, ಹಿರಿಯೂರು ತಾಲ್ಲೂಕು ಹರ್ತಿಕೋಟೆಯಲ್ಲಿ,ಭಾನುವಾರ ಆಯೋಜಿಸಿದ್ದ ಪಿ.ಆರ್. ತಿಪ್ಪೇಸ್ವಾಮಿಯವರ ನವೀಕೃತ ಸ್ಮಾರಕ ಲೋಕಾರ್ಪಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ‌ ಭಾಗವಹಿಸಿ ಅವರು ಮಾತನಾಡಿದರು.

ನವೀಕೃತ ಸ್ಮಾರಕ ನಿರ್ಮಾಣ ಕಾರ್ಯ ನಾಡಿಗೆ ಮಾದರಿಯಾಗಿದೆ‌. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಕೆಲಸ ಮಾಡುತ್ತಿದ್ದಾಗ, ಜಿಲ್ಲೆಯ ಹಿಂದುಳಿದ ಭಾಗಗಳಿಂದ ವಿದ್ಯಾಭ್ಯಾಸ ಹರಿಸಿ ಮೈಸೂರಿಗೆ ಬರುವ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರು. ಅವರ ನಿಸ್ವಾರ್ಥವಾದ ಪ್ರೇಮ ಹಾಗೂ ಕಾಳಜಿಯಿಂದ ಬಹಳಷ್ಟು ಜನ ಉನ್ನತ ವಿದ್ಯಾಭ್ಯಾಸ ಗಳಿಸಿ ಜೀವನಮಟ್ಟ ಸುಧಾರಿಸಿಕೊಂಡಿದ್ದಾರೆ. ಕ್ರೀಯಾಶೀಲ ವ್ಯಕ್ತಿತ್ವದ ಪಿ.ಆರ್.ಟಿ ಬದುಕಿನ ಉದ್ದಕ್ಕೂ ಸಮಾಜ ಕಟ್ಟವ ಕೆಲಸ ಮಾಡಿದರು ಎಂದು ಸಚಿವ.ಡಿ.ಸುಧಾಕರ್ ಸ್ಮರಿಸಿದರು.

Advertisement
Advertisement

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ದೇಶದ ನೂರಾರು ವಿದ್ಯಾರ್ಥಿಗಳು ಹಾಗೂ ಕಲಾವಿದರ ಬದುಕಿಗೆ ಪಿ.ಆರ್.ಟಿ ದಾರಿ ದೀಪವಾಗಿದ್ದಾರೆ. ಪಿ.ಆರ್.ಟಿ ಅವರ ಸಾಹಿತ್ಯ ಕೃಷಿ ವಿಭಿನ್ನವಾದದು. ಎಂದಿಗೂ ಅವರು ತಮ್ಮ ‌ಸಾಹಿತ್ಯವನ್ನು ವ್ಯಾಪಾರೀಕರಣ ಮಾಡಲಿಲ್ಲ. ತಾವು ಬರೆದ ಕೃತಿಗಳನ್ನು ಇತರರಿಗೆ ಮಾರಾಟ ಮಾಡದೆ ಸ್ನೇಹಿತರಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಆಸೆ ಆಮಿಷಕ್ಕೆ ಬಲಿಯಾಗದೆ, ಸ್ವಾರ್ಥ ರಹಿತ ಬದುಕು ಜೀವಿಸಿದ ಪಿ.ಆರ್.ಟಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಬೆಂಗಳೂರು ಮಹಾನಗರದಲ್ಲಿನ ಒಂದು ವೃತ್ತಕ್ಕೆ ಹಾಗೂ ಮೈಸೂರಿನ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯಕ್ಕೆ ಇವರ ಹೆಸರನ್ನು ನಾಮಕರಣ ಮಾಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಈ ವಿಚಾರದಲ್ಲಿ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಕೆ.ವಿ.ಪ್ರಭಾಕರ್ ವ್ಯಕ್ತಪಡಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ, ಸಾಮಾನ್ಯ ವ್ಯಕ್ತಿಯ ಹುಟ್ಟು ಹಾಗೂ ಜೀವನ ಚಾರಿತ್ರಿಕವಾಗಬೇಕಾದರೆ ಅವರ ಜೀವನ ಸಾಧನೆ ಜಗತ್ತಿಗೆ ಮಾದರಿಯಾಗಿರಬೇಕು. ಅಂತಹ ಚಾರಿತ್ರಿಕ ವ್ಯಕ್ತಿತ್ವ ಪಿ.ಆರ್.ತಿಪ್ಪೇಸ್ವಾಮಿ ಅವರದ್ದಾಗಿದೆ. ವೈಯಕ್ತಿಕ ಜೀವನ ಬದಿಗೊತ್ತಿ, ಮದುವೆಯೂ ಅಗದೇ, ಪಿ.ಆರ್.ಟಿ ಅವರು ಸಮಾಜವೇ ತನ್ನ ಕುಟುಂಬ ಎಂದು ಭಾವಿಸಿ ಬದುಕಿದವರು. ಅವರ ಸಾಧನೆ ಅಪಾರವಾದದು. ಪಿ.ಆರ್.ಟಿ.ಚಿತ್ರಕಲೆಯೇ ಜೀವನದ ಉಸಿರನ್ನಾಗಿಸಿ ಸ್ವೀಕರಿಸಿದವರು.

ಎಲ್ಲ ವರ್ಗದ ಮಕ್ಕಳಿಗೆ ವಿದ್ಯಾಧಾನ, ಅನ್ನದಾನಮಾಡಿ ಅವರ ಬದುಕಿಗೆ ಆಸರೆಯಾದರು. ಅವರಿಂದ ಸಹಾಯ ಪಡೆದ ಎಲ್ಲರ ಮನಸ್ಸಲ್ಲಿ  ಪಿ.ಆರ್.ಟಿ ಸ್ಥಿರವಾಗಿ ಉಳಿದಿದ್ದಾರೆ.  ಪಿ ಆರ್ ಟಿ ಪ್ರತಿ ಪ್ರತಿಷ್ಠಾನದ ಸಹಕಾರದಿಂದ ಅವರ ಸ್ಮಾರಕ ನಿರ್ಮಾಣದ ಕೆಲಸ ಆಗಿದೆ. ಇದೇ ಮಾದರಿಯಲ್ಲಿ ಹರ್ತಿಕೋಟೆ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಸಹಕರಿಬೇಕು ಎಂದು ನಿರಂಜನಾನಂದ ಪುರಿ ಮಹಾಸ್ವಾಮೀಜಿ ಕೋರಿದರು.

ಪಿ.ಆರ್.ಟಿ ಪ್ರತಿಷ್ಠಾನದ ಸಂಚಾಲಕ ಹರ್ತಿಕೋಟೆ ರುದ್ರಣ್ಣ ಮಾತನಾಡಿ, ಪಿ.ಆರ್.ಟಿ ಅವರ ಪರಿಶ್ರಮದ ಫಲವಾಗಿ ಮೈಸೂರಿನ ವಸ್ತು ಸಂಗ್ರಹಾಲಯ ಏಷ್ಯಾದಲ್ಲಿ ಪ್ರಸಿದ್ಧಿ ಪಡೆದಿದೆ.‌ ಇದರೊಂದಿಗೆ ಧರ್ಮಸ್ಥಳ ಸುತ್ತೂರಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಿದ ದಾಖಲೆ ಇವರದು. ಕವಿ ದ.ರಾ.ಬೇಂದ್ರೆ ಪಿ.ಆರ್‌.ಟಿ  ಅವರನ್ನು ಜಾನಪದ ಜಂಗಮ ಹಾಡಿ ಹೊಗಳಿದ್ದಾರೆ ಎಂದು ಅವರ ಸಾಧನೆಯನ್ನು ಸ್ಮರಿಸಿದರು.

ಈ ಸಮಾರಂಭದಲ್ಲಿ ಪಿಆರ್‌ಟಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ್ ಕದಂಬ, ಗೌರವ ಕಾರ್ಯದರ್ಶಿ ಮಹದೇವ ಶೆಟ್ಟಿ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್ ನಾಗಣ್ಣ, ಗ್ರಾ.ಪಂ.ಅಧ್ಯಕ್ಷ ಪ್ರತಾಪ ಸಿಂಹ, ಉಪಾಧ್ಯಕ್ಷೆ ಮಹೇಶ್ವರಿ ಗೋಡೆ ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್, ಸ್ಮಾರಕ ಶಿಲ್ಪಿ ನರಸಿಂಹರಾಜು‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನದೊಂದಿಗೆ  ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

Tags :
Advertisement