For the best experience, open
https://m.suddione.com
on your mobile browser.
Advertisement

ಸೌಹಾರ್ದಯುತವಾಗಿ ಪಕ್ರರಣಗಳ ಸುಖಾಂತ್ಯಕ್ಕೆ ಜನತಾ ನ್ಯಾಯಾಲಯ ವೇದಿಕೆ : ಡಿಸೆಂಬರ್ 9 ರಂದು ಬೃಹತ್ ರಾಷ್ಟ್ರೀಯ ಲೋಕದಾತ್ : ನ್ಯಾಯಾಧೀಶೆ ಕೆ.ಬಿ.ಗೀತಾ

03:36 PM Dec 02, 2023 IST | suddionenews
ಸೌಹಾರ್ದಯುತವಾಗಿ ಪಕ್ರರಣಗಳ ಸುಖಾಂತ್ಯಕ್ಕೆ ಜನತಾ ನ್ಯಾಯಾಲಯ ವೇದಿಕೆ   ಡಿಸೆಂಬರ್ 9 ರಂದು ಬೃಹತ್ ರಾಷ್ಟ್ರೀಯ ಲೋಕದಾತ್   ನ್ಯಾಯಾಧೀಶೆ ಕೆ ಬಿ ಗೀತಾ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ :
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ. ಡಿ.02: ಜಿಲ್ಲಾ  ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಡಿ.9 ರಂದು ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ರಾಜೀ  ಸಂಧಾನದ ಮೂಲಕ ಸೌರ್ಹಾಧಯುತವಾಗಿ ಪ್ರಕರಣಗಳನ್ನು ಸುಖಾಂತ್ಯಗೊಳಿಸಿಕೊಳ್ಳಲು ಜನತಾ ನ್ಯಾಯಾಲಯ ಉತ್ತಮ ವೇದಿಕೆಯಾಗಿದೆ.

Advertisement

ಪಕ್ಷಗಾರರು ಇದರ ಉಪಯೋಗ ಪಡೆದು ಹೆಚ್ಚು ಹೆಚ್ಚೂ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ  ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಗೀತಾ ಹೇಳಿದರು.

ಈ ಕುರಿತು ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಜನತಾ ನ್ಯಾಯಾಲಯದಲ್ಲಿ ಹಾಲಿ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಸಂಧಾನಕಾರರಾಗಿ ಇರುತ್ತಾರೆ. ಪಕ್ಷಗಾರರು ಸುಲಭ ಹಾಗೂ ಶೀಘ್ರವಾಗಿ, ಯಾವುದೇ ಖರ್ಚು ವೆಚ್ಚವಿಲ್ಲದೇ ಪ್ರಕರಣಗಳನ್ನು ನೇರವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ಎರಡು ಪಕ್ಷಗಾರರು ಪರಸ್ಪರ ಒಪ್ಪಿಗೆ ಆಗುವ ತೀರ್ಮಾನ ಕೈಗೊಂಡು, ಅದಾಲತ್‌ನಲ್ಲಿ ಪ್ರಕರಣವನ್ನು ಬಗೆಹರಿಸಿಕೊಳ್ಳಬಹುದು.

ಇದರಿಂದ ಪಕ್ಷಗಾರರ ನಡುವಿನ ಬಾಂದವ್ಯವು ಚೆನ್ನಾಗಿದ್ದು, ವಿವಾದಗಳು ಸುಖಾಂತ್ಯವಾಗುತ್ತದೆ. ಲೋಕ ಅದಾಲತ್ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇದು ಅಂತಿಮ ತೀರ್ಮಾನವಾಗಿದೆ. ಕೇವಲ ಮೋಸ ಅಥವಾ ಮಿಸ್ ರೆಪ್ರಸೆಂಟೇಷನ್ ನಂತಹ ಸಂದರ್ಭದಲ್ಲಿ ಮಾತ್ರ ಸದರಿ ಲೋಕ ಅದಾಲತ್‌ನ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ. ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು.

ಸಂಬಂಧಿಗಳು, ನೆರೆಹೊರೆಯವರು ರಾಜಿ ಸಂಧಾನದ ಮೂಲಕ ಪ್ರಕರಣಗಳ ಸುಖಾಂತ್ಯಕ್ಕೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ತೀರ್ಮಾನದಂತೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದವರ ನಿರ್ದೇಶನದಂತೆ ಡಿ.9 ರಂದು ಸುಪ್ರಿಂ ಕೋರ್ಟ್, ಹೈಕೋರ್ಟ್ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಇತರೆ ಕಾರ್ಮಿಕ ವಿವಾದಗಳು, ಕಾರ್ಮಿಕರ ವೇತನ, ವಿದ್ಯುತ್, ನೀರಿನ ಶುಲ್ಕ, ರಾಜಿ ಆಗಬಹುದಾದಂತಹ ಅಪರಾಧಿಕ ಪ್ರಕರಣ, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿನ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೆಂಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ ಅಥವಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನವನ್ನು ಹೊರತುಪಡಿಸಿದ ಉಳಿದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರದ  ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ಭೂಸ್ವಾಧೀನ ಪ್ರಕರಣಗಳು ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಲೋಕ ಅದಾಲತ್‌ನ ರಾಜಿ ಮಾಡಿಕೊಳ್ಳಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ದಿನಾಂಕ 09.09.2023 ರಂದು ಈ ವರ್ಷದ ಮೂರನೇ ಲೋಕ ಅದಾಲತ್‌ನಲ್ಲಿ ಚಾಲ್ತಿಯಲ್ಲಿ ಇದ್ದ 3,315 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಾದ 82,613  ಪ್ರಕರಣಗಳನ್ನು ಸೇರಿಸಿ ಒಟ್ಟು  85,928 ಪ್ರಕರಣಗಳನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ವಿಲೇವಾರಿ ಮಾಡಲಾಗಿದೆ.

ವಿವಿಧ ನ್ಯಾಯಾಲಯದಲ್ಲಿ ವಿಚೇಧನಕ್ಕಾಗಿ ಅರ್ಜಿ ಸಲ್ಲಿಸಿದ 05 ಜೋಡಿಗಳನ್ನು ಮತ್ತೆ ಒಂದುಗೂಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಕೆ.ಬಿ.ಗೀತಾ ಮಾಹಿತಿ ನೀಡಿದರು.

ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಪ್ರಶ್ನೆಗಳಿದ್ದರೆ ಸಾರ್ವಜನಿಕರು dlsachitradurga1@gmail.com  ಗೆ ಮೇಲ್ ಮಾಡಬಹುದು. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಕಚೇರಿ ದೂರವಾಣಿ ಸಂಖ್ಯೆ 08194-222322 ಮತ್ತು 9141193935 ಕರೆ ಮಾಡಬಹುದು. ಕಚೇರಿಗೆ ಖುದ್ದಾಗಿ ಭೇಟಿ ಮಾಡಿ ಮಾಹಿತಿ ಪಡೆಯಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಅವರು ಉಪಸ್ಥಿತರಿದ್ದರು.

Tags :
Advertisement