Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

07:32 PM Apr 01, 2024 IST | suddionenews
Advertisement

 

Advertisement

ಚಿತ್ರದುರ್ಗ : ಏಪ್ರಿಲ್ 01: ಚಿತ್ರದುರ್ಗ ಲೋಕಸಭಾ ಚುನಾವಣೆಗೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ, ತಪ್ಪಿದಲ್ಲಿ ಸಂಭಾವ್ಯ ಘಟನೆಗಳಿಗೆ ತಮ್ಮನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು, ವಿವಿಧ ತಂಡಗಳ ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಚುನಾವಣೆಗೆ ಸಂಬಂಧಿಸಿದಂತೆ ಈಗವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

Advertisement

ಆಯ್ಕೆ ಬಯಸುವ ಉಮೇದುವಾರರು ತಮ್ಮ ಅರ್ಜಿ ಸಲ್ಲಿಕೆಗೆ ಕೊನೆಯ ಮೂರು ದಿನಗಳು ಮಾತ್ರ ಉಳಿದಿದ್ದು, ಚುನಾವಣೆಯ ಕರ್ತವ್ಯ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ನಿಯೋಜಿತ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯತೋರದೇ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಮಂದಿರ, ಮಸೀದಿ, ಚರ್ಚುಗಳಲ್ಲಿ ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಮತದಾರರ ಮನವೊಲಿಕೆಯ ಭಾಗವಾಗಿ ಪಟ್ಟಣದ ಹೊರವಲಯಗಳಲ್ಲಿ ಬಾಡೂಟ, ಔತಣ ಏರ್ಪಡಿಸುವುದು ನಡೆಯುತ್ತಿರುತ್ತವೆ. ಇವೆಲ್ಲವೂಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿ, ನಿಯಮಾನುಸಾರ ಕ್ರಮಕ್ಕೆ ವರದಿ ಮಾಡುವಂತೆ ಸೂಚಿಸಿದರು.

ಚೆಕ್‍ಪೋಸ್ಟ್ ಸಿಬ್ಬಂಧಿಗಳು ಹಾಗೂ ಸಂಚಾರಿದಳ ಸೇರಿದಂತೆ ವಿವಿಧ ತಂಡಗಳು ಸದಾ ಎಚ್ಚರಿಕೆಯಿಂದಿದ್ದು ಕಾರ್ಯನಿರ್ವಹಿಸಬೇಕು. ಈ ವಿಷಯಗಳಲ್ಲಿ ನೋಡಲ್ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಸೂಚಿಸಿದ ಅವರು, ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಯ ಅಧಿಕಾರಿಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಕಾಸಿಗಾಗಿ ಸುದ್ದಿ, ಜಾಹಿರಾತು, ವೈಯಕ್ತಿಕ ತೇಜೋವಧೆ ಮಾಡುವಂತಹ ಸುದ್ದಿಭಾಗಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಪ್ರತಿ ವಿಡಿಯೋ ತುಣುಕುಗಳ ಬಗ್ಗೆ ಗಮನಿಸಿ, ನಿಯಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದರು.

ಚುನಾವಣಾ ಕರ್ತವ್ಯಕ್ಕೆ ಅಧಿಕಾರಿ-ಸಿಬ್ಬಂಧಿಗಳಿಗೆ ಈಗಾಗಲೇ ಹಲವು ತರಬೇತಿಗಳಾಗಿದ್ದು, ಇನ್ನುಳಿದ ಮತಗಟ್ಟೆ ಮತ್ತಿತರ ಸಿಬ್ಭಂದಿಗಳಿಗೆ ಶೀಘ್ರದಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ. ಸಲ್ಲದ ನೆಪವೊಡ್ಡಿ ಚುನಾವಣಾ ಕರ್ತವ್ಯದಿಂದ ವಿನಾಯಿತ ಕೇಳುವ ನೌಕರರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

85 ಮತ್ತು ವಿಕಲಾಂಗರು ಸೇರಿದಂತೆ 12ಡಿ ತಾವಿರುವಲ್ಲಿಯೇ ಮತದಾನ ಮಾಡಲು ಕೋರಿಕೆ ಸಲ್ಲಿಸುವ ಅರ್ಜಿಯ ಪ್ರತಿಯನ್ನು ಅರ್ಹರೆಲ್ಲರಿಗೂ ತಲುಪಿಸಲಾಗುವುದು. ಅಂಚೆ ಮತದಾನ ಬಯಸಿರುವವರ ವಿವರಗಳನ್ನು ಸಂಬಂಧಿಸಿದ ಅಧಿಕಾರಿಗಳು ಸಕ್ರಮ ಪ್ರಾಧಿಕಾರಕ್ಕೆ ತಲುಪಿಸುವಂತೆ ಸೂಚಿಸಿದ ಅವರು, ಚುನಾವಣೆಯ ಎಲ್ಲಾ ಕಾರ್ಯಗಳಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದುದು ಅಗತ್ಯ ಎಂದರು.

ಈ ಹಿಂದಿನ ಚುನಾವಣೆಗಳಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳಲ್ಲಿನ ಮತದಾರರ ಮನವೊಲಿಕೆಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುವುದು ಎಂದ ಅವರು, ಮತಗಟ್ಟೆಗಳಲ್ಲಿ ಮತದಾರರ ಅನುಕೂಲಕ್ಕೆ ಅಗತ್ಯವಾಗಿರುವ ನೀರು, ನೆರಳು, ವಿದ್ಯುತ್ ಮತು ಶೌಚಾಲಯ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು. ಆರೋಗ್ಯ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಕುಡಿಯುವ ನೀರು ಸರಬರಾಜು ಮುಂತಾದ ಇಲಾಖೆಯ ಅಧಿಕಾರಿಗಳು ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಕಾರ್ಯಸ್ಥಾನದಲ್ಲಿರುವಂತೆ ಸೂಚಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಮಾತನಾಡಿ, ಚೆಕ್‍ಪೋಸ್ಟ್‍ಗಳನ್ನು ಹಾದು ಹೋಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಸೂಚಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಎಂ.ಕುಮಾರಸ್ವಾಮಿ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು, ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Advertisement
Tags :
actassignedbengaluruchitradurgaelectionnoticeOfficialsstrictly District Collector T. Venkateshsuddionesuddione newsWorkಅಧಿಕಾರಿಗಳುಚಿತ್ರದುರ್ಗಚುನಾವಣಾ ಕಾರ್ಯಜಿಲ್ಲಾಧಿಕಾರಿ ಟಿ.ವೆಂಕಟೇಶ್ನಿಯೋಜಿತಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸೂಚನೆ
Advertisement
Next Article