For the best experience, open
https://m.suddione.com
on your mobile browser.
Advertisement

ಪತ್ರಿಕಾ ವಿತರಕರಿಗೆ ಅಗತ್ಯ ಸೌಲಭ್ಯಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುವುದು : ಕೆ.ವಿ. ಪ್ರಭಾಕರ್

04:11 PM Sep 08, 2024 IST | suddionenews
ಪತ್ರಿಕಾ ವಿತರಕರಿಗೆ ಅಗತ್ಯ ಸೌಲಭ್ಯಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುವುದು   ಕೆ ವಿ  ಪ್ರಭಾಕರ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru,

Advertisement

ಸುದ್ದಿಒನ್, ಚಿತ್ರದುರ್ಗ ಸೆ. 08 :
ಜ್ಞಾನವನ್ನು ಕೊಡುವಂತಹ ಕೆಲಸವನ್ನು ಮೀಡಿಯಾಗಳು ಮಾಡುತ್ತವೆ. ಅವುಗಳನ್ನು ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಾರೆ. ಸಮಾಜದಲ್ಲಿ ದೊಡ್ಡವರು ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಹಿಂದೆ ಕೆಲಸ ಮಾಡುವವರು ಕಾಣಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಯಾವುದೇ ಕೆಲಸ ಕನಿಷ್ಠ ಅಲ್ಲ. ಗರಿಷ್ಠ ಅಲ್ಲ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ನಿಜವಾದ ಆರೋಗ್ಯವಂತರೆಂದರೆ ವಿತರಕರು. ಏಕೆಂದರೆ ಅವರು ಬೆಳಗ್ಗೆ ಬೇಗ ಏಳುತ್ತಾರೆ. ಸೈಕಲ್ ತುಳಿಯುತ್ತಾರೆ ಎಂದು ಶ್ರೀ ಸಾಣೇಹಳ್ಳಿ ಗುರುಪೀಠದ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ, ವಿತರಕರ ಸಂಘದ ವತಿಯಿಂದ ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ 4ನೇ ರಾಜ್ಯಮಟ್ಟದ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಭಗವಂತನು ಒಲಿದರೆ ಎಲ್ಲವೂ ಸಾಧ್ಯ. ಭಗವಂತ ಒಲಿದರೆ ಗೊಡ್ಡ ಹಸು ಸಹ ಹಾಲು ಕರಿಯುತ್ತೆ. ಅರಿವನ್ನು ಆಸ್ತಿಯನ್ನಾಗಿ ಮಾಡಿಕೊಂಡರೆ ಏನು ಬೇಕಾದರೂ ಮಾಡಲು ಸಾಧ್ಯ. ವಿತರಕರಿಗೆ ಮುಖ್ಯವಾಗಿ ಬೇಕಾಗಿರುವುದು ಒಂದು ವಾಹನ, ಒಂದು ನಿವೇಶನ ಹಾಗೂ ಅವರ ಮಕ್ಕಳಿಗೆ ಶಿಕ್ಷಣ. ಇವುಗಳನ್ನು ಒದಗಿಸಲು ಕ್ರಮವಹಿಸಿದರೆ ವಿತರಕರು ನೆಮ್ಮದಿಯಿಂದ ಬದುಕುತ್ತಾರೆ.ಕಾಯಕ ಶ್ರದ್ದೆ ಯಾರಲ್ಲಿ ಇರುತ್ತೋ ಅವರು ಯಾವತ್ತೂ ಸೋಲಲ್ಲ ಅದಕ್ಕೆ ಉದಾಹರಣೆ ವಿಜಯ ಸಂಕೇಶ್ವರವರು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಗೋವಿಂದ ಕಾರಜೋಳ ಜನತಂತ್ರ ವ್ಯವಸ್ಥೆಯಲ್ಲಿ ನಿಜವಾದ ಪ್ರಮುಖ ಪಾತ್ರ ವಹಿಸುವವರು ಮುದ್ರಣ ಮಾಧ್ಯಮದವರು. ಹಾಲು ಹಾಕುವವರು, ಪೋಸ್ಟ್ ಮ್ಯಾನ್‍ಗಳ ಸೇವೆಗಿಂತ ತ್ವರಿತವಾಗಿ ಪತ್ರಿಕಾ ವಿತರಕರು ಕೆಲಸ ಮಾಡುತ್ತಿದ್ದಾರೆ. ಪೋಸ್ಟ್ ಮ್ಯಾನ್‍ಗಳಿಗೆ ಹಲವು ಸವಲತ್ತುಗಳಿರುತ್ತವೆ ಯಾವುದೇ ಸವಲತ್ತುಗಳಿಲ್ಲದೆ ತ್ವರಿತವಾಗಿ ಸೇವೆಯನ್ನು ವಿತರಕರು ಮಾಡುತ್ತಾರೆ. ಈ ರಾಷ್ಟ್ರದ ರಾಷ್ಟ್ರಪತಿಗಳಾಗಿದ್ದ ಕಲಾಂ ರವರು ವಿತರಕರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ್ರದಲ್ಲಿ ಎಷ್ಟೋ ವಿದ್ಯಾರ್ಥಿಗಳು ಪತ್ರಿಕಾ ವಿತರಣೆ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದ ಅವರು ಪ್ರಸ್ತುತ ಈಗ ಎರಡು ರೀತಿಯ ಮಾಧ್ಯಮಗಳಿವೆ ಒಂದು ಅಸಲಿ ಇನ್ನೊಂದು ನಕಲಿ. ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಅರಿಯಬೇಕಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹುಟ್ಟು ಹಾಕಿದ ಶ್ರಮ ಸಂಸ್ಕೃತಿ ಭಾಗವಾಗಿ ನಾವೆಲ್ಲ ಇಲ್ಲಿ ಸೇರಿದ್ದೇವೆ.ಅಂದಿನ ಅನುಭವ ಮಂಟಪದಲ್ಲಿ ಎಲ್ಲ ಕಾಯಕವೂ ಶ್ರೇಷ್ಟ. ಯಾವ ಕೆಲಸವೂ ಕೀಳಲ್ಲವೆಂಬ ಸಂದೇಶವನ್ನು ವಚನಕಾರರು ಸಾರಿದ್ದರು.ಹಾಗೆಯೇ ಪತ್ರಿಕಾ ವಿತರಕರದು ಅತ್ಯಂತ ಶ್ರೇಷ್ಟವಾದ ಕೆಲಸ. ರಾಜ್ಯ, ದೇಶ, ವಿಶ್ವದ ಮೂಲೆಯಲ್ಲಿ ಆಗಿರುವ ಪ್ರಮಖ ಘಟನಾವಳಿಗಳ ಸೂರ್ಯ ಹುಟ್ಟುವುದಕ್ಕೂ ಮೊದಲು ಓದುಗನ ಮನೆಯಂಗಳಕ್ಕೆ ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಿದ್ದಾರೆ. ಮಳೆ,ಚಳಿ, ಗಾಳಿ ಲೆಕ್ಕಿಸದೆ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾರೆ ಎಂದರು.

ಪತ್ರಿಕೆ ವಿತರಣೆಯಲ್ಲಿ ಎರಡು ವ್ಯವಸ್ಥೆಯಿದೆ. ಏಜೆಂಟರು ಮಾದ್ಯಮ ಕಂಪನಿಗಳ ಜೊತೆ ಡಿಪಾಜಿಟ್ ಕಟ್ಟಿ ನಗರ ಪ್ರದೇಶದಲ್ಲಿ ಪತ್ರಿಕೆ ವಿತರಕರ ಜವಾಬ್ದಾರಿ ಹೊತ್ತರೆ, ಮನೆ ಮನೆಗೂ ಪತ್ರಿಕೆ ಹಂಚುವ ಹುಡುಗರು. ಮತ್ತೊಂದು ದಂಡು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೆ ಇರುವಂತೆ ವಾರಕ್ಕೊಂದು ರಜೆ ಇವರಿಗಿರುವುದಿಲ್ಲ. ಪ್ರಮುಖ ಹಬ್ಬಗಳಂದು ಮಾಧ್ಯಮ ಸಂಸ್ಥೆಗಳು ರಜೆ ಘೋಷಣೆ ಮಾಡಿದಾಗ ಮಾತ್ರ ಇವರಿಗೆ ರಜೆ ಸಿಗುತ್ತದೆ. ಹಿಂದೆಲ್ಲ ನಾವು ಓದುವಾಗ ಅನೇಕರು ಮುಂಜಾನೆ ಸೈಕಲ್ ತುಳಿದು ಪತ್ರಿಕೆ ಹಾಕಿ ಅದರಲ್ಲಿಯೇ ಸಿಗುವ ಅಲ್ಪ ಹಣದಲ್ಲಿಯೇ ವಿದ್ಯಾಭ್ಯಾಸದ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಮನೆ ಮನೆಗೆ ಪತ್ರಿಕೆ ಹಾಕಿ ಓದಿ ವಿದ್ಯಾವಂತರಾದ ಹಾಗೂ ಸದೃಢ ಸಮಾಜ ಕಟ್ಟಿದ ಅನೇಕರು ನಮ್ಮ ಮುಂದೆ ಇದ್ದಾರೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದರು. ಪತ್ರಿಕೆ ಹಂಚಿ ವಿಧಾನಸಭೆ ಪ್ರವೇಶಿಸಿ ಜನಪ್ರತಿನಿಧಿಗಳಾದವರೂ ಇದ್ದಾರೆ. ಕೋಲಾರ ಭಾಗದಲ್ಲಿ ಮುನಿಯಪ್ಪ, ಹೊಳಲ್ಕೆರೆ ಶಾಸಕ ಚಂದ್ರಪ್ಪ ಕೂಡಾ ಒಂದು ಕಾಲದಲ್ಲಿ ಪತ್ರಿಕಾ ವಿತರಕರಾಗಿದ್ದರು. ಪತ್ರಿಕಾ ವಿತರಕರು ಅಸಂಘಟಿತ ಸಮುದಾಯವಾಗಿದ್ದಾರೆ. ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರು ಇದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿಯೇ 120 ಸ್ಥಳಗಳಲ್ಲಿ ಸುಮಾರು 6500 ಜನ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ವಿತರಕರ ನೆರವಿಗೆ ಧಾವಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಇ-ಶ್ರಮ್ ಅಡಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದಾರೆ...ಕರ್ತವ್ಯ ನಿರ್ವಹಿಸುವ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಪರಿಹಾರ ಲಭ್ಯವಾಗಲಿದೆ. ಕೋವಿಡ್ ಸಮಯದಲ್ಲಿ ವಿತರಕರು ಹಲವಾರು ತೊಂದರೆಗಳನ್ನು ಅನುಭವಿಸಿದ್ದು ಹಲವರು ಅಗಲಿದ್ದಾರೆ...ಈ ಸಂಗತಿ ಇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವಿಗೆ ಧಾವಿಸಿದ್ದಾರೆ. ವಿತರಕರ ಕ್ಷೇಮಾಭಿವೃದ್ದಿಗೆ ಕನಿಷ್ಠ ಹತ್ತು ಕೋಟಿ ರುಪಾಯಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಸಿಎಂ ಮಾದ್ಯಮ ವಕ್ತಾರರು ಪ್ರಭಾಕರ್ ಕೆ.ವಿ. ಮಾತನಾಡಿ, ಮನೆ ಮನೆಗೆ ಪತ್ರಿಕೆಗಳನ್ನ ತಲುಪಿಸುವ ಕಾಯಕ ಪತ್ರಿಕಾ ವಿತರಕರು ಮಾಡುತ್ತ ಇದ್ದಾರೆ, ಕಾಂಗ್ರೆಸ್ ಸರ್ಕಾರದಿಂದ ಪತ್ರಿಕೆ ವಿತರಕರಿಗೆ ಎನೇನು ಸೌಲಭ್ಯಗಳು ಬೇಕೋ ಎಂಬುವುದರ ಬಗ್ಗೆ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿಯನ್ನ ನೀಡಲಾಗುವುದು ವಿತರಕರಿಗೆ ಆರೋಗ್ಯ ಯಾವಾಗಲ್ಲೂ ಚನ್ನಾಗಿ ಇರಲಿ ಅಂತ ಎಂದು ಆಶೀಸುವೆ ವಿತರಕರ ಮಕ್ಕಳಿಗೆ ಆರೋಗ್ಯ ವ್ಯವಸ್ಥೆಯನ್ನು ಮಾಡಬೇಕಿದೆ ಅದೇ ರೀತಿಯಲ್ಲಿ ಕಡಿಮೆ ಬಡ್ಡಿ ಸಾಲದ ವ್ಯವಸ್ಥೆ ಮಾಡಬೇಕು ಎನ್ನುವುದರ ವಿತರಕ ಆಗ್ರಹವಾಗಿದೆ ಮುಂದಿನ ದಿನಗಳಲ್ಲಿ ಇವೆಲ್ಲವೂ ಆಗಲಿದೆ ಎಂದು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ ಶ್ರೀ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ಶಾಸಕರಾದ ಕೆ.ಸಿ ವೀರೇಂದ್ರ ಪಪ್ಪಿ,ವಿ.ಆರ್.ಎಲ್ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ್, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ನಾಗಣ್ಣ, ಹಿರಿಯ ಪತ್ರಿಕಾ ವಿತರಕರಾದ ಜನರಪ್ಪ, ರಾಜ್ಯಾಧ್ಯಕ್ಷರಾದ ಶಂಭುಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಕಾರ್ಯನಿತರ ಪತ್ರಿಕಾ ಹಂಚಿಕೆದಾರರ ವಿತರಕ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ ಪೀರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಜಗದೀಶ್, ಐ.ಎಫ್,ಡಬ್ಲ್ಯೂ ಜೆಯ ಅಧ್ಯಕ್ಷರಾದ ಮಲ್ಲಿಕಾರ್ಜನ್, ಪ್ರಕಾಶ್ ನಾಯ್ಕ್, ನಾಗವೇಣಿ ಸೇರಿದಂತೆ ಇತರರು ಭಾಗವಹಿಸಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಿಕಾ ವಿತರಕರು ಸೇರಿದಂತೆ ಸುಮಾರು 550- 600 ಜನ ಭಾಗವಹಿಸಿದ್ದರು.

Tags :
Advertisement