Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೆಬ್ರವರಿ 13 ರಂದು ನಾಯಕನಹಟ್ಟಿ ಬಂದ್ : ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ನಿರ್ಣಯ

05:07 PM Feb 06, 2024 IST | suddionenews
Advertisement

 

Advertisement

ಸುದ್ದಿಒನ್, ನಾಯಕನಹಟ್ಟಿ, ಫೆಬ್ರವರಿ.06 : ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ನೀರಾವರಿ ಆನುಷ್ಠಾನ ಹೋರಾಟ ಸಮಿತಿಯು ಫೆಬ್ರವರಿ 13ರ ಮಂಗಳವಾರ ನಾಯಕಹನಟ್ಟಿ ಬಂದ್ ಗೆ ಕರೆ ನೀಡಿದೆ.
ಹಟ್ಟಿ ಮಲ್ಲಪ್ಪನಾಯಕ ಸಂಘದ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಹೋಬಳಿ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸ್ವಯಂ ಪ್ರೇರಿತ ಬಂದ್ ಆಚರಿಸುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಹೋಬಳಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ, ದೇಶಕ್ಕಾಗಿ ನಾಯಕನಹಟ್ಟಿ ಹೋಬಳಿ ಜನ ಅಪಾರ ಪ್ರಮಾಣದಲ್ಲಿ ತ್ಯಾಗ ಮಾಡಿದ್ದಾರೆ. ಡಿಆರ್ ಡಿಓ ಸೇರಿದಂತೆ  ಹಲವು ವೈಜ್ಞಾನಿಕ ಸಂಸ್ಥೆಗಳಿಗೆ 13 ಸಾವಿರ  ಎಕರೆ ಭೂಮಿ ಬಿಟ್ಟುಕೊಟ್ಟು ಕೊಟ್ಟಿದ್ದಾರೆ. ಇಂತಹ ತ್ಯಾಗಿಗಳ ಬದುಕು ಹಸನಾಗಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲೂಕಿನ ಎಲ್ಲ ಕೆರೆಗಳ ಶೀಘ್ರ ತುಂಬಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ತಾಲೂಕುಗಳ ಕಡೆಗಣನೆ ಮಾಡಲಾಗಿದೆ. ಈ ಭಾಗದ ಜನರ ತಾಳ್ಮೆ ಪರೀಕ್ಷೆ ಮಾಡಲು ಸರ್ಕಾರ ಮುಂದಾಗಬಾರದು. ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳ ತುಂಬಿಸಬೇಕು. ಈ  ಭಾಗದಲ್ಲಿಯೂ ಡ್ರಿಪ್ ಇರಿಗೇಷನ್ ಪ್ರಾಜೆಕ್ಟ್ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಚಿಂತಕ ಜಗಳೂರು ಯಾದವರೆಡ್ಡಿ ಮಾತನಾಡಿ,  ಭದ್ರಾ ಮೇಲ್ದೆಂಡೆ ಕಾಮಗಾರಿ ಶೀಘ್ರ ಮುಗಿಸುವ ಇರಾದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ. ಜನರ ಭಾವನೆಗಳ ಜೊತೆ ಯಾವುದೇ ಸರ್ಕಾರಗಳು ಚೆಲ್ಲಾಟವಾಡಬಾರದು.ಭದ್ರಾದ ನಂತರ ಕೈಗೆತ್ತಿಕೊಳ್ಳಲಾದ ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ ರುಪಾಯಿ ವ್ಯಯ ಮಾಡಿರುವ ರಾಜ್ಯ ಸರ್ಕಾರ ಭದ್ರಾ ಮೇಲ್ಡಂಡೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರವ  ಎಚ್ಚರಿಸಲು ಹೋರಾಟವೊಂದೇ ಅನಿವಾರ್ಯ. ನಿರ್ಣಾಯಕ ಹೋರಾಟದ ಮೂಲಕ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳಲು ಎಲ್ಲರೂ ಮುಂದಾಗಬೇಕೆಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಇದು ಪಕ್ಷಾತೀತ ಹೋರಾಟವಾಗಿದ್ದು ಜನರ ಬದುಕು ಪ್ರಧಾನವಾಗಿರಿಸಿಕೊಂಡು ಮುನ್ನಡೆಯಲಾಗುತ್ತಿದೆ. ಯಾವುದೇ ಪಕ್ಷದ ವಿರುದ್ದ ನಮ್ಮ ಹೋರಾಟವಲ್ಲ. ಭದ್ರಾ ಮೇಲ್ಡಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎನ್ನುವುದು ನಮ್ಮ ಹಕ್ಕೊತ್ತಾಯ. ಕೇಂದ್ರ ಸರ್ಕಾರದ ಅನುದಾನ ಕೊಡುತ್ತದೆ ಎಂದು ರಾಜ್ಯ ಸರ್ಕಾರ ಕಾಯವುದು, ರಾಜ್ಯ ಮೊದಲು ಖರ್ಚು ಮಾಡಲಿ ಎಂದು ಕೇಂದ್ರ ಉದಾಸೀನ ತೋರುವುದು ತರವಲ್ಲದ ನಡವಳಿಕೆಯಾಗಿದೆ. ಅನುದಾನ ಎಲ್ಲಿಂದ ತರುತ್ತಾರೋ ನಮಗದು ಬೇಕಾಗಿಲ್ಲ. ಆಧ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಿ ಎಂಬುದು ನಮ್ಮ ಬೇಡಿಕೆ ಎಂದರು.
ಭದ್ರಾ ಕಾಮಗಾರಿಗೆ ಹಣ ಒದಗಿಸುವಂತೆ ಆಗ್ರಹಿಸಿ ಈಗಾಗಲೇ ಚಿತ್ರದುರ್ಗ ಬಂದ್ ನಡೆದಿದೆ. ಫೆಬ್ರವರಿ 9 ರಂದು ಚಳ್ಳಕೆರೆ ಬಂದ್ ಕರೆಯಲಾಗಿದೆ. ಜಿಲ್ಲಾ ಪಂಚಾಯಿತಿ ಮುಂಭಾಗ ರೈತ ಸಂಘ  ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ. ಚಿತ್ರದುರ್ಗದ ನೆಲದಲ್ಲಿ ಹೆಚ್ಚು ಹೋರಾಟಗಳು ದಾಖಲಾಗುವುದರ ಮೂಲಕ ಬಹುದಿನಗಳ ನೀರಾವರಿ ಕನಸು ಸಾಕಾರಗೊಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಂಘಟಿತ ಪ್ರಯತ್ನ ಅಗತ್ಯವೆಂದರು. ಫೆಬ್ರವರಿ 13 ರಂದು ಸ್ವಯಂ ಪ್ರೇರಿತ ನಾಯಕನಹಟ್ಟಿ ಬಂದ್ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಹೋಬಳಿ  ಉಪಾಧ್ಯಕ್ಷ ಮಹಾಂತೇಶ್ ದೇವರಹಳ್ಳಿ, ಆರ್ ಬಸಪ್ಪ, ಗುಂತಕೋಲಮ್ಮನಹಳ್ಳಿ ಚಂದ್ರಣ್ಣ, ಕಾರ್ಯಧ್ಯಕ್ಷ ಎಸ್. ಟಿ ಬೋರ್ ಸ್ವಾಮಿ, ಗೌಡಗೆರೆ ಟಿ ರಂಗಪ್ಪ, ಚೇರ್ಮನ್ ತಿಪ್ಪೇಸ್ವಾಮಿ, ಏಜೆಂಟ್ರು ಪಾಲಯ್ಯ, ರೇಖಲಗೆರೆ ವೀರೇಶ್, ಅಶೋಕ್, ಅಬ್ಬೇನಹಳ್ಳಿ ಎಂ ಎಸ್ ಶಿವಪ್ರಕಾಶ್, ಕೆ.ಟಿ ನಾಗರಾಜ್ ಮಲ್ಲೂರಹಳ್ಳಿ, ತೊರೆಕೋಲಮ್ಮನಹಳ್ಳಿ, ಮಂಜಣ್ಣ, ರಾಮಸಾಗರ ಪಿ.ಪಿ ಮಹಾಂತೇಶ್ ನಾಯಕ, ಜಯಣ್ಣ, ಆರ್ ತಿಪ್ಪೇಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement
Tags :
bandhchitradurgafebruaryIrrigation Implementation Struggle Committee meetingNayakanahattyResolutionsuddionesuddione newsಚಿತ್ರದುರ್ಗನಾಯಕನಹಟ್ಟಿನಿರ್ಣಯನೀರಾವರಿ ಅನುಷ್ಠಾನ ಹೋರಾಟ ಸಮಿತಿಫೆಬ್ರವರಿಬಂದ್ಸಭೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article