Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸರ್ಕಾರದ ಕ್ರಾಂತಿಕಾರಿ ಯೋಜನೆಯಿಂದ 150 ಕ್ಕೂ ಹೆಚ್ಚು ಯುವಜನರು ವಿದೇಶದಲ್ಲಿ ಉದ್ಯೋಗ : ಎಂ. ಕನಗವಲ್ಲಿ

07:16 PM Aug 02, 2024 IST | suddionenews
Advertisement

ಚಿತ್ರದುರ್ಗ. ಆಗಸ್ಟ್02 : ಸರ್ಕಾರದ ಕ್ರಾಂತಿಕಾರಿ ಯೋಜನೆಯಿಂದಾಗಿ ರಾಜ್ಯದ ಬಡ ಯುವಕರು ಯೂರೋಪ್, ಹಂಗೇರಿ ಸೇರಿದಂತೆ ವಿವಿಧ ದೇಶಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದು, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರ ದೂರದೃಷ್ಟಿ ಹಾಗೂ ಅವರ ಸಮುಚಿತ ಮಾರ್ಗದರ್ಶನದಲ್ಲಿ ಈ ಯೋಜನೆ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಗ್ರಂಥಾಲಯ ಇಲಾಖೆ ಆಯುಕ್ತರಾಗಿರುವ ಎಂ. ಕನಗವಲ್ಲಿ ಅವರು ಹೇಳಿದರು.

Advertisement

 

ಚಿತ್ರದುರ್ಗದ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಕಚೇರಿ ಹಾಗೂ ನಗರದ ಕೇಂದ್ರ ಗ್ರಂಥಾಲಯಕ್ಕೆ ಶುಕ್ರವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಅವರು ಮಾಹಿತಿ ನೀಡಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ರಾಜ್ಯದ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆ ಅನುಷ್ಠಾನಗೊಳಿಸುತ್ತಿದೆ, ಕೇವಲ ಕಳೆದೆರಡು ತಿಂಗಳಿನಲ್ಲಿಯೇ ರಾಜ್ಯದ ಸುಮಾರು 150 ಕ್ಕೂ ಹೆಚ್ಚು ಯುವಜನರು ಸ್ಲೋವಾಕಿಯಾ, ಹಂಗೇರಿ ಮುಂತಾದ ದೇಶಗಳಿಗೆ ವಿವಿಧ ಉದ್ಯೋಗಕ್ಕೆ ಆಯ್ಕೆಯಾಗಿ ತೆರಳಿದ್ದು, ಅವರು ವಿದೇಶಕ್ಕೆ ತೆರಳಲು ನಿಗಮದ ವತಿಯಿಂದಲೇ ಅವರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಲಾಗಿದೆ.

Advertisement

ಐಟಿಐ, ಡಿಪ್ಲೋಮಾ ಮುಂತಾದ ವೃತ್ತಿಪರ ಕೋರ್ಸ್‍ಗಳನ್ನು ವ್ಯಾಸಂಗ ಮಾಡಿರುವ ಯುವಕರು, ಇಲ್ಲಿ ಉದ್ಯೋಗಕ್ಕಾಗಿ ಹರಸಾಹಸ ಪಡುವಂತಹ ಸಂದರ್ಭದಲ್ಲಿ ರಾಜ್ಯದ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರ ದೂರದೃಷ್ಟಿ ಮತ್ತು ಉತ್ತಮ ಮಾರ್ಗದರ್ಶನದಂತೆ, ಈ ಯುವಕರಿಗೆ ವಿದೇಶದಲ್ಲಿ ಕೈತುಂಬಾ ಸಂಬಳ ಪಡೆದು, ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತಾಗಲು ನಿಗಮವು ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದರು.
ಈವರೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಯುವಜನರನ್ನು ನಾನಾ ದೇಶಗಳಿಗೆ ಉದ್ಯೋಗಕ್ಕಾಗಿ ಕಳುಹಿಸಿಕೊಡಲಾಗಿದೆ.  ಯುವಜನರ ವೃತ್ತಿಪರ ಕೋರ್ಸ್‍ಗೆ ಅನುಗುಣವಾಗಿ ವಿದೇಶದಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಅವರಿಗೆ ಸ್ಥಳೀಯವಾಗಿ ಉತ್ತಮ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.  ವಿವಿಧ ದೇಶಗಳ ಜೊತೆ ಒಡಂಬಡಿಕೆ ಮಾಡಿಕೊಂಡು, ಅಂತಹ ಅಭ್ಯರ್ಥಿಗಳಿಗೆ ಬಿಡದಿಯ ಟೊಯೋಟಾ, ಕಿರ್ಲೋಸ್ಕರ್ ನಲ್ಲಿ ತರಬೇತಿಯನ್ನು ಕೊಡಿಸಿ, ಪ್ರತಿ ಅಭ್ಯರ್ಥಿಗೆ ತರಬೇತಿಗಾಗಿ ವೆಚ್ಚವಾಗುತ್ತಿದ್ದ ಸುಮಾರು 35 ಸಾವಿರ ರೂ. ಗಳನ್ನು ನಿಗಮದಿಂದಲೇ ವೆಚ್ಚ ಭರಿಸಲಾಗಿದೆ.

ಸ್ಲೋವಾಕಿಯಾ ದೇಶದಲ್ಲಿ ಐಟಿಐ, ಡಿಪ್ಲೋಮಾ ಉತ್ತೀರ್ಣರಾದ ಯುವಜನರಿಗೆ ನೇಮಕಾತಿ ನಡೆದು, ಕಳೆದ ಜೂ. 05 ರಿಂದ ಈವರೆಗೆ ವಿವಿಧ ತಂಡಗಳಲ್ಲಿ ಉದ್ಯೋಗಕ್ಕಾಗಿ ಕಳುಹಿಸಿಕೊಡಲಾಗಿದೆ. ಇವರಿಗೆ ತಿಂಗಳಿಗೆ 970 ಯೂರೋ ಅಂದರೆ ಸುಮಾರು 86 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ.  ಇದೇ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಿಂದ ಆಟೋಮೊಬೈಲ್ ಡಿಪ್ಲೋಮಾ ಓದಿದ್ದ ಮೆಹ್ತಾಬ್ ಎಸ್ ಹೆಬ್ಬಳ್ಳಿ ಎಂಬ ಅಭ್ಯರ್ಥಿ ಈಗಾಗಲೆ ಉದ್ಯೋಗ ಪಡೆದು, ಸ್ಲೊವಾಕಿಯಾ ದೇಶಕ್ಕೆ ತೆರಳಿದ್ದಾನೆ.

ಇತ್ತೀಚೆಗಷ್ಟೇ ಸುಮಾರು 37 ಚಾಲಕರನ್ನು ಉದ್ಯೋಗಕ್ಕಾಗಿ ಹಂಗೇರಿಗೆ ಕಳುಹಿಸಿಕೊಡಲಾಗಿದೆ.  ಅಭ್ಯರ್ಥಿಗಳಿಗೆ ತರಬೇತಿ, ವೀಸಾ ವ್ಯವಸ್ಥೆ, ವಿವಿಧ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮುಂತಾದ ಕಾರ್ಯಗಳಿಗೆ ನಿಗಮವೇ ಒತ್ತಾಸೆಯಾಗಿ ನಿಂತಿದೆ.  ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಜಪಾನ್, ಫಿನ್ಲ್ಯಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲು ನಿಗಮವು ಯೋಜಿಸಿದೆ, ಈ ನಿಟ್ಟಿನಲ್ಲಿ ಈಗಾಗಲೆ ಕಾರ್ಯಪ್ರವೃತ್ತವಾಗಿದೆ ಎಂದು ಎಂ. ಕನಗವಲ್ಲಿ ಅವರು ಹೇಳಿದರು.
ಚಿತ್ರದುರ್ಗದ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಇಲಾಖಾ ಆಯುಕ್ತರಾದ ಎಂ. ಕನಗವಲ್ಲಿ ಅವರು, ಗ್ರಂಥಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಬಳಿಕ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುಗರಿಗೆ ಉತ್ತಮ ವಾತಾವರಣ ನಿರ್ಮಿಸಬೇಕು, ಓದುಗರ ಸೆಳೆಯಲು ಉತ್ತಮ ವಾತಾವರಣ, ಸೇವೆ ನೀಡಬೇಕು. ಓದುಗರಿಗೆ ಸರಿಯಾದ ಆಸನ, ನೀರು, ಉತ್ತಮ ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಸೇರಿದಂತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಓದುಗರ ಆಸಕ್ತಿಗನುಗುಣವಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಪುಸ್ತಕಗಳನ್ನು ತರಿಸಿ, ಗ್ರಂಥಾಲಯದಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ತಿಳಿಸಿದರು.

ನಗರದ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಸಭಾಂಗಣ, ಸ್ಪರ್ಧಾತ್ಮಕ ವಿಭಾಗ, ದಿನಪತ್ರಿಕೆ ವಿಭಾಗಗಳಿಗೆ ಭೇಟಿ ನೀಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತರಾದ ಎಂ.ಕನಗವಲ್ಲಿ ಅವರು ಓದುಗರೊಂದಿಗೆ ಸಂವಾದ ನಡೆಸಿ, ಗ್ರಂಥಾಲಯದ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಚಿತ್ರದುರ್ಗ ನಗರದ ಕೆಹೆಚ್‍ಬಿ ಕಾಲೋನಿಯ ಗ್ರಂಥಾಲಯದ ಕಟ್ಟಡದ ನಿವೇಶನಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇದಕ್ಕೂ ಮುನ್ನ ತಾಲ್ಲೂಕಿನ ಕೆ. ಬಳ್ಳೇಕಟ್ಟೆ ಬಳಿಯ ಬಿದರೆಕೆರೆ ಹತ್ತಿರ ಕೌಶಲ್ಯಾಭಿವೃದ್ಧಿ ಇಲಾಖೆಗೆ ಸೇರಿದ 45.13 ಎಕರೆ ವಿಸ್ತೀರ್ಣದ ಭೂಮಿಗೆ 1.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಪೌಂಡ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಟಿ. ವೇಮಣ್ಣ, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸುಮಾ ಕೋಡಿಹಳ್ಳಿ, ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ್, ದಾವಣಗೆರೆ ಜಿಲ್ಲಾ ಉಪನಿರ್ದೇಕ ಪಿ.ಆರ್.ತಿಪ್ಪೇಸ್ವಾಮಿ ಸೇರಿದಂತೆ ಗ್ರಂಥಾಲಯ ಸಿಬ್ಬಂದಿ ಇದ್ದರು.

Advertisement
Tags :
employed abroadgovernment: M. Kanagarevolutionary schemeyoung peopleಎಂ. ಕನಗವಲ್ಲಿಕ್ರಾಂತಿಕಾರಿ ಯೋಜನೆಯುವಜನರುವಿದೇಶದಲ್ಲಿ ಉದ್ಯೋಗಸರ್ಕಾರ
Advertisement
Next Article