Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎಲ್ಲರ ಹೃದಯದಲ್ಲಿ ಜಗಜ್ಯೋತಿ ಬಸವೇಶ್ವರ ಅನಾವರಣವಾಗಲಿ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ

01:33 PM May 10, 2024 IST | suddionenews
Advertisement

Let Jagajyoti Basaveshwara be unveiled in everyone's heart: ADC BT Kumaraswamy

Advertisement

ಚಿತ್ರದುರ್ಗ‌.  ಮೇ.10:   ಸರ್ಕಾರದ ಆದೇಶದಂತೆ ಎಲ್ಲಾ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದೆ. ನಿಜವಾಗಿಯೂ ನಮ್ಮೆಲ್ಲರ ಹೃದಯದಲ್ಲಿ ಜಗಜ್ಯೋತಿ ಬಸವೇಶ್ವರರು ಅನಾವರಣಗೊಳ್ಳಬೇಕು. ಅಂದಾಗ ಮಾತ್ರ ಬಸವೇಶ್ವರರ ತತ್ವಗಳನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾಡಿನ ಸಾಂಸ್ಕøತಿಕ ನಾಯಕ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಗಳಿಗೆ ಪುಷ್ಪ ನಮನ ಸಮರ್ಪಿಸಿ ಅವರು ಮಾತನಾಡಿದರು.

Advertisement

 

ದುಡಿಮೆ ಹಾಗೂ ದಾಸೋಹ ಎಂಬ ಎರಡು ಮಹತ್ವವಾದ ತತ್ವಗಳನ್ನು ಬಸವೇಶ್ವರರು ನಾಡಿಗೆ ಪರಿಚಯಿಸಿದ್ದಾರೆ. ಕಾಯಕದಲ್ಲಿ ಕೈಲಾಸ ಕಂಡವರು ಶಿವಶರಣರು. 12ನೇ ಶತಮಾನ ಅನುಭವ ಮಂಟಪದಲ್ಲಿ ನಿಜವಾದ ಪ್ರಜಾಪ್ರಭುತ್ವದ ಕುರುಹು ಕಾಣಬಹುದು. ಅನುಭವ ಮಂಟಪ ಜಾತಿ ಆಧಾರದ ಮೇಲೆ ರೂಪುಗೊಂಡಿಲ್ಲ. ಎಲ್ಲಾ ಜಾತಿಯ ಮಹನೀಯರು ಅನುಭವ ಮಂಟಪದ ಸದಸ್ಯರಾಗಿದ್ದರು. ಎಲ್ಲಾ ಶಿವಶರಣರು ಕಾಯಕ ತತ್ವದಲ್ಲಿ ನಂಬಿಕೆಯಿಟ್ಟು, ಒಂದಲ್ಲ ಒಂದು ದುಡಿಮೆಯಲ್ಲಿ ತೊಡಗಿದ್ದರು. ಇದರಿಂದ ಬಂದ ಆದಾಯವನ್ನು ದಾಸೋಹಕ್ಕೆ ಬಳಸಿಕೊಳ್ಳುತ್ತಿದ್ದರು.

ಬಿಜ್ಜಳ ರಾಜನ ಕೋಶದ ಮಂತ್ರಿಯಾಗಿ ಬಸವಣ್ಣ ಕೆಲಸ ನಿರ್ವಹಿಸಿದರೂ, ಒಂದು ಬಿಡಿಗಾಸನ್ನು ರಾಜ್ಯದ ಕೋಶದಿಂದ ದಾಸೋಹಕ್ಕೆ ಬಳಸಿಕೊಳ್ಳಲಿಲ್ಲ. ನಿಷ್ಠೆಯಿಂದ ಶಿವಶರಣ ದುಡಿಮೆಯಿಂದಲೇ ದಾಸೋಹ ಕೈಗೊಂಡರು. ಕೋಶದ ಹಣ ಬಳಕೆ ಮಾಡಿದಂತೆ ಆರೋಪ ಬಂದ ತಕ್ಷಣ ತನ್ನ ಸ್ಥಾನವನ್ನು ಬಸವೇಶ್ವರರು ತೊರೆದರು.

ನಾವು ದುಡಿಯಬೇಕು, ದುಡಿದಿದ್ದನ್ನು ಸಮಾಜಕ್ಕೆ ಹಂಚಬೇಕು. ಆದರೆ ಇಂದಿನ ಸಮಾಜದಲ್ಲಿ ಸ್ವಾರ್ಥದಿಂದ ನನಗೆ, ನನ್ನ ಕುಟುಂಬಕ್ಕೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮೊಮ್ಮಕ್ಕಳಿಗೆ ಎಂದು ಸಂಪತ್ತನ್ನು ಕೂಡಿಡುವ ಪ್ರವೃತ್ತಿ ಬೆಳೆಯುತ್ತಿದೆ. ಈ ಪರಿಕಲ್ಪನೆಯಿಂದ ಆಚೆ ಬಂದು ಸಮಾಜಮುಖಿಯಾಗಿ ಜೀವನ ನಡೆಸುವುದನ್ನು 12ನೇ ಶತಮಾನದಲ್ಲಿ ಬಸವೇಶ್ವರರು ನಮ್ಮೆಲ್ಲರಿಗೂ ತೋರಿಸಿಕೊಟ್ಟರು. ಇದೇ ಮಾದರಿಯಲ್ಲಿ ನಡೆ-ನುಡಿ ಒಂದಾಗಿ ಬಸವೇಶ್ವರರು ಬಾಳಿದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಬಸವೇಶ್ವರರು ಸಾಂಸ್ಕøತಿಕವಾಗಿಯೂ ನಾಡಿನ ಹಿರಿಮೆಯಾಗಿದ್ದಾರೆ. ಬಸವೇಶ್ವರರ ವಚನಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದವು. ಜನ ಸಾಮಾನ್ಯರ ಅಡು ಭಾಷೆಯಲ್ಲಿಯೇ ವಚನಗಳನ್ನು ಬರೆದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಓರ್ವ ಗೃಹಿಣಿಯಾಗಿ ಮಹಾಸಾಧ್ವಿತನಕ್ಕೆ ಏರಿದವಳು. ವಿಷಯ ಲಂಪಟ ವೇಮನನ್ನು ಮಹಾಯೋಗಿ ವೇಮನನ್ನಾಗಿ ಮಾಡಿದ್ದು ಹೇಮರೆಡ್ಡಿ ಮಲ್ಲಮ್ಮ. ಅವಳ ಭಕ್ತಿ ಹಾಗೂ ಉದಾರ ಗುಣ ನಮ್ಮೆಲರಿಗೂ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ವೀರಶೈವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣನವರ ನಡೆ-ನುಡಿ ಪಾಲನೆಯಿಂದ ನಮಗೆ ಯಾವುದೇ ವಿಚಾರದಲ್ಲಿಯೂ ಹಿನ್ನಡೆಯಾಗುವುದಿಲ್ಲ. ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ, ಜಾತಿವ್ಯವಸ್ಥೆಯನ್ನು ತೊಡೆದು ಹಾಕಿದ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಲಾಗಿದೆ. ಅದರಂತೆ ನಮ್ಮ ಬಹಳ ವರ್ಷಗಳ ಬೇಡಿಕೆಯಾದ ಬಸವಣ್ಣನವರ ಪುತ್ಥಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸ್ಥಾಪನೆ ಮಾಡುವುದು ಸೂಕ್ತ ಎಂದು ತಿಳಿಸಿದ ಅವರು, ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಸ್ತ್ರೀ ಕುಲಕ್ಕೆ ಮಾದರಿಯಾಗಿ, ಸಮಾಜದ ಉದ್ದಾರಕ್ಕಾಗಿ, ಭಕ್ತಿಯ ಸಾಕಾರಮೂರ್ತಿಯಾಗಿ ಹೇಮರೆಡ್ಡಿ ಮಲ್ಲಮ್ಮರವರ ಜೀವನ ಆದರ್ಶಪ್ರಾಯವಾಗಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಗ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ವೀರಶೈವ ಸಮಾಜದ ಕಾರ್ಯದರ್ಶಿ ವೀರೇಂದ್ರ ಕುಮಾರ್, ಸಹಕಾರ್ಯದರ್ಶಿ ಜಿತೇಂದ್ರ ಹುಲಿಕುಂಟೆ, ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ಮಹೇಶ್, ಕಾರ್ಯದರ್ಶಿ ದಿವಾಕರ್, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಬಸವರಾಜ್, ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಮುಖಂಡರಾದ ಮೋಕ್ಷಾರುದ್ರಸ್ವಾಮಿ,  ರುದ್ರೇಶ್ ಐಗಾಳ್,  ಹೇಮರೆಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಉಪಾಧ್ಯಕ್ಷರಾದ ನಾಗರಾಜ್ ಸಂಗಮ್, ಕೆ.ಪಿ.ಬಸವರಾಜ್, ಖಜಾಂಚಿ ದಯಾನಂದ ಪಾಟೀಲ್, ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಜಯದೇವಪ್ಪ ಸೇರಿದಂತೆ ಮತ್ತಿತರರು ಇದ್ದರು.

Advertisement
Tags :
ADC BT KumaraswamybengaluruchitradurgaheartJagajyoti Basaveshwarasuddionesuddione newsಅನಾವರಣಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿಚಿತ್ರದುರ್ಗಜಗಜ್ಯೋತಿ ಬಸವೇಶ್ವರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹೃದಯ
Advertisement
Next Article