Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಒಳ ಮೀಸಲಾತಿ ವರದಿ ಶಿಫಾರಸ್ಸು ಕೂಡಲೆ ವಾಪಸ್ ಪಡೆಯಬೇಕು : ಸರ್ದಾರ್ ಸೇವಾಲಾಲ್ ಸ್ವಾಮೀಜಿ

06:25 PM Mar 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.01  : ಒಳ ಮೀಸಲಾತಿ ವರ್ಗಿಕರಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಶಿಫಾರಸ್ಸು ಮಾಡಿರುವುದನ್ನು ಕೂಡಲೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಕೆ ನೀಡಿದರು.

Advertisement

ಬಂಜಾರ ಲಂಬಾಣಿ ಸಮಾಜ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಇವರ ಸಂಯುಕ್ತಾಶ್ರಯದಲ್ಲಿ ಬಂಜಾರ ಭವನದಲ್ಲಿ ಶುಕ್ರವಾರ ನಡೆದ ಸಂತ ಸದ್ಗುರು ಸೇವಾಲಾಲ್ ಮಹಾರಾಜರ 285 ನೇ ಜಯಂತ್ಯೋತ್ಸವ ಉದ್ಗಾಟಿಸಿ ಮಾತನಾಡಿದರು.

ಒಳ ಮೀಸಲಾತಿ ವರ್ಗಿಕರಣದಿಂದ ಕೊರಚ, ಕೊರಮ, ಲಂಬಾಣಿ, ಭೋವಿ ಜನಾಂಗಕ್ಕೆ ಅನ್ಯಾಯವಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ವರದಿಯನ್ನು ಹಿಂದಕ್ಕೆ ತರಿಸಿಕೊಳ್ಳಬೇಕು. 3600 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಸರ್ಕಾರ ಘೋಷಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಲಂಬಾಣಿ ಸಮಾಜದಲ್ಲಿ ಸಣ್ಣಪುಟ್ಟ ಮನಸ್ತಾಪ, ದ್ವೇಷ, ಅಸೂಯೆಗಳಿವೆ. ನಮ್ಮ ಸಮಾಜ ಪವಿತ್ರವಾದುದು, ಯಾರ ಮೇಲೂ ದೌರ್ಜನ್ಯ, ದಬ್ಬಾಳಿಕೆ ನಡೆಸಲಿಲ್ಲ. ಮೋಸ, ವಂಚನೆ ಮಾಡಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಸರ್ದಾರ್ ಸೇವಾಲಾಲ್ ಮಹಾರಾಜರು ಶಾಂತಿ ಪ್ರಿಯರು. ಸಂದರ್ಭ ಬಂದಾಗ ಕ್ರಾಂತಿಕಾರರಾಗುತ್ತಿದ್ದರು. ಶಾಂತಿ-ಕ್ರಾಂತಿಯ ಸಂಕೇತ ನಮ್ಮದು. ಕೆಲವು ದುಷ್ಟ ಶಕ್ತಿಗಳು ಕೆಣಕುತ್ತಿದ್ದಾರೆ. ಧರ್ಮಕ್ಕೆ ದ್ರೋಹ ಅಪಚಾರ ಮಾಡುವವರು ಸರ್ವನಾಶವಾಗುತ್ತಾರೆಂದರು.

ಸರ್ದಾರ್ ಸೇವಾಲಾಲ್ ಮಹಾರಾಜರು ಅವತಾರ ಪುರುಷರು, ಆದರ್ಶ ಮೌಲ್ಯಗಳನ್ನು ಕೊಟ್ಟಿದ್ದಾರೆ. ಅದರಂತೆ ಸಾಗುತ್ತಿದ್ದೇವೆ. ಲಂಬಾಣಿ ಜನಾಂಗದಲ್ಲಿರುವ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡು ಅನ್ಯ ಧರ್ಮಿಯರು ಪ್ರೀತಿಸುವ ನೆಪದಲ್ಲಿ ಮತಾಂತರ ಮಾಡುತ್ತಿದ್ದಾರೆ. ಅದನ್ನು ಎಂದಿಗೂ ನಾವು ಸಹಿಸುವುದಿಲ್ಲ. ಪ್ರತಿ ತಾಂಡಾಗಳಿಗೆ ಹೋಗಿ ಜಾಗೃತಿ ಅಭಿಯಾನ ಕೈಗೊಳ್ಳುತ್ತೇವೆ. ಏನಾದರೂ ವೈಮನಸ್ಸಿದ್ದರೆ ಬಂದು ಮಾತನಾಡಲಿ. ಅದನ್ನು ಬಿಟ್ಟು ಒಳಗಿಂದೊಳಗೆ ಬೇರೆಯವರನ್ನು ಎತ್ತಿಕಟ್ಟಿ ಸಮಾಜ ಹೊಡೆಯುವ ಕೆಲಸ ಮಾಡಬಾರದು. ನಮಗೆ ಸಮಾಜ, ಧರ್ಮ ಮುಖ್ಯ ಎಂದು ಹೇಳಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸದಸ್ಯರು, ಐಸಾಕ್ ಚೇರ್ಮನ್ ನವದೆಹಲಿಯ ಲೋಕೇಶ್ವರ್ ನಾಯ್ಕ ಎಂ. ಮಾತನಾಡಿ ಲಂಬಾಣಿ ಸಮಾಜದವರಿಗೆ ಆಸೆ ಆಮಿಷಗಳನ್ನು ತೋರಿಸಿ ಮತಾಂತರ ಮಾಡುವವರ ವಿರುದ್ದ ಹೋರಾಡಬೇಕಿದೆ. ಕ್ರಿಶ್ಚಿಯನ್ನರು ಮತಾಂತರ ಮಾಡುತ್ತಿದ್ದಾರೆ. ಲಂಬಾಣಿ ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅಂತಹವರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವಾಗಬೇಕೆಂದು ಸಲಹೆ ನೀಡಿದರು.

ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‍ಕುಮಾರ್ ಮಾತನಾಡುತ್ತ ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಛಿದ್ರವಾಗಲು ಬಿಡುವುದಿಲ್ಲ. 55 ಹೆಣ್ಣು ಮಕ್ಕಳ ಮತಾಂತರಗೊಳಿಸಿ ಕೋಟೆ ಸಮೀಪವಿರುವ ಜಿಪ್ಸಿ ಹಾಸ್ಟೆಲ್‍ನಲ್ಲಿಟ್ಟಿದ್ದಾಗ ದಾಳಿ ನಡೆಸಿ ಹೊರ ತಂದಿದ್ದೇವೆ. ರಾಜ್ಯಾದ್ಯಂತ ಸ್ವಾಮೀಜಿಗಳ ಮುಂದಾಳತ್ವದಲ್ಲಿ ಸಂಚರಿಸಿ ಮತಾಂತರ ತಡೆಗಟ್ಟುವಿಕೆಗೆ ಹೋರಾಡುತ್ತೇವೆಂದು ಹೇಳಿದರು.

ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಅನಂತಮೂರ್ತಿ ನಾಯ್ಕ ಮಾತನಾಡಿ ಲಂಬಾಣಿ ಜನಾಂಗ ಶಾಂತಿ ಪ್ರಿಯರು ಅನೇಕ ಹೋರಾಟಗಾರರು, ಕಲಾವಿದರುಗಳಿದ್ದಾರೆ. ಬ್ರಿಟೀಷರ ವಿರುದ್ದ ಹೋರಾಡಿದ ಜನಾಂಗ ನಮ್ಮದು. ಕೆಲವು ವಿಷ ಜಂತುಗಳಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು.

ಮೂಲಭೂತ ಸೌಲಭ್ಯಗಳಿಲ್ಲದೆ ಗುಡ್ಡ-ಗಾಡುಗಳಲ್ಲಿ ವಾಸಿಸುತ್ತಿರುವ ಜನಾಂಗ ನಮ್ಮದು. ಆದರೂ ಬುದ್ದಿವಂತರು, ವಿದ್ಯಾವಂತರಿದ್ದಾರೆ. ಲಂಬಾಣಿ ಜನಾಂಗವನ್ನು ಮತಾಂತರಗೊಳಿಸಿ ಮುಗ್ದರನ್ನು ದಿಕ್ಕುತಪ್ಪಿಸುತ್ತಿರುವುದರ ವಿರುದ್ದ ಎಚ್ಚರಿಕೆಯಿಂದಿರಬೇಕೆಂದರು.

ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಗಿರೀಶ್ ಚಂದ್ಯಾನಾಯ್ಕ ಮಾತನಾಡಿ ಸರ್ದಾರ್ ಸೇವಾಲಾಲ್ ಮಹಾರಾಜರು ಲಂಬಾಣಿ ಜನಾಂಗವನ್ನು ಮೇಲಕ್ಕೆತ್ತಲು ಶ್ರಮಿಸಿದ್ದಾರೆ. ಪವಾಡ ಪುರುಷರಾಗಿದ್ದ ಸೇವಾಲಾಲ್ ಮಹಾರಾಜರು ರೋಗ ರುಜಿನಗಳನ್ನು ಗುಣಪಡಿಸುತ್ತಿದ್ದರು. ಸಂಘಟನಾ ಚತುರ, ಸಮಾಜ ಸುಧಾರಕರಾಗಿದ್ದರು. ಹಾಗಾಗಿ ಭಿನ್ನಾಭಿಪ್ರಾಯಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಸಲಹೆ ನೀಡಿದರು.

ಜನಾಂಗ ಗಂಡಾಂತರಲ್ಲಿದೆ. ಮತಾಂತರ ಮೂಲಕ ಸಂಸ್ಕøತಿ ನಾಶವಾಗುತ್ತಿದೆ. ಬಂಜಾರ ಸಮಾಜ ಎಚ್ಚೆತ್ತುಕೊಂಡು ಒಳ ಮೀಸಲಾತಿ ವಿರುದ್ದ ಹೋರಾಡಬೇಕಿದೆ ಎಂದು ಕರೆ ನೀಡಿದರು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರನಾಯ್ಕ ಮಾತನಾಡುತ್ತ ಬೇರೆ ಸಮಾಜದವರು ಆಚರಿಸುವ ಜಯಂತಿಗಳು ವೈಭವವಾಗಿರುತ್ತವೆ. ಲಂಬಾಣಿ ಜನಾಂಗ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ಏಳಿಗೆಯಾಗಲು ಸಾಧ್ಯ. ಬಡತನವಿದೆಯೆಂದು ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಕಳಿಸಬಾರದು. ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಹೋರಾಟ ಮುಖ್ಯ ಎಂದರು.

ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಜಾಕೀರ್‍ಹುಸೇನ್, ಬಂಜಾರ ಭಾಷಾ ಅಕಾಡೆಮಿ ಸದಸ್ಯೆ ಹಾಗೂ ಕಲಾವಿದೆ ಶ್ರೀಮತಿ ರುದ್ರಾಕ್ಷಿಬಾಯಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ರವಿಕುಮಾರ್ ನಾಯ್ಕ, ವೀರಭದ್ರನಾಯ್ಕ, ಬಂಜಾರ ಸಮಾಜದ ಉಪಾಧ್ಯಕ್ಷ ಪ್ರವೀಣ್ ಎಲ್. ಸಿದ್ದೇಶ್‍ನಾಯ್ಕ, ಶಿವಕುಮಾರ್‍ನಾಯ್ಕ, ಶಾಂತನಾಯ್ಕ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಲಂಬಾಣಿ ಜನಾಂಗದ ಪ್ರತಿಭಾವಂತ ಕಲಾವಿದರನ್ನು ಸನ್ಮಾನಿಸಲಾಯಿತು.

Advertisement
Tags :
bengaluruchitradurgaimmediatelyInternal reservation reportRecommendationSardar Sewalal Swamijisuddionesuddione newswithdrawnಒಳ ಮೀಸಲಾತಿ ವರದಿಚಿತ್ರದುರ್ಗಬೆಂಗಳೂರುವಾಪಸ್ಶಿಫಾರಸ್ಸುಸರ್ದಾರ್ ಸೇವಾಲಾಲ್ ಸ್ವಾಮೀಜಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article