Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು | ತ್ವರಿತವಾಗಿ ರಸ್ತೆ ಅಗಲೀಕರಣವಾಗಲಿ : ನಗರಸಭೆ ಅಧ್ಯಕ್ಷ ಅಜಯ್ ಕುಮಾರ್

08:00 PM Oct 10, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 10  : ನಗರದಲ್ಲಿನ ಮೈಸೂರು ರಸ್ತೆಯ ಅಗಲೀಕರಣ ಕಾಮಗಾರಿ ತುರ್ತಾಗಿ ನಡೆಯಬೇಕಿದ್ದು ಈ ಕುರಿತು ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ರವರು ಕಟ್ಟುನಿಟ್ಟಾಗಿ ಸೂಚಿಸಿರುವುದರಿಂದ, ರಸ್ತೆ ಅಗಲೀಕರಣ ತ್ವರಿತವಾಗಿ ನಡೆಸುವ ಮೂಲಕ ನಗರದ ಸಾರ್ವಜನಿಕರ ತೊಂದರೆಯನ್ನು ಶೀಘ್ರವಾಗಿ ನಿವಾರಿಸಬೇಕಾಗಿದೆ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್ ಹೇಳಿದರು.

Advertisement

ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರುಗಳಿಗೆ ಕರೆಯಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಪಾಲ್ಗೊಂಡು ಅವರು ಮಾತನಾಡಿದರು.

Advertisement

ನಗರದ ಈ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ನಗರದಲ್ಲಿ ಸೋಮವಾರದಂದು ಅಂಬೇಡ್ಕರ್ ಸರ್ಕಲ್ ನಿಂದ ಚರಂಡಿ ಕಾಮಗಾರಿ ಶಂಕುಸ್ಥಾಪನೆ ನಡೆಯಲಿದ್ದು, 2ನೇ ಹಂತವಾಗಿ ನಡೆಯಲಿರುವ ರಸ್ತೆ ಅಗಲೀಕರಣಕ್ಕೆ ಸಾಗರರೆಡ್ಡಿ ಹೋಟೆಲ್ ನಿಂದ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದು ಕಟ್ಟಡ ತೆರವು ಮಾಡಿಕೊಡುವುದಾಗಿ ನಗರಸಭೆಗೆ ತಿಳಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.

ನಗರಸಭೆ ಹಿರಿಯ ಸದಸ್ಯರಾದ ಡಿ.ಸಣ್ಣಪ್ಪ ಮಾತನಾಡಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಸ್ವಚ್ಛತೆ ಕಡಿಮೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿ, ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಎಂಬುದಾಗಿ ಆಪಾದಿಸಿದರಲ್ಲದೆ, ಸಾರ್ವಜನಿಕರಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಬೇಕು. ನಗರದ ಪ್ರತಿ ವಾರ್ಡ್ ಗಳಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂಬುದಾಗಿ ಹೇಳಿದರಲ್ಲದೆ,
ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರನ್ನು ಪರೀಕ್ಷೆ ಮಾಡದೇ ಜಿಲ್ಲಾ ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸುತ್ತಿದ್ದಾರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಔಷಧಿಗಳನ್ನು ಆಸ್ಪತ್ರೆಯಲ್ಲಿ ನೀಡದೆ ಹೊರಗೆ ಕೊಂಡುಕೊಳ್ಳಲು ವೈದ್ಯರುಗಳು ಚೀಟಿ ಬರೆದು ಕೊಡುತ್ತಿದ್ದು, ಈ ದೂರುಗಳು ಹೆಚ್ಚಾಗುತ್ತಿದ್ದು, ಇದು ಈ ಕೂಡಲೇ ನಿಲ್ಲಬೇಕು. ತಾಲ್ಲೂಕು ಆರೋಗ್ಯ ಅಧಿಕಾರಿಗಳು ಈಬಗ್ಗೆ ಗಮನ ಹರಿಸಬೇಕು ಎಂಬುದಾಗಿ ಆಗ್ರಹಿಸಿದರು.

ಈ ಕುರಿತು ಉತ್ತರಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ವೆಂಕಟೇಶ್, ನಗರದ ಪ್ರತಿ ವಾರ್ಡ್ ಗಳಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು.ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳಿಗೆ ಔಷಧಿ ನೀಡಿ ಉತ್ತಮ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ನಿರ್ಲಕ್ಷಿಸುತ್ತಿರುವ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಸಭೆಗೆ ಭರವಸೆ ನೀಡಿದರು.
ನಗರಸಭೆ ಸದಸ್ಯರಾದ ಮಹೇಶ್ ಪಲ್ಲವ ಮಾತನಾಡಿ, ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಯಲ್ಲಿ ಆಸ್ಪತ್ರೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸದೆ ಸೂಜಿ ಮತ್ತು ಚುಚ್ಚುಮದ್ದುಗಳನ್ನು ಸರಿಯಾಗಿ ವಿಂಗಡಿಸದೇ ಕಸ ವಿಲೇವಾರಿ ಮಾಡುತ್ತಿರುವುದರಿಂದ ಪೌರಕಾರ್ಮಿಕರು ಕಸ ವಿಲಾವಾರಿ ಮಾಡುವಾಗ ಕೈಗಳಿಗೆ ಸೂಜಿ ಚುಚ್ಚಿ ತೊಂದರೆಯಾಗುತ್ತಿರುವುದಾಗಿ ಅನೇಕ ದೂರುಗಳು ಬಂದಿದ್ದು, ಇದನ್ನು ಸರಿಪಡಿಸಬೇಕೆಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ವೆಂಕಟೇಶ್, ಈಗಾಗಲೇ ತ್ಯಾಜ್ಯ ವಿಂಗಡಣೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಚರ್ಚೆ ಮಾಡಲಾಗಿದ್ದು, ಆಸ್ಪತ್ರೆಯ ತ್ಯಾಜ್ಯಗಳನ್ನು ವಿಂಗಡಿಸಿಯೇ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದ್ದು, ಆಸ್ಪತ್ರೆ ಸಿಬ್ಬಂದಿಗೆ ಈ ಬಗ್ಗೆ ಅಗತ್ಯ ತರಬೇತಿ ನೀಡಿ ಗಮನ ಹರಿಸಲಾಗುವುದು ಎಂಬುದಾಗಿ ಹೇಳಿದರು.
ನಗರಸಭೆ ಸದಸ್ಯರಾದ ಶ್ರೀಮತಿ ಶಂಷುನ್ನೀಸಾ ಮಾತನಾಡಿ, ನಮ್ಮ ವಾರ್ಡ್ ನಲ್ಲಿ ಬಹಳ ದಿನಗಳಿಂದ ನೀರು ಸರಬರಾಜು ಸರಿಯಾಗಿ ಇಲ್ಲದಾಗಿದ್ದು, ನೀರಿನ ಸೌಲಭ್ಯವಿಲ್ಲದೆ, ವಾರ್ಡ್ ನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ನಮ್ಮ ವಾರ್ಡ್ ಜನರಿಗೆ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಒಂದು ನೂತನ ನೀರಿನ ಟ್ಯಾಂಕ್ ನಿರ್ಮಾಣ ಮಾಡಿಕೊಡಬೇಕು ಎಂಬುದಾಗಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನೀರಾವರಿ ಇಲಾಖೆ ಅಧಿಕಾರಿ ಅನಿಲ್, ನಗರದಲ್ಲಿ ವಿವಿಧ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಪಟ್ಟಂತೆ ವಾಣಿವಿಲಾಸ ಜಲಾಶಯದಿಂದ ನಗರದವರೆಗೆ ನೀರು ಪೂರೈಸುವ ಕಾರ್ಯಗಳು ನಡೆಯುತ್ತಿದ್ದು, ಇದರ ಜೊತೆಗೆ ಮನೆ-ಮನೆಗೆ ನೀರಿನ ಸಂಪರ್ಕ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ನಿಮ್ಮ ವಾರ್ಡ್ ಬಗ್ಗೆಯೂ ಗಮನ ಹರಿಸಲಾಗುವುದು ಎಂಬುದಾಗಿ ಭರವಸೆ ನೀಡಿದರು.

ಅಂತಿಮವಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ರವರು ಮಾತನಾಡಿ ಇದೀಗ ನಾನೀನ್ನು ಹೊಸದಾಗಿ ಪೌರಾಯುಕ್ತರಾಗಿ ಬಂದಿದ್ದು ನಗರದಲ್ಲಿ ಏನೇನು ಸಮಸ್ಯೆಗಳಿದ್ದಾವೆ ಎಂಬುದನ್ನು ನಮ್ಮ ಸದಸ್ಯರುಗಳ ಮೂಲಕ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುವ ಮೂಲಕ ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಗರವನ್ನು ಮಾದರಿ ನಗರವನ್ನಾಗಿ ಮಾಡಬೇಕೆನ್ನುವುದು ನಮ್ಮ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್ ಹಾಗೂ ಕ್ಷೇತ್ರದ ಸಚಿವರಾದ ಡಿ. ಸುಧಾಕರ್ ರವರ ಆಶಯವಾಗಿದ್ದು, ಇವರ ಆಶಯದಂತೆ ನಾನು ಈ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂಬುದಾಗಿ ಸಭೆಗೆ ತಿಳಿಸಿದರು.

ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಆರಾಧ್ಯ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಶಂಷುನ್ನೀಸಾ ಶ್ರೀಮತಿ ಶಿವರಂಜಿನಿಯಾದವ್, ನಗರಸಭೆ ಸದಸ್ಯರುಗಳಾದ ಡಿ.ಸಣ್ಣಪ್ಪ, ದಾದಾಪೀರ್, ವಿಠ್ಠಲ್ ಪಾಂಡುರಂಗ, ಶ್ರೀಮತಿ ಮೊದಲಮರಿಯಾ, ಕೆ.ತಿಪ್ಪೇಸ್ವಾಮಿ, ಬಿ.ಎನ್.ಪ್ರಕಾಶ್, ಚಿತ್ರಜಿತ್ ಯಾದವ್, ನಾಮನಿರ್ದೇಶಿತ ಸದಸ್ಯರಾದ ಗಿರೀಶ್ ಕುಮಾರ್, ಜಗದೀಶ್, ರಮೇಶ್ ಬಾಬು, ನೀರಾವರಿ ಇಲಾಖೆ ಅಧಿಕಾರಿ ಅನಿಲ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಗರಸಭೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Advertisement
Tags :
Ajay Kumarbengaluruchitradurgacity councilhiriyurPresidentsuddionesuddione newsಅಜಯ್ ಕುಮಾರ್ಚಿತ್ರದುರ್ಗನಗರಸಭೆ ಅಧ್ಯಕ್ಷಬೆಂಗಳೂರುರಸ್ತೆ ಅಗಲೀಕರಣಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article