For the best experience, open
https://m.suddione.com
on your mobile browser.
Advertisement

ಏಳನೇ ವೇತನ, ಹಳೇ ಪಿಂಚಣಿ ಜಾರಿಗೆ ಸಿಎಂ ಸಿದ್ಧತೆ : ಮಾಜಿ ಸಚಿವ ಎಚ್.ಆಂಜನೇಯ

06:20 PM May 31, 2024 IST | suddionenews
ಏಳನೇ ವೇತನ  ಹಳೇ ಪಿಂಚಣಿ ಜಾರಿಗೆ ಸಿಎಂ ಸಿದ್ಧತೆ   ಮಾಜಿ ಸಚಿವ ಎಚ್ ಆಂಜನೇಯ
Advertisement

ಚಿತ್ರದುರ್ಗ ಮೇ 31: ಸರ್ಕಾರಿ ನೌಕರರು, ಶಿಕ್ಷಕರ ವರ್ಗ ಕಾಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

Advertisement

ಹೊಳಲ್ಕೆರೆ ಕ್ಷೇತ್ರದ ಚಿತ್ರಹಳ್ಳಿ, ಕಣಿವೆ, ಬೊಮ್ಮನಕಟ್ಟೆ, ಬಸಾಪುರ, ಬಿ.ದುರ್ಗ, ಕೋಡಿರಂಗವ್ವನಹಳ್ಳಿ ಸೇರಿ ವಿವಿಧ ವಸತಿ ಹಾಗೂ ಖಾಸಗಿ ಶಾಲೆಗಳಲ್ಲಿ ಶುಕ್ರವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮತಯಾಚಿಸಿ ಮಾತನಾಡಿದರು.

Advertisement

ಮಾಜಿ ಸಚಿವ, ರಾಜ್ಯದ ಹಿರಿಯ ನಾಯಕ ದಿವಂಗತ ಎ.ಕೃಷ್ಣಪ್ಪ ಅವರ ಕುಟುಂಬದ ಸದಸ್ಯ ಡಿ.ಟಿ.ಶ್ರೀನಿವಾಸ್ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿಕ್ಷಕರ ಕಷ್ಟ, ಸಮಸ್ಯೆಗಳ ಅರಿವು ಇದೆ. ಆದ್ದರಿಂದ ಅವರ ಗೆಲುವು ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ರಹದಾರಿ ಆಗಲಿದೆ ಎಂದರು.

Advertisement
Advertisement

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹಾಗೂ ಸರ್ಕಾರಿ ನೌಕರರ ಹಿತಕ್ಕೆ ಬದ್ಧವಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ ವರದಿ ಜಾರಿಗೆ ಸಿದ್ಧತೆ ನಡೆಸಿದೆ. ಈ ಸಂದರ್ಭ ಸರ್ಕಾರಕ್ಕೆ ವಿಧಾನಸಭೆ ರೀತಿ ವಿಧಾನ ಪರಿಷತ್‍ನಲ್ಲೂ ಬಲ ಬೇಕಿದ್ದು, ಡಿ.ಟಿ.ಶ್ರೀನಿವಾಸ್ ಗೆಲುವು ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹೆಚ್ಚು ಸಹಕಾರಿ ಆಗಲಿದೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಸೋತು ಸುಣ್ಣವಾಗಿರುವ ಬಿಜೆಪಿಗೆ ವಿಧಾನಪರಿಷತ್ ಚುನಾವಣೆಯಲ್ಲೂ ಸೋಲಿನ ಮುನ್ಸೂಚನೆ ದೊರೆತಿರುವ ಕಾರಣಕ್ಕೆ ವಾಮ ಮಾರ್ಗದಲ್ಲಿ ಸಾಗುತ್ತಿದ್ದು, ಈ ಮೂಲಕ ಶಿಕ್ಷಕ ಕ್ಷೇತ್ರದ ಪಾವಿತ್ರೃಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಮೂರು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಸಾಧನೆ ಶೂನ್ಯವಾಗಿದ್ದು, ಈಗಾಗಲೇ ಬಹಳಷ್ಟು ಶಿಕ್ಷಕರು ಭ್ರಮನಿರಸನಗೊಂಡು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿರುವುದು ವಿಜಯದ ಮುನ್ಸೂಚನೆ ಎಂದರು.

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಶಿಕ್ಷಕರ ನೇಮಕಾತಿ, ವೇತನ ಹೆಚ್ಚಳ, ಶಾಲಾ-ಕೊಠಡಿಗಳ ನಿರ್ಮಾಣ, ಶೌಚಗೃಹ ವ್ಯವಸ್ಥೆ ಹೀಗೆ ಅನೇಕ ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಇನ್ನೂ ಹೆಚ್ಚಿನ ರೀತಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲು, ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವಿದ್ಯಾವಂತ ಡಿ.ಟಿ.ಶ್ರೀನಿವಾಸ್ ಅವರ ಗೆಲುವು ಅಗತ್ಯವಾಗಿದೆ ಎಂದು ಹೇಳಿದರು.

ಉನ್ನತ ವ್ಯಾಸಂಗ ಮಾಡಿರುವ ಡಿ.ಟಿ.ಶ್ರೀನಿವಾಸ್, ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಯುವ ರಾಜಕಾರಣಿ. ಈ ಕ್ಷೇತ್ರದ ಮೂಲಕ ಶಿಕ್ಷಕರು, ಪದವೀಧರ ಯುವಕರಿಗೆ ಅನುಕೂಲ ಮಾಡಿಕೊಡಲು ಯೋಜನೆ ರೂಪಿಸಿದ್ದು, ಪ್ರಜ್ಞಾವಂತ ಶಿಕ್ಷಕರು ಪ್ರಥಮ ಪ್ರಾಶಸ್ತ್ಯ ಮತ ನೀಡುವ ಮೂಲಕ ಅವುಗಳ ಅನುಷ್ಠಾನಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಕೋರಿದರು.

ಚಿಂತಕರ ಚಾವಡಿ ಎಂದೇ ಹೆಸರು ಮಾಡಿರುವ ವಿಧಾನಪರಿಷತ್‍ಗೆ ವಿದ್ಯಾವಂತರು, ಶಿಕ್ಷಣದ ಬೆಳವಣಿಗೆ ಕುರಿತು ಕಾಳಜಿ ಹೊಂದಿರುವ ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಸಮಗ್ರ ಅರಿವನ್ನು ಹೊಂದಿರುವ ಶ್ರೀನಿವಾಸ್ ಅವರಂತಹವರು ಸದನ ಪ್ರವೇಶಿಸುವುದು ಅಗತ್ಯವಾಗಿದೆ ಎಂದರು.

ನುಡಿದಂತೆ ನಡೆಯುವ ಖ್ಯಾತಿಗಳಿಸಿರುವ ಕಾಂಗ್ರೆಸ್ ಸರ್ಕಾರ, ಹಳೇ ಪಿಂಚಣಿ ಜೊತೆಗೆ ಅನೇಕ ಜನಪರ, ಶಿಕ್ಷಕರು, ನೌಕರರ ಪರ ಕಾರ್ಯಕ್ರಮ ರೂಪಿಸಿದೆ. ಇವುಗಳ ಅನುಷ್ಠಾನಕ್ಕೆ ಮೇಲ್ಮನೆಯಲ್ಲಿ ಬಿಜೆಪಿ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಅವರ ಧ್ವನಿ ಅಡಗಿಸಿ ಜನಪರ ಧ್ವನಿಯಾಗಲು ಡಿ.ಟಿ.ಶ್ರೀನಿವಾಸ್ ಗೆಲ್ಲಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ್ ಶಿವಪುರ, ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ರಂಗಸ್ವಾಮಿ, ಡಿ.ಕೆ.ಶಿವಮೂರ್ತಿ, ಇಂದಿರಾ ಕಿರಣ್‍ಕುಮಾರ್ ಯಾದವ್, ಒಬಿಸಿ ರಾಜ್ಯ ಉಪಾಧ್ಯಕ್ಷ ಕಿರಣ್‍ಕುಮಾರ್ ಯಾದವ್, ಚಿತ್ರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕಾಟಲಿಂಗಪ್ಪ, ಪ್ರಾಚಾರ್ಯ ಮಹೇಶ್ ಅಂಗಡಿ, ಸಹ ಶಿಕ್ಷಕರು ಇದ್ದರು.

Tags :
Advertisement