For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನಿಂದ ಪ್ರತಿಭಟನೆ

05:09 PM Jul 09, 2024 IST | suddionenews
ಚಿತ್ರದುರ್ಗ   ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‍ನಿಂದ ಪ್ರತಿಭಟನೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 09  : ಶೈಕ್ಷಣಿಕ ಧನ ಸಹಾಯಕ್ಕಾಗಿ ಹೊರಡಿಸಲಾಗಿದ್ದ 2023 ರ ಅಧಿಸೂಚನೆಯನ್ನು ರದ್ದುಪಡಿಸಿ 2021 ರ ಅಧಿಸೂಚನೆಯನ್ವಯ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಅಧಿಕಾರಿ ಮೂಲಕ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

Advertisement

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ದವಾಗಿ ಸಿಗುತ್ತಿದ್ದ ಸೌಲಭ್ಯಗಳನ್ನು ನಿಲ್ಲಿಸಲಾಗಿದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳ ಜೊತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಇದುವರೆವಿಗೂ ಹನ್ನೆರಡು ಹೋರಾಟಗಳನ್ನು ನಡೆಸಲಾಗಿದೆ. ಶೈಕ್ಷಣಿಕ ಧನ ಸಹಾಯ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾಗಿರುವ ಸಾವಿರಾರು ಅರ್ಜಿಗಳು ಕೊಳೆಯುತ್ತಿವೆ. ಪಿಂಚಣಿ ಕೂಡ ನಿಂತಿರುವುದರಿಂದ ಕಾರ್ಮಿಕರ ಕುಟುಂಬ ಸಂಕಷ್ಟ ಎದುರಿಸುತ್ತಿದೆ.

Advertisement

ಕಾರ್ಮಿಕರು ಕೇಳದಿದ್ದರು ಅವರಿಗೆ ನೀಡಲು ಖರೀಧಿಸಿರುವ ಲ್ಯಾಪ್‍ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಠಿಕಾಂಶವುಳ್ಳ ಆಹಾರದ ಕಿಟ್‍ಗಳಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಕೋಟ್ಯಾಂತರ ರೂ.ಗಳ ಅವ್ಯವಹಾರವೆಸಗಿದೆ ಎಂದು ಪ್ರತಿಭಟನಾನಿರತರು ಕಾರ್ಮಿಕ ಇಲಾಖೆ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಶೈಕ್ಷಣಿಕ ಧನ ಸಹಾಯ ಅರ್ಜಿ ಸಲ್ಲಿಕೆ ಅವಧಿಯನ್ನು 2024 ಆ.31 ರವರೆಗೆ ವಿಸ್ತರಿಸಬೇಕು. ನೊಂದಣಿ ಮತ್ತು ಮರು ನೊಂದಣಿಗಾಗಿ ಸಲ್ಲಿಸಿರುವ ಅರ್ಜಿಗಳಲ್ಲಿ ಸಣ್ಣಪುಟ್ಟ ದೋಷಗಳನ್ನು ಹುಡುಕಿ ತಿರಸ್ಕರಿಸಲಾಗುತ್ತಿದೆ. ನೈಜ ಕಾರ್ಮಿಕರ ಅರ್ಜಿಯಲ್ಲಿ ತಪ್ಪುಗಳಿದ್ದರೂ ಅರ್ಜಿಯನ್ನು ಪುರಸ್ಕರಿಸಿ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೆಲವೆಡೆ ಬಿಲ್ಡಿಂಗ್ ಲೈಸೆನ್ಸ್ ಸಲ್ಲಿಸದಿರುವ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಕಾರ್ಮಿಕರಿಗೆ ಆಗುತ್ತಿರುವ ದ್ರೋಹ.

ಪಿಂಚಣಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೆಯಾಗಬೇಕು. ಪಿಂಚಣಿ ಮುಂದುವರಿಕೆಗಾಗಿ ಸಲ್ಲಿಸಲಾಗಿರುವ ಅರ್ಜಿಗಳು ಕೂಡ ವಿಲೆ ಆಗಬೇಕು. ವರ್ಷದ ಹನ್ನೆರಡು ತಿಂಗಳು ಸರಿಯಾಗಿ ಪಿಂಚಣಿ ನೀಡಬೇಕು. ಈ ಸಂಬಂಧ ಹಲವು ದೂರುಗಳನ್ನು ನೀಡಿದ್ದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿ.ಐ.ಟಿ.ಯು. ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಒತ್ತಾಯಿಸಿದರು.

ಬಿ.ಸಿ.ನಾಗರಾಜಚಾರಿ, ಮಂಜುನಾಥ್, ಅಬ್ದುಲ್ಲಾ, ಶ್ರೀಮತಿ ಸಣ್ಣಮ್ಮ, ರಾಘವೇಂದ್ರ, ರಶೀದ್, ಇಸ್ಮಾಯಿಲ್‍ಸಾಬ್, ಶ್ರೀಮತಿ ದ್ರಾಕ್ಷಾಯಣಮ್ಮ, ಸೈಯದ್ ಮುಜ್ಜು, ಮಲ್ಲಿಕಾರ್ಜುನ್, ಶ್ರೀಮತಿ ಚಂದ್ರಮ್ಮ, ಉಮೇಶ್, ಕೆ.ಎನ್.ನಾಗರಾಜ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement