For the best experience, open
https://m.suddione.com
on your mobile browser.
Advertisement

ಚಳ್ಳಕೆರೆ | ಉತ್ತಮ ಶಿಕ್ಷಣ ಪಡೆದು ಹೆತ್ತವರಿಗೆ ಮತ್ತು ಶಾಲೆಗೆ ಕೀರ್ತಿ ತರಬೇಕು : ಡಾ.ಚಿನ್ನಯ್ಯ

11:45 AM Aug 16, 2024 IST | suddionenews
ಚಳ್ಳಕೆರೆ   ಉತ್ತಮ ಶಿಕ್ಷಣ ಪಡೆದು ಹೆತ್ತವರಿಗೆ ಮತ್ತು ಶಾಲೆಗೆ ಕೀರ್ತಿ ತರಬೇಕು   ಡಾ ಚಿನ್ನಯ್ಯ
Advertisement

ಸುದ್ದಿಒನ್, ಚಳ್ಳಕೆರೆ, ಆಗಸ್ಟ್.16 :  ದಿ|| ಪಿ.ಎಂ. ಶಂಕರಣ್ಣ ಇವರ ಸ್ಮರಣಾರ್ಥ ಒಂದು ಲಕ್ಷ ರೂಪಾಯಿಗಳ ಹಣವನ್ನು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಮೀಸಲಿಡಲಾಗಿದೆ.  ದಿವಂಗತ ಪಿ.ಎಂ.ಶಂಕರಣ್ಣ ನನ್ನ ಮೆಚ್ಚಿನ ಗುರುಗಳು ಅವರ ಸ್ಮರಣಾರ್ಥ ಸವಿನೆನಪಿಗಾಗಿ ಅವರ  ಸಂಬಂಧಿಕರ ಸಹಕಾರದೊಂದಿಗೆ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಶಾಲೆಗೆ ಒಂದು ಲಕ್ಷ ರೂಪಾಯಿಗಳ ದತ್ತಿ ನಿಧಿಯನ್ನು ಹೂಡಿಕೆ ಮಾಡಲಾಗಿದೆ ಎಂದು ದಾಸರಮುತ್ತೇನಹಳ್ಳಿಯ ವಾಸಿ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಚಿನ್ನಯ್ಯ ಹೇಳಿದರು.

Advertisement
Advertisement

ನಾಯಕನಹಟ್ಟಿ ಸಮೀಪದ  ರೇಖಲಗೆರೆ ಲಂಬಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ದತ್ತಿ ನಿಧಿಯಿಂದ ಬರುವ ವಾರ್ಷಿಕ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಎಸ್ ಎಸ್ ಎಲ್ ಸಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾದ ಈ ಶಾಲೆಯ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 6000 ರೂಪಾಯಿಗಳ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭೆಯಲ್ಲಿ  ಮುಂದು ಹಾಗೂ ಉನ್ನತ ಶಿಕ್ಷಣ ಪಡೆದು ಸಮಾಜದ ಬದಲಾವಣೆ ಮಾಡುವ ಉತ್ತಮ ಪ್ರಜೆಗಳಾಗಿ ಹೊರ ಬರಬೇಕು. ಆಗ ಮಾತ್ರ ನಾವು ಪಡೆದುಕೊಂಡ ಶಿಕ್ಷಣ, ನಮ್ಮ ಹೆತ್ತವರ ಶ್ರಮಕ್ಕೆ ಸಾರ್ಥಕತೆ ಬರುತ್ತದೆ. ಹೆತ್ತವರು ತಮ್ಮ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ನಿರಂತರವಾಗಿ ಶಾಲೆಗೆ ಮಕ್ಕಳನ್ನು ಕಳಿಸಬೇಕು. ಆಗ ಮಾತ್ರ ಮಕ್ಕಳು ಪಾಠ ಪ್ರವಚನಗಳಲ್ಲಿ ಕಲಿಕಾಸಾಧನೆ ಮಾಡಲು ಸಾಧ್ಯ, ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು. ಅವರು ನಿಮ್ಮ ಮಕ್ಕಳ ಭವಿಷ್ಯ ನಿರ್ಮಿಸಲು ಶಾಲೆಯಲ್ಲಿ ಕಾಯುತ್ತಿರುತ್ತಾರೆ. ಒಂದು ದಿನದ ಪಾಠ ವಂಚಿತವಾದರು ಕೂಡ ಅವರ ಜೀವನದಲ್ಲಿ ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ದೊಡ್ಡ ನಷ್ಟವೇ ಆಗಿಬಿಡುತ್ತದೆ ಎಂದು ಪೋಷಕರಿಗೆ ತಿಳಿಸಿದರು.

Advertisement

ದೇಶ ನನಗೇನು ಕೊಟ್ಟಿದೆ ಎನ್ನುವ ಬದಲು ನಾನು ದೇಶಕ್ಕೆ ಏನನ್ನು ಕೊಡಬೇಕು ಎನ್ನುವ ಆಲೋಚನೆಯಲ್ಲಿ ಉತ್ತಮ ಶಿಕ್ಷಣ ಪಡೆದು ಹೆತ್ತವರಿಗೆ ಶಾಲೆಗೆ ಕೀರ್ತಿ ತರಬೇಕೆಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಈ ಶಾಲೆಯ ಶಿಕ್ಷಕರು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಇಂದು ಜಿಲ್ಲೆಯಲ್ಲಿಯೇ ಉತ್ತಮ ಶಾಲೆಯಾಗಿ ಹೊರ ಹೊಮ್ಮಿದೆ. ಸಮಾಜದ ಬದಲಾವಣೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

Advertisement

ದತ್ತಿ ನಿಧಿ ಟ್ರಸ್ಟ್ ನ ಪ್ರಮುಖರಲ್ಲಿ ಒಬ್ಬರಾದ  ಓಬಯ್ಯನಹಟ್ಟಿ ಗ್ರಾಮದ ಪ್ರವೀಣ್ ಮಾತನಾಡಿ ದಿವಂಗತ ಪಿ.ಎಂ.ಶಂಕರಣ್ಣ  ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಇದ್ದಾಗ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅವರು ಕೈಗೊಂಡಿದ್ದ ಕಾರ್ಯಯೋಜನೆಗಳನ್ನು, ವಿದ್ಯಾರ್ಥಿಗಳ ಕಲಿಕೆಗಾಗಿ ಅವರನ್ನು ಅಭಿಪ್ರೇರಣೆ ಗೊಳಿಸುತ್ತಿದ್ದ ರೀತಿ,ನಿರಂತರ ಹಾಜರಾತಿಗಾಗಿ ಕೈಗೊಂಡಿದ್ದ ವಿನೂತನ ಚಟುವಟಿಕೆಗಳನ್ನು ಸ್ಮರಿಸಿಕೊಂಡು ಭಾವುಕರಾಗಿ ಮಾತನಾಡುತ್ತಾ ಈ ದತ್ತಿ ನಿಧಿಯಿಂದ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಅವರಿಗೆ ಉತ್ತಮ ಶಿಕ್ಷಣ ಪಡೆಯುವಲ್ಲಿ ಸಣ್ಣ ಸಹಾಯ ಮಾಡುವ ಉದ್ದೇಶ, ಈ ಕೆಲಸ ಪ್ರತಿ ವರ್ಷವೂ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ವೆಂಕಟೇಶ್ ಮಾತನಾಡಿ, ಪ್ರಪ್ರಥಮ ಬಾರಿಗೆ ಸಾರ್ವಜನಿಕರಿಂದ ದೊಡ್ಡ ಪ್ರಮಾಣದ ಹಣವು ನಮ್ಮ ಶಾಲೆಗೆ ಹೂಡಿಕೆ ಮಾಡಿರುವುದು ಶ್ಲಾಘನೀಯ, ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಉತ್ತಮ ಅಧ್ಯಯನಕ್ಕೆ ಅವರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾಗಭೂಷಣ್ ಮಾತನಾಡಿ, ಸರ್ಕಾರ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಯೋಜನೆಯನ್ನು  ರೂಪಿಸಿದೆ. ತಾವು ಕಲಿತ ಶಾಲೆಗೆ ಹಾಗೂ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ನೆರವನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಅಲ್ಲದೆ ನಮ್ಮ ಶಾಲಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವನ್ನು ನೀಡುವ ಪ್ರಯತ್ನ ಮಾಡಿದ ಡಾ. ಚಿನ್ನಯ್ಯ ಹಾಗೂ ಪ್ರವೀಣ್ ಇವರು ಇತರ ಪೋಷಕರಿಗೆ ಮಾದರಿಯಾಗುವಂತ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿ ತಮ್ಮ ಗುರುಗಳ ಸವಿನೆನಪಿಗಾಗಿ ಅವರ ಸೇವೆಯನ್ನು ಶಾಶ್ವತಗೊಳಿಸಿದ ಕಾರ್ಯವೇ ಈ ದತ್ತಿ ನಿಧಿಯ ಹೂಡಿಕೆ. ಇದು ನಮ್ಮೆಲ್ಲರಿಗೂ ಪ್ರೇರಣೆ ಕಾರ್ಯ. ಪೋಷಕರು ಇದೆ ತರ ಮುಂದೆ ಬಂದು ಶಾಲೆಯ ಮಕ್ಕಳ ಶಿಕ್ಷಣದ ವಿಕಾಸಕ್ಕೆ ಕೈ ಜೋಡಿಸಬೇಕೆಂದು ಹೇಳಿದರು.

ದಿವಂಗತ ಪಿ.ಎಂ ಶಂಕರಣ್ಣ ಇವರ  ಸ್ಮರಣಾರ್ಥ ದತ್ತಿನಿಧಿ ಟ್ರಸ್ಟ್ ವತಿಯಿಂದ 2022-23 ಮತ್ತು 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದ ರೇಖಲಗೆರೆ ಲಂಬಾಣಿ ಹಟ್ಟಿ ಗ್ರಾಮದ ಕುಮಾರಿ ಸಾಂಚಿತ  ಮತ್ತು ಓಬಯ್ಯನ ಹಟ್ಟಿ ಗ್ರಾಮದ ಸಂಗೀತ ವಿದ್ಯಾರ್ಥಿನಿಯರಿ ಗೆ ತಲಾ 6000 ರೂಪಾಯಿಗಳ  ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಟ್ರಸ್ಟ್ ವತಿಯಿಂದ ಮಾಡಲಾಯಿತು. ಮತ್ತು ದ್ವಿತೀಯ ಸ್ಥಾನ ಪಡೆದಿದ್ದ  ರಾಜೇಶ್, ತೇಜಸ್ವಿನಿ   ಹಾಗೂ ತೃತೀಯ ಸ್ಥಾನ ಪಡೆದಿದ್ದ ಪೂರ್ಣಿಮ , ನೀಲಾಂಬಿಕೆ  ವಿದ್ಯಾರ್ಥಿಗಳೂ ಕೂಡ ಈ ಸಂದರ್ಭದಲ್ಲಿ 1500 ರೂಪಾಯಿಗಳ  ನಗದು ಬಹುಮಾನ ವಿತರಣೆ ಮಾಡಿ ಪುರಸ್ಕಾರ ಮಾಡಲಾಯಿತು.

ಈ ಸಂಧರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಂಗನಾಥ್, ಎಸ್ ಡಿ ಎಂ ಸಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ನಾಯ್ಕ, ಜಯಣ್ಣ, ಶಿಕ್ಷಕರಾದ ಜಗದೀಶ್, ವೀರಭದ್ರಪ್ಪ, ಓಂಕಾರಪ್ಪ,ಶಿವಕುಮಾರ್, ರಂಜಿತ, ರಮ್ಯ, ಗಿಡ್ಡಯ್ಯ, ಗೌರಮ್ಮ, ನೃತ್ಯ ಸಂಯೋಜಕ ಕುಬೇರ, ಪೋಷಕರು,  ವಿದ್ಯಾರ್ಥಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.

Tags :
Advertisement