For the best experience, open
https://m.suddione.com
on your mobile browser.
Advertisement

ಇಂಗ್ಲಿಷ್ ಭಾಷೆಯನ್ನು ಕಲಿಯುವುದರಿಂದ ವಿಶ್ವದ ಇತರೆ ಎಲ್ಲ ಕ್ಷೇತ್ರಗಳ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ : ಜಿ.ಎಸ್. ಅನೀತ್ ಕುಮಾರ್

04:01 PM Dec 23, 2023 IST | suddionenews
ಇಂಗ್ಲಿಷ್ ಭಾಷೆಯನ್ನು ಕಲಿಯುವುದರಿಂದ ವಿಶ್ವದ ಇತರೆ ಎಲ್ಲ ಕ್ಷೇತ್ರಗಳ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ   ಜಿ ಎಸ್  ಅನೀತ್ ಕುಮಾರ್
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.23 : ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಪ್ರೌಢಿಮೆಯ ಅವಶ್ಯಕತೆಯಿದೆ. ಇಂಗ್ಲಿಷ್ ಭಾಷೆಯನ್ನು ಕಲಿಯುವುದರಿಂದ ವಿಶ್ವದ ಇತರೆ ಎಲ್ಲ ಕ್ಷೇತ್ರಗಳ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಯುವ ಮುಖಂಡ ಹಾಗೂ ಭೀಮೇಶ್ವರ ಬಾಲ ವಿಕಾಸ ಸಂಸ್ಥೆಯ ನಿರ್ದೇಶಕ ಜಿ.ಎಸ್. ಅನೀತ್ ಕುಮಾರ್ ಅಭಿಪ್ರಾಯಪಟ್ಟರು.

ಭೀಮಸಮುದ್ರದ ಭೀಮೇಶ್ವರ ಬಾಲ ವಿಕಾಸ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ತಿಂಗಳ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 21 ನೇ ಶತಮಾನದಲ್ಲಿ ಇಂಗ್ಲಿಷ್ ವಿಶ್ವದ ಅಗ್ರ ಮಾನ್ಯ ಭಾಷೆಗಳಲ್ಲಿ ಒಂದಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ಕಲಿತುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತ ದಿನಮಾನಗಳಲ್ಲಿ ಪೋಷಕರು ಸಹ ಮಕ್ಕಳ ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ನಗರ ಪ್ರದೇಶಗಳಿಂದ ದೂರದಲ್ಲಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂದಿಗೂ ಇಂಗ್ಲಿಷ್ ಭಾಷೆಯನ್ನು ಅತ್ಯುತ್ತಮವಾಗಿ ಓದಲು, ಬರೆಯಲು ಸಾಧ್ಯವಾಗುತ್ತಿಲ್ಲ. ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಸಂಸ್ಥಾಪಕರಾದ ಯೋಗೀಶ್ ಸಹ್ಯಾದ್ರಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಒಂದು ತಿಂಗಳ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಲಿದೆ ಮತ್ತು ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.

Advertisement

ಇಂಗ್ಲಿಷ್ ಭಾಷಾ ಕಲಿಕಾ ಶಿಬಿರದ ಸಂಪನ್ಮೂಲ ವ್ಯಕ್ತಿ ಹಾಗು ಚಿತ್ರದುರ್ಗದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮಾತನಾಡಿ, ಪ್ರತಿಯೊಂದು ಮಗುವಿಗೂ ವಿಶೇಷವಾದ ಆಸಕ್ತಿ ಹಾಗು ಕೌಶಲ್ಯ ಇರುತ್ತದೆ. ಅವುಗಳ ಜೊತೆಗೆ ಇಂಗ್ಲಿಷ್ ಭಾಷಾ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶವಿರುತ್ತದೆ. ವಿಶ್ವದ ಇತರ ಭಾಷೆಗಳನ್ನು ಕಲಿತು ಅನೇಕ ಅವಕಾಶಗಳನ್ನು ಬಳಸಿಕೊಳ್ಳುವುದರ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಯುವಕರಿಗೆ ಆದರ್ಶಪ್ರಾಯವಾಗಿರುವ ಉದಾಹರಣೆಗಳಿವೆ. ಮಾತೃಭಾಷೆಯ ಸಹಾಯದಿಂದ ಯಾವ ಭಾಷೆಯನ್ನಾದರೂ ಕಲಿಯಬಹುದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಟಿ.ಜಿ. ದೇವಕುಮಾರ್ ಅವರು ಇಂದಿನ ಶೈಕ್ಷಣಿಕ ಸಂದರ್ಭದಲ್ಲಿ ಈ ರೀತಿಯ ವಿನೂತನ ಸ್ಪೋಕನ್ ಇಂಗ್ಲಿಷ್ ವಿಶೇಷ ಕಾರ್ಯಾಗಾರಗಳು ಹಾಗು ಶಿಬಿರಗಳ ಅವಶ್ಯಕತೆಯಿದೆ. ಇಂಥಹ ವಿಶಿಷ್ಟವಾದ ಅವಕಾಶಗಳನ್ನು ಭೀಮಸಮುದ್ರದ ಮಕ್ಕಳಿಗೆ ಕಲ್ಪಿಸಿಕೊಡುವಲ್ಲಿ ನಮ್ಮ ಸಂಸ್ಥೆಯು ಬಹಳ ವರ್ಷಗಳಿಂದ ಶ್ರಮಿಸುತ್ತಿದೆ. ಇದೀಗ ಚಿತ್ರದುರ್ಗದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ವತಿಯಿಂದ ಯೋಗೀಶ್ ಸಹ್ಯಾದ್ರಿಯವರು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡು ಈ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲು ಮುಂದಾಗಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಭೀಮೇಶ್ವರ ಬಾಲ ವಿಕಾಸ ಶಾಲೆಗಳ ಕಾರ್ಯದರ್ಶಿ ಎ.ಎಂ. ಧನ್ಯಕುಮಾರ್, ನಿರ್ದೇಶಕ ಶರತ್ ಪಟೇಲ್, ಆಡಳಿತಾಧಿಕಾರಿ ಹೆಚ್. ಮಂಜಣ್ಣ, ಬಾಲ ವಿಕಾಸ ಶಾಲೆಯ ಮುಖ್ಯೋಪಾಧ್ಯಾಯ ಹೆಚ್. ನಾಗರಾಜ್, ಶಿಕ್ಷಕರಾದ  ಎಂ ಎನ್ ರಾಮು, ರುದ್ರಪ್ಪ, ರವಿಕುಮಾರ್, ಸುಂದರಮ್ಮ, ಶಿವಮೂರ್ತಿ ಅಂತರವಳ್ಳಿ, ಜ್ಯೋತಿ, ರಾಧಿಕ ಮತ್ತು ಇತರೆ ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕರಾದ ಎಂ.ಎನ್. ರಾಮು ಕಾರ್ಯಕ್ರಮ ನಿರೂಪಿಸಿದರು, ಹೆಚ್. ನಾಗರಾಜ್ ಸ್ವಾಗತಿಸಿದರು, ಹೆಚ್. ಮಂಜಣ್ಣ ವಂದಿಸಿದರು.

Tags :
Advertisement