Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸ್ವಚ್ಛ ಹಾಗೂ ಸುಂದರ ಚಿತ್ರದುರ್ಗ ನಗರ ನಿರ್ಮಾಣಕ್ಕೆ ಪಣತೊಡಿ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ

04:29 PM Feb 07, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ. ಫೆ.07:   ಸ್ವಚ್ಛ ಹಾಗೂ ಸುಂದರ ಚಿತ್ರದುರ್ಗ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಗರಸಭೆ ಸಿಬ್ಬಂದಿ, ನೌಕರರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಚಿತ್ರದುರ್ಗ ನಗರಸಭೆ ವತಿಯಿಂದ ನಗರಸಭೆ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪೌರಕಾರ್ಮಿಕರಿಂದ ಪೌರಾಯುಕ್ತರವರೆಗೂ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂದು ಭಾವಿಸಿ, ಕೆಲಸ ಮಾಡಿದಾಗ ಮಾತ್ರ ನಗರಕ್ಕೆ ಹಾಗೂ ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಲಿದ್ದು, ಅಂತಹ ನಗರ ಸುಂದರ ನಗರವನ್ನಾಗಿ ಕಾಣಲು ಸಾಧ್ಯವಾಗಲಿದೆ. ನಗರದ ತೇರು ಎಳೆಯಲು ನಗರಸಭೆ ಸಿಬ್ಬಂದಿಗಳು, ನೌಕರರೆಲ್ಲರೂ ಸಾರಥಿಗಳಾಗಬೇಕು.  ನಗರಸಭೆ ಸಿಬ್ಬಂದಿಗಳು, ನೌಕರರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಕಂದಾಯ ಇಲಾಖೆ ಹಾಗೂ ನಗರಸಭೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಮನೆ ಸೇರಿದಂತೆ ಮೂಲಸೌಕರ್ಯಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.  ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ನೌಕರರು ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನೌಕರರು ಸಮನ್ವಯತೆಯಿಂದ ತಾವುಗಳು ಕಾರ್ಯನಿರ್ವಹಿಸಿದಲ್ಲಿ ನಗರವನ್ನು ಸುಂದರ ಹಾಗೂ ಸ್ವಚ್ಛ ನಗರವನ್ನಾಗಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ನಗರಸಭೆ ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಕೊಡುವ ಜವಾಬ್ದಾರಿ ಹೊತ್ತ ಸಂಸ್ಥೆಯಾಗಿದೆ. ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಈಚೆಗೆ ಜರುಗಿದ ಅಹಿತಕರ ಪ್ರಕರಣದಿಂದಾಗಿ ರಾಜ್ಯದ ಎಲ್ಲ ನಗರಸ್ಥಳೀಯ ಸಂಸ್ಥೆಗಳು ಎಚ್ಚೆತ್ತು ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ, ಜಲಸಂಗ್ರಹಾರಗಳ ಸ್ವಚ್ಛತೆ ಸೇರಿದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕ್ರಮ ವಹಿಸಲಾಗಿದೆ,  ಅಧಿಕಾರಿ, ಸಿಬ್ಬಂದಿಗಳು ಮುಂಜಾಗ್ರತಾ ಕ್ರಮ ವಹಿಸಿದಲ್ಲಿ, ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಬಹುದು ಎಂದು ತಿಳಿಸಿದ ಅವರು,  ಮುಂದಿನ ದಿನಗಳಲ್ಲಿ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಿತ್ರದುರ್ಗ ನಗರವೂ ಸ್ಥಾನ ಪಡೆಯುವಂತೆ ಪಣತೊಡಬೇಕು ಎಂದು ಸಲಹೆ ನೀಡಿದರು.

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, ನಗರಸಭೆ ಸಿಬ್ಬಂದಿ, ನೌಕರರಿಗೆ ಜ್ಞಾನ, ಕೌಶಲ್ಯ, ಕಾರ್ಯದಕ್ಷತೆ ಮತ್ತು ಮನೋಭಾವದಲ್ಲಿನ ಬದಲಾವಣೆ ಹಾಗೂ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉತ್ತೇಜಿಸುವ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ನಡೆಯಾಗಿದ್ದು, ಇದು ಅತ್ಯಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ನಗರಸಭೆ ಸಿಬ್ಬಂದಿಗಳು ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು. ಸಿಬ್ಬಂದಿಗಳು ತಮಗೆ ವಹಿಸಿದ ಕೆಲಸವನ್ನು ಅತೀ ತುರ್ತಾಗಿ, ಕಾಳಜಿಯಿಂದ ನಿರ್ವಹಿಸಿದರೆ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರರಾಗತ್ತಾರೆ. ನಗರದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನಿಗಧಿತ ಸಮಯಕ್ಕೆ, ಸಮರ್ಪಕವಾಗಿ ಒದಗಿಸಬೇಕು ಎಂದು ತಿಳಿಸಿದರು.

ಚಿತ್ರದುರ್ಗ ನಗರಸಭೆಯ ಎಲ್ಲಾ ವಿಭಾಗಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಸಿಬ್ಬಂದಿಯು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಇಂಟರ್ ನ್ಯಾಷನಲ್ ಮೋಟಿವೇಟರ್ ಬೆಂಗಳೂರಿನ  ಡಾ.ಬಿ.ಎಸ್. ಗುರುದಕ್ಷಿಣ್ ಅವರು ಕಚೇರಿ ನಿರ್ವಹಣೆಯಲ್ಲಿ ಸಿಬ್ಬಂದಿಗಳ ಪಾತ್ರ, ಸಾರ್ವಜನಿಕರೊಂದಿಗೆ ಸಂವಹನ ಮತ್ತು ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಮೈಸೂರು ಎಟಿಐ  ನಿವೃತ್ತ ತರಬೇತಿ ಸಂಯೋಜಕ ಜಿ.ಎಂ.ಸರ್ವೇಶ್ ಅವರು ನೀರಿನ ನಿರ್ವಹಣೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಉಪನ್ಯಾಸ ನೀಡಿದದರು.

ಕಾರ್ಯಕ್ರಮದಲ್ಲಿ ನಗರಸಭೆ ವ್ಯವಸ್ಥಾಪಕಿ ಮಂಜುಳಾ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement
Tags :
Additional District Collector BT KumaraswamyBe committedBuildingchitradurgaChitradurga cityChitradurga Municipal Councilclean and beautifulsuddionesuddione newsಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿಚಿತ್ರದುರ್ಗಚಿತ್ರದುರ್ಗ ನಗರಚಿತ್ರದುರ್ಗ ನಗರಸಭೆನಿರ್ಮಾಣಸುಂದರಸುದ್ದಿಒನ್ಸುದ್ದಿಒನ್ ನ್ಯೂಸ್ಸೂಚನೆಸ್ವಚ್ಛ
Advertisement
Next Article