For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಸಿಟಿ ಇನ್ಸ್ಟಿಟ್ಯೂಟ್ ನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರ ಆಗ್ರಹ

09:32 PM Jul 19, 2024 IST | suddionenews
ಚಿತ್ರದುರ್ಗ ಸಿಟಿ ಇನ್ಸ್ಟಿಟ್ಯೂಟ್ ನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ   ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರ ಆಗ್ರಹ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 19 :  ಚಿತ್ರದುರ್ಗ ಸಿಟಿ ಇನ್ಸ್ಟಿಟ್ಯೂಟ್ ನ ಗೌರವಕ್ಕೆ ಧಕ್ಕೆಯುಂಟು ಮಾಡಿ ಸಂಸ್ಥೆಯ ಎಲ್ಲಾ ಕಾಯ್ದೆ, ಕಲಂಗಳನ್ನು ಉಲ್ಲಂಘಿಸಿ ಸಂಸ್ಥೆಯ ಹಾಗೂ ಸದಸ್ಯರ ಗೌರವಕ್ಕೆ ಧಕ್ಕೆಯುಂಟು ಮಾಡಿ ಸಂಸ್ಥೆಗೆ ಕೋಟ್ಯಾಂತರ ರೂಪಾಯಿಗಳು ನಷ್ಟ ಉಂಟು ಮಾಡಿರುವವರ ಮೇಲೆ ಕಾನೂನು ರೀತ್ಯ ಕ್ರಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಸಂಸ್ಥೆಗೆ ಉಂಟಾಗಿರುವ ಕೋಟ್ಯಾಂತರ ರೂ.ಗಳ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಚಿತ್ರದುರ್ಗ ಸಿಟಿ ಇನ್ಸ್ಟಿಟ್ಯೂಟ್ ಸದಸ್ಯರು ಆಗ್ರಹಿಸಿದ್ದಾರೆ.

Advertisement

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಿತ್ರದುರ್ಗ ಸಿಟಿ ಇನ್ಸ್ಟಿಟ್ಯೂಟ್ ನ ಹಿರಿಯ ಸದಸ್ಯರಾದ ವೆಂಕಟಶಿವರೆಡ್ಡಿಯವರು, ಈ ಸಂಸ್ಥೆಗೆ ಪ್ರತಿ 2 ವರ್ಷಕ್ಕೊಮ್ಮೆ ಚುನಾವಣೆಯ ಮೂಲಕ ಆಡಳಿತ ಮಂಡಳಿಗೆ ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ 7 ಜನ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಗೂ ಈ ಸಂಸ್ಥೆಗೆ ಜಿಲ್ಲಾಧಿಕಾರಿಗಳು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.

Advertisement

ಆದರೆ ದಿನಾಂಕ:23-02-2020 ರಂದು ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಸದರಿ ಆಡಳಿತ ಮಂಡಳಿಗೆ ಉಪಾಧ್ಯಕ್ಷರಾಗಿ ಎಂ.ವಿ.ಸೇತುರಾಂ, ಕಾರ್ಯದರ್ಶಿಯಾಗಿ ಬಿ.ಚಿತ್ರಲಿಂಗಪ್ಪ, ಹಾಗೂ ಖಜಾಂಚಿಯಾಗಿ ವಿ.ಎನ್. ಅಜಿತ್ ಕುಮಾರ್ ಜೈನ್ ಹಾಗೂ ಇತರೆ 7 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದರು, ಆದರೆ ಈ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ, ಮಾಜಿ ಉಪಾಧ್ಯಕ್ಷರಾದ ಎಂ.ಎ.ಸೇತುರಾಂ ಹಾಗೂ ಮಾಜಿ ಖಜಾಂಚಿಗಳಾದ ಅಜಿತ್‍ಕುಮಾರ್ ಜೈನ್ ಇವರುಗಳು ಸಂಸ್ಥೆಯಲ್ಲಿ ಸಂಸ್ಥೆಯ ಬೈಲಾವನ್ನು ಉಲ್ಲಂಘನೆ ಮಾಡಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರಗಳನ್ನು ಮಾಡಿರುತ್ತಾರೆ ಎಂದು ದೂರಿದರು.

ಮಾಜಿ ಕಾರ್ಯದರ್ಶಿ, ಮಾಜಿ ಉಪಾಧ್ಯಕ್ಷ ಹಾಗೂ ಖಜಾಂಚಿ ರವರು ಸಂಸ್ಥೆಯ ಆ ಬೈಲವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸುಮಾರು 177 ಸದಸ್ಯರುಗಳಿಗೆ ಸದಸ್ಯತ್ವವನ್ನು ನೀಡಿರುತ್ತಾರೆ. ಸದಸ್ಯತ್ವವನ್ನು ನೀಡಲು ಒಬ್ಬ ಸದಸ್ಯರಿಂದ ರೂ:1,62,000-00 ಗಳನ್ನು ಪಡೆದುಕೊಂಡಿರುತ್ತಾರೆ. ಸಂಸ್ಥೆಗೆ ಯಾವುದೇ ರೀತಿಯ ಹಣವನ್ನು ಪಾವತಿಸಕೊಳ್ಳಬೇಕಾದಲ್ಲಿ ಆರ್.ಟಿ.ಜಿ.ಎಸ್. ಅಥವಾ ಚೆಕ್ ಮೂಲಕ ಪಾವತಿಸಿಕೊಳ್ಳಬೇಕಾಗಿರುತ್ತದೆ. ಆದರೆ ಸದರಿ ವ್ಯಕ್ತಿಗಳು ಸುಮಾರು 55 ಸದಸ್ಯರ ಹತ್ತಿರ ನೇರವಾಗಿ ನಗದು ಹಣ ಪಡೆದುಕೊಂಡು ಸದಸ್ಯತ್ವ ನೀಡಿರುತ್ತಾರೆ. ಇದು ಕಾನೂನುಬಾಹಿರವಾಗಿರುತ್ತದೆ. ಹಾಗೂ ಅಕ್ರಮವಾಗಿರುತ್ತದೆ. ಸಂಸ್ಥೆಯಲ್ಲಿ ಕಾರ್ಯದರ್ಶಿ ಯವರಿಗೆ ಕೇವಲ 25,000-00 ರೂ.ಗಳನ್ನು ಇಟ್ಟುಕೊಳ್ಳಲು ಮಾತ್ರ ಅವಕಾಶವಿರುತ್ತದೆ. ದೊಡ್ಡಮೊತ್ತದ ಹಣವನ್ನು ಖರ್ಚು ಮಾಡಬೇಕಾದಲ್ಲಿ ಆಡಳಿತ ಮಂಡಳಿಯ ಸಭೆಯಲ್ಲಿ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಅನುಮೋದನೆ ಪಡೆಯಬೇಕಾಗಿರುತ್ತದೆ. ಪಾಲಿಸದೇ ಕೋಟಿಗಟ್ಟಲೇ ಹಣವನ್ನು ಲೂಟಿ ಮಾಡಿರುತ್ತಾರೆ. ಅದಾವುದೇ ನಿಯಮಗಳನ್ನು ಮತ್ತು ಸಂಸ್ಥೆಯ ಸದಸ್ಯರಿಗೆ ನೀಡಲು ಸುಮಾರು 1000 ಸೂಟ್ ಕೇಟ್‍ಗಳನ್ನು ಯಾವುದೇ ರೀತಿಯ ಟೆಂಡರ್ ಕರೆಯದೇ, ಪತ್ರಿಕಾ ಪ್ರಕಟಣೆ ಹೊರಡಿಸದೇ, ವಾರ್ಷಿಕ ಮಹಾಸಭೆಯ ಅನುಮತಿ ಪಡೆಯದೇ ಲಕ್ಷಾಂತರ ರೂ.ಗಳನ್ನು ನೀಡಿ ಖರೀದಿಸಿರುವುದು ಅಕ್ರಮವಾಗಿರುತ್ತದೆ.

ಸಂಸ್ಥೆಯ 2020-21 ಮತ್ತು 2021-22 ರ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ನಡೆಸದೇ ಬೋಗಸ್ (ನಕಲಿ) ದಾಖಲೆಗಳನ್ನು ಸೃಷ್ಟಿಸಿ ಉಪನಿಬಂಧಕರ ಕಛೇರಿಗೆ ಲೆಕ್ಕಪತ್ರಗಳನ್ನು ನೀಡಿ ಸಂಸ್ಥೆಯ ನವೀಕರಣ ಮಾಡಿಸಿ ರುತ್ತಾರೆ. ವಾರ್ಷಿಕ ಮಹಾಸಭೆಯನ್ನು ನಡೆಸದೇ ಇರುವುದರ ಬಗ್ಗೆ ಸಂಸ್ಥೆಯ ಎಲ್ಲಾ ನಿರ್ದೇಶಕರು ಅಫಿಡವಿಟ್ ಮೂಲಕ ಸಂಬಂಧಪಟ್ಟ ಇಲಾಖೆಗೆ ರಾಜೀನಾಮೆ ಪತ್ರದೊಂದಿಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕರಾದ ತಿಮ್ಮಯ್ಯನವರು ನಕಲಿ ದಾಖಲೆಗಳನ್ನು ನೀಡಿರುವುದು ನಿಜವೆಂದು ಪತ್ರದ ಮೂಲಕ ಒಪ್ಪಿಕೊಂಡಿರುತ್ತಾರೆ. ಇದರ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಅಧಿಕಾರಿ ಮಹಂತೇಶ್ ರವರನ್ನು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿರುತ್ತಾರೆ. ಮಹಂತೇಶ್ ರವರು ಸಂಪೂರ್ಣವಾಗಿ ತನಿಖೆ ನಡೆಸಿ ತಮ್ಮ ವರದಿಯಲ್ಲಿ ಸಂಸ್ಥೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಆಡಳಿತ ನಡೆಸಿರುವುದು ಮತ್ತು ಹಣಕಾಸಿನ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗೆ ವರದಿ ಸಲ್ಲಿಸಿರುತ್ತಾರೆ. ತದ ನಂತರ ಸಹಕಾರ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್‍. ಕೆ.ಜಿ. ರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿರುತ್ತಾರೆ.

ಪ್ರತಿಷ್ಠಿತ ಸಂಸ್ಥೆಯ ಗೌರವಕ್ಕೆ ಧಕ್ಕೆಯುಂಟು ಮಾಡಿ ಸಂಸ್ಥೆಯ ಎಲ್ಲಾ ಕಾಯ್ದೆ, ಕಲಂಗಳನ್ನು ಉಲ್ಲಂಘಿಸಿ ಸಂಸ್ಥೆಯ ಹಾಗೂ ಸದಸ್ಯರ ಗೌರವಕ್ಕೆ ಧಕ್ಕೆಯುಂಟು ಮಾಡಿ ಸಂಸ್ಥೆಗೆ ಕೋಟ್ಯಾಂತರ ರೂಪಾಯಿಗಳು ನಷ್ಟ ಉಂಟು ಮಾಡಿರುವವರ ಮೇಲೆ ಕಾನೂನುರೀತ್ಯ ಕ್ರಮ ಅಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಸಂಸ್ಥೆಗೆ ಉಂಟಾಗಿರುವ ಕೋಟ್ಯಾಂತರ ರೂ.ಗಳ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡಿಕೊಳ್ಳಲು ಕ್ರಮ ಕೈಗೊಂಡು ಸಂಸ್ಥೆಯ ಗೌರವ ಹಾಗೂ ಘನತೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.

ಗೋಷ್ಟಿಯಲ್ಲಿ ಸದಸ್ಯರಗಳಾದ ಜಯ್ಯಣ್ಣ, ವಾಸುದೇವರೆಡ್ಡಿ, ಆನಂದ್, ಮನೋಹರ್, ಮಂಜುನಾಥ್, ವೆಂಕಟೇಶ್, ದೇಚರಾಜ್, ಖಾದರ್ ಖಾನ್, ಸಂಪತ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement