For the best experience, open
https://m.suddione.com
on your mobile browser.
Advertisement

ಕನಕ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ : ಆರ್ಥಿಕ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ : ಹೆಚ್.ಎನ್.ಲೋಕೇಶ್

06:17 PM Sep 24, 2024 IST | suddionenews
ಕನಕ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ   ಆರ್ಥಿಕ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ   ಹೆಚ್ ಎನ್ ಲೋಕೇಶ್
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಜಿಲ್ಲೆಯ ಜನರ ಸಹಕಾರ ಮತ್ತು ಕನಕ ಪತ್ತಿನ ಸಹಕಾರ ಸಂಘದ ಸದಸ್ಯರು ಸಂಪೂರ್ಣ ಬೆಂಬಲ ನೀಡದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕನಕ ಪತ್ತಿನ ಸಹಕಾರ ಸಂಘವನ್ನು ಆರ್ಥಿಕವಾಗಿ ಅಭಿವೃದ್ದಿ ಪಡಿಸಲು ಎಲ್ಲಾ ರೀತಿಯ ಪ್ರಯತನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಹೆಚ್.ಎನ್.ಲೋಕೇಶ್ ಭರವಸೆ ನೀಡಿದರು.

Advertisement
Advertisement

ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ನಮಸ್ತೆ ದುರ್ಗ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕನಕ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಈ ಸಂಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಉದ್ದೇಶಿಸಿದ್ದೇನೆ. ಅದಕ್ಕಾಗಿ ಎಲ್ಲರ ಸಹಕಾರವೂ ಅಗತ್ಯವಿದೆ ಎಂದರು.

ಚಿತ್ರದುರ್ಗ ನಗರ ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿದೆ. ವಾಣಿಜ್ಯ ಚಟುವಟಿಕೆಗಳು, ಬ್ಯಾಂಕಿಂಗ್ ವ್ಯವಹಾರ, ಕೃಷಿ ಚಟುವಟಿಕೆ ಮತ್ತು ಸಣ್ಣ ಸಣ್ಣ ಕೈಗಾರಿಕಾ ಘಟಕಗಳು ಇಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ನಾವು ಪ್ರಯತ್ನ ಪಟ್ಟರೆ ಸಂಸ್ಥೆಯನ್ನು ಸದೃಢವಾಗಿ ಕಟ್ಟಲು ಭರವಸೆ ಮೂಡುತ್ತದೆ. ಅದು ಏನೇ ಇದ್ದರೂ ಎಲ್ಲರೂ ಸಹಕಾರ ನೀಡಿ ಬ್ಯಾಂಕಿನ ಬೆಳವಣಿಗೆಗೆ ಕಾರಣ ಕರ್ತರಾಗಬೇಕು ಎಂದರು.

Advertisement

ಯಾವುದೇ ಒಂದು ಸಂಸ್ಥೆಯ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಕೇವಲ ಅದ್ಯಕ್ಷರಿಂದ ಸಾಧ್ಯವಾಗದು. ಆಡಳಿತ ಮಂಡಳಿಯ ಸದಸ್ಯರು, ಕಚೇರಿ ಸಿಬ್ಬಂದಿಗಳ ಪಾತ್ರವೂ ಮುಖ್ಯವಾಗುತ್ತದೆ. ಚಿತ್ರದುರ್ಗ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕುರುಬ ಸಮಾಜದ ಬಂಧುಗಳು ಆರ್ಥಿಕವಾಗಿ ಬೆಳೆದಿದ್ದಾರೆ. ಜೊತೆಗೆ ಇತರೆ ಸಮಾಜದವರೂ ಬೆಳೆಯುತ್ತಿದ್ದಾರೆ. ಸಂಘದ ಸದಸ್ಯರುಗಳು ಎಲ್ಲರೊಟ್ಟಿಗೆ ಬೆರೆತು ಅವರಿಂದ ಆರ್ಥಿಕ ವ್ಯವಹಾರ ನಡೆಸಲು ನೆರವಾಗಬೇಕು ಎಂದು ಮನವಿ ಮಾಡಿದರು.

Advertisement

ಈ ಸಂಸ್ಥೆಯನ್ನು ಹಿಂದೆ ಹಲವರು ನಡೆಸಿಕೊಂಡು ಬಂದಿದ್ದಾರೆ. ಅದರಲ್ಲೂ ನಗರ ಸಭೆ ಅಧ್ಯಕ್ಷರಾಗಿದ್ದ ಡಿ.ಮಲ್ಲಿಕಾರ್ಜುನ್ ಅವರು ಈ ಸಂಸ್ಥೆಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಂಸ್ಥೆಗೆ ಆರ್ಥಿಕ ಶಕ್ತಿ ತುಂಬಿದ್ದಾರೆ. ಅವರ ಶ್ರಮವನ್ನು ಯಾರೂ ಮರೆಯಲಾಗದು ಎಂದು ಲೋಕೇಶ್ ಸ್ಮರಿಸಿದರು.

ಸದಸ್ಯರುಗಳು ನಮ್ಮ ಬ್ಯಾಂಕಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ನಡೆಸಬೇಕು. ಒಂದಿಷ್ಟು ಠೇವಣಿಯನ್ನೂ ಇಟ್ಟು ಅಭಿವೃದ್ದಿಗೆ ಸಹಕಾರ ನೀಡಬೇಕು. ಜೊತೆಗೆ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿ ಮಾಡುವಲ್ಲಿಯೂ ಗಮನ ಕೊಡಬೇಕು ಎಂದರು.

ಬ್ಯಾಂಕಿನ ಉಪಾದ್ಯಕ್ಷ ಎನ್.ಓಂಕಾರಪ್ಪ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಕನಕ ಬ್ಯಾಂಕ್ ಈ ವೇಳೆಗಾಗಲೇ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕಿತ್ತು. ಅದಕ್ಕೆ ಸಾಕಷ್ಟು ಅವಕಾಶಗಳು ಸಹ ಇದ್ದವು. ಈಗಲೂ ಕಾಲ ಮಿಂಚಿಲ್ಲ ಎಲ್ಲರೂ ಪ್ರಯತ್ನ ಮಾಡಿದರೆ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಕನಕ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ರಾಮಪ್ಪ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ತುಂಬಾ ಕಷ್ಟು ಪಟ್ಟು ನಾವು ಈ ಸಂಸ್ಥೆಯನ್ನು ಕಟ್ಟಿದ್ದೇವೆ. ಕಳೆದ 22 ವರ್ಷಗಳ ಕಾಲ ಹೇಗೋ ನಡೆದುಕೊಂಡು ಬಂದಿದೆ. ಈಗಲಾದರೂ ಇದಕ್ಕೊಂದು ಕಾಯಕಲ್ಪ ಸಿಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ವಿಶೇಷ ಕಾಳಜಿವಹಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಬ್ಯಾಂಕಿನ ನಿರ್ದೇಶಕ ಸಿ.ಪುಷ್ಪರಾಜ್ ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು 880 ಮಂದಿ ಸದಸ್ಯರಿದ್ದು, ಸುಮಾರು 13 ಲಕ್ಷಕ್ಕೂ ಹೆಚ್ಚು ಷೇರು ಹಣ ಹೊಂದಿದೆ. ಕಳೆದ ಹಲವು ವರ್ಷಗಳಿಂದ ಬ್ಯಾಂಕಿನ ವ್ಯವಹಾರ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಎಲ್ಲಾ ಹಿರಿಯ ಸದಸ್ಯರುಗಳು, ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ಬ್ಯಾಂಕ್ ಪ್ರಗತಿಯತ್ತ ಸಾಗಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕಿನ ಹಿರಿಯ ನಿರ್ದೇಶಕರಾದ ಕೆ.ಬಿ.ರಾಮಪ್ಪ, ಕೆ.ಬಿ.ಕೃಷ್ಣಪ್ಪ, ಎಲ್.ನೀಲಗಿರಿಯಪ್ಪ, ಈ ಅರುಣ್ ಕುಮಾರ್, ಆರ್. ದೊಡ್ಡಲಿಂಗಪ್ಪ, ಎನ್.ಸೋಮಶೇಖರ್, ಸಿ.ಷಣ್ಮುಖಪ್ಪ, ಎಂ.ಎಸ್.ಬಸವರಾಜ್, ಹಾಳಪ್ಪ, ಡಿ.ಶೋಭಾ, ನರಸಿಂಹ ಮೂರ್ತಿ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement