Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

09:58 PM Apr 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

Advertisement

ಚಿತ್ರದುರ್ಗದಲ್ಲಿ ಬುಧವಾರ ಅಭಿಮಾನಿಗಳ ಬಳಗ ಆಯೋಜಿಸಿದ್ದ ಡಾ.ರಾಜಕುಮಾರ್ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಮಾತನಾಡಿದರು.

ಅಣ್ಣಾವ್ರು ಪಾತ್ರ ನಿರ್ವಹಿಸಿದ ಬಹುತೇಕ ಚಲನಚಿತ್ರಗಳು ಸಮಾಜ ಪರಿವರ್ತನೆಗೆ ಕಾರಣವಾಗಿವೆ. ಬಂಗಾರದ ಮನುಷ್ಯ ಚಿತ್ರ ವೀಕ್ಷಿಸಿ ಸಾವಿರಾರು ಯುವಕರು ಕೃಷಿ ಕಡೆ ಮುಖ ಮಾಡಿದ್ದು, ಮದ್ಯಪಾನ ವಿರುದ್ಧ ಚಳವಳಿ ಹೀಗೆ ಅನೇಕ ಸಾಮಾಜಿಕ ಕ್ರಾಂತಿಗಳಿಗೆ ಅಣ್ಣಾವ್ರ ಚಲನಚಿತ್ರಗಳು ಕಾರಣವಾಗಿದ್ದು ಅವರಲ್ಲಿದ್ದ ಬದ್ಧತೆ, ದೂರದೃಷ್ಠಿ ಕಾರಣ ಎಂದರು.

Advertisement

ತಮ್ಮ ಪ್ರತಿ ಪಾತ್ರ, ಪ್ರತಿ ಚಲನಚಿತ್ರ ಜನರ ಬದುಕನ್ನು ಉತ್ತಮಪಡಿಸಬೇಕು, ಮಾನವತ್ವ ವಿಜೃಂಭಿಸಬೇಕು, ನಾಡಿನಲ್ಲಿ ಸೌಹಾರ್ದತೆ ನೆಲೆಯೂರಬೇಕೆಂದು ಅಪೇಕ್ಷೆ ಪಟ್ಟು ಅದರಂತೆ ಬದುಕಿದ ಬಹುದೊಡ್ಡ ನಟ ರಾಜಕುಮಾರ್ ಅವರು ಎಂದು ಹೇಳಿದರು.

ಕನ್ನಡ ನಾಡು, ನುಡಿಗೆ ಸಣ್ಣ ಧಕ್ಜೆ ಎದುರಾದರೂ ಚಳವಳಿಗೆ ಧುಮುಕುತ್ತಿದ್ದ ಅವರಿಗೆ ಡಾ.ವಿಷ್ಣುವರ್ಧನ್, ಅಂಬರೀಶ್ ಸೇರಿ ಇಡೀ ಚಲಚಿತ್ರವೇ ಬೆಂಬಲವಾಗಿ ನಿಲ್ಲುತ್ತಿತ್ತು. ಗೋಕಾಕ್, ಕಾವೇರಿ ಚಳವಳಿ ಈಗಲೂ ಅವಿಸ್ಮರಣೀಯವಾಗಿ ಉಳಿದಿವೆ ಎಂದರು.

ಒಬ್ಬ ನಟ ತನ್ನ ಬದುಕನ್ನು ಕಟ್ಟಿಕೊಳ್ಳುವ ಜೊತೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು ಎಂಬುದಕ್ಕೆ ನಾಡಿನಲ್ಲಿ ರಾಜಣ್ಣ ದಿಗ್ಗಜರಾಗಿ ನಮ್ಮನ್ನು ಎದುರುಗೊಳ್ಳುತ್ತಾರೆ ಎಂದು ಹೇಳಿದರು.

ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಗಳಿಂದ ಬಹುದೊಡ್ಡ ಅವಕಾಶಗಳು ಹುಡುಕಿಕೊಂಡು ಬಂದರೂ ನಯವಾಗಿ ತಿರಸ್ಕರಿಸಿ ಕನ್ನಾಡಂಭೆಗಾಗಿ ನಟನೆ ಮೀಸಲಿಟ್ಟ ಅಣ್ಣಾವ್ರ ಬದುಕು ವಿಸ್ಮಯ ಎಂದರು.

ಜನರು ಮತ್ತು ಜನಪ್ರತಿನಿಧಿಗಳು ಈ ಮೂವರು ಇಂತಹ ಅಪರೂಪ ನಟರ ಬದುಕನ್ನು ಅಧ್ಯಯನ ಮಾಡುವ ಜೊತೆಗೆ ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕಿದೆ. ಡಾ.ರಾಜಕುಮಾರ್ ಅವರಿಂದ ಸರಳತೆ, ಸಜ್ಜನಿಕೆ, ಭಾಷಾಭಿಮಾನ, ವಿಷ್ಣುವರ್ಧನ್ ಅವರಿಂದ ಸ್ನೇಹ, ಪ್ರೀತಿ, ಆಧ್ಯಾತ್ಮಿಕ ಚಿಂತನೆ, ಅಂಬರೀಶ್ ಅವರಿಂದ ಕ್ಷಣಿಕ ಬದುಕಿನಲ್ಲಿ ನೆಮ್ಮದಿಯಾಗಿ ಜೀವಿಸುವುದು, ಹಿಡಿದ ಕೆಲಸವನ್ನು ಜೋರು ಮಾತುಗಳಿಂದ ಮಾಡಿಸಿಕೊಳ್ಳುವುದು. ಹೀಗೆ ಇವರುಗಳು ಸಮಾಜಕ್ಕೆ ನಿಜ ಆಸ್ತಿಯಾಗಿದ್ದಾರೆ ಎಂದರು.

ಅದರಲ್ಲೂ ಡಾ.ರಾಜಕುಮಾರ್ ಅವರ ಧೈರ್ಯ, ಆತ್ಮವಿಶ್ವಾಸ, ಕ್ರೂರಿ ವ್ಯಕ್ತಿಯ ಮನ ಗೆಲ್ಲುವ ರೀತಿ ಅಚ್ಚರಿ. ಅದಕ್ಕೆ ಉತ್ತಮ ಉದಾಹರಣೆ ಅಪಹರಿಸಿದ ವೀರಪ್ಪನ್, ಕೊನೆಗೆ ಅಣ್ಣಾವ್ರಿಗೆ ಶಾಲು ಹೊದಿಸಿ ಕಾಲಿಗೆ ಬಿದ್ದು ಕ್ಷಮೆ ಕೋರಿ ಬಿಡುಗಡೆಗೊಳಿಸಿದ ರೀತಿಯೇ ಸಾಕ್ಷಿ. ಇದು ಅಣ್ಣಾವ್ರ ವ್ಯಕ್ತಿತ್ವಕ್ಕೆ ಕನ್ನಡಿಯಾಗಿದೆ ಎಂದು ಹೇಳಿದರು.

ಈಗಲೂ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಚಲನಚಿತ್ರಗಳು ವೀಕ್ಷಿಸಿದರೇ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿಸುತ್ತದೆ. ಅಣ್ಣ-ತಂಗಿ, ಅಪ್ಪ-ಅಮ್ಮ, ಗಂಡ-ಹೆಂಡತಿ, ನೆರೆಹೊರೆಯವರು ಹೀಗೆ ಎಲ್ಲರೂ ಕೂಡಿ ಬಾಳುವ ಸಂದೇಶ ಅವರ ಚಲನಚಿತ್ರಗಳಲ್ಲಿ ಕಾಣಬಹುದಾಗಿತ್ತು. ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ, ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಅಣ್ಣಾವ್ರ ಚಿತ್ರಗಳು ಮಾದರಿ ಅಗಿವೆ ಎಂದರು.

ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮದ ಮಧ್ಯೆ ಕಂದಕ ಸೃಷ್ಠಿಸುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಾಗಿರುವ ಸಂದರ್ಭ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರು  ಆಯ್ಕೆ ಮಾಡಿಕೊಂಡಂತೆ ಈಗಿನ ನಟರು ಉತ್ತಮ ಕಥೆಯುಳ್ಳ ಚಲನಚಿತ್ರಗಳಲ್ಲಿ ನಟಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ಧತೆ ಪ್ರದರ್ಶಿಬೇಕಿದೆ ಎಂದು ತಿಳಿಸಿದರು.

ಚಿತ್ರದುರ್ಗದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರ ಆದರ್ಶಗಳು ನಮಗೆ ಮಾದರಿ ಆಗಿವೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಕಾರ್ಯಧ್ಯಕ್ಷ ಹಾಲಸ್ವಾಮಿ, ಎನ್.ಎಸ್.ಯುಐ ಘಟಕದ ಜಿಲ್ಲಾಧ್ಯಕ್ಷ ಕಿರಣ್ ಯಾವದ್, ಕಾಂಗ್ರೆಸ್ ಮುಖಂಡರಾದ ರಘು, ಸತೀಶ್, ಕೋಟಿ, ಹರೀಶ್ ಉಪಸ್ಥಿತರಿದ್ದರು.

Advertisement
Tags :
bengaluruBN Chandrappachitradurgahiriyursuddionesuddione newsಚಿತ್ರದುರ್ಗಬಿ.ಎನ್.ಚಂದ್ರಪ್ಪಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article